ಇಂಟರ್ ನ್ಯಾಷನಲ್ ಡಿಸಾಸ್ಟರ್ ರಿಸ್ಕ್ ರಿಡಕ್ಷನ್ ಡೇ: ಆಸ್ಪತ್ರೆಯ ಅಣಕು ಕಾರ್ಯಾಚರಣೆ ಯಶಸ್ವಿ

Prasthutha|

ಮಂಗಳೂರು: ಇಂಟರ್ ನ್ಯಾಷನಲ್ ಡಿಸಾಸ್ಟರ್ ರಿಸ್ಕ್ ರಿಡಕ್ಷನ್ ಡೇ (ಅಂತರಾಷ್ಟ್ರೀಯ ಸಂಭಾವ್ಯ ದುರಂತಗಳ ಮಿತಗೊಳಿಸುವ ದಿನ)ದ ಅಂಗವಾಗಿ ನಿಟ್ಟೆ ಜಸ್ಟಿಸ್ ಕೆ.ಎಸ್. ಹೆಗಡೆ ಚಾರಿಟೇಬಲ್ ಆಸ್ಪತ್ರೆಯ ಬೆಂಕಿ ಹಾಗೂ ಸುರಕ್ಷತಾ ವಿಭಾಗದ ಆಶ್ರಯದಲ್ಲಿ ಆಸ್ಪತ್ರೆ ಕಟ್ಟಡದಲ್ಲಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಆಸ್ಪತ್ರೆಯೊಂದರಲ್ಲಿ ಕೈಗೊಂಡ ಅಣಕು ಕಾರ್ಯಚರಣೆ ಯಶಸ್ವಿಯಾಗಿದೆ.

- Advertisement -

ಅ.13ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಕ್ಷೇಮ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು, ಕೂಡಲೇ ಅಲಾರಾಂ ಧ್ವನಿ ಎಚ್ಚರಿಸಿತು. ಸಿಬ್ಬಂದಿಗಳು ವಾರ್ಡ್ ಗೆ ಆಗಮಿಸಿದರು, ಅಷ್ಟರಲ್ಲಾಗಲೇ ರೋಗಿಗಳು ಹಾಗೂ ಸಂಬಂಧಿಕರು ಓಡಾಡಲು ಆರಂಭಿಸಿದ್ದರು. ಅಗ್ನಿಶಾಮಕ ದಳದವರು ಆಸ್ಪತ್ರೆಗೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು, ಈ ಸಂದರ್ಭದಲ್ಲಿ ಆಸ್ಪತ್ರೆ ಕಟ್ಟಡದ ಎರಡನೇ ಮಹಡಿಯ ಹೊರಗಿನಿಂದ ಎನ್ ಡಿ ಆರ್ ಎಫ್ ತಂಡದ ಸದಸ್ಯರು ಒಳನುಗ್ಗಿ ಅಲ್ಲಿನ ರೋಗಿಗಳನ್ನು ಕೆಳಗಿಳಿಸುವ ಕಾರ್ಯದಲ್ಲಿ ತೊಡಗಿದರು, ಎರಡು ಗಂಟೆಗಳ ನಡೆದ ಕಾರ್ಯಚರಣೆ ಯಶಸ್ವಿಯಾಯಿತು.

ಈ ಅಣಕು ಕಾರ್ಯಾಚರಣೆಯ ನಂತರ ಆಸ್ಪತ್ರೆಯ ಆವಿಷ್ಕಾರ ಆಡಿಟೋರಿಯಂ ನಲ್ಲಿ ಹಮ್ಮಿಕೊಂಡಿದ್ದ ಸಮರೂಪ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್,  ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಆಸ್ಪತ್ರೆಯಲ್ಲಿ ಎನ್‌.ಡಿ. ಆರ್.ಎಫ್, ಎಸ್.ಡಿ.ಆರ್.ಎಫ್ ಸೇರಿದಂತೆ ವಿವಿಧ ತಂಡಗಳೊಂದಿಗೆ ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ, ಅದು ಯಶಸ್ವಿಯಾಗಿದ್ದು, ಇದು ಮಾದರಿ ಕಾರ್ಯಾಚರಣೆ ಎಂದು ಬಣ್ಣಿಸಿದರು.

- Advertisement -

ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳಾಗುವುದು ಸಹಜ, ಆದರೆ ನೈಜ ದುರಂತಗಳು ಸಂಭವಿಸಿದಾಗ ಅಣಕು ಕಾರ್ಯಾಚರಣೆಯಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ, ಹಾಗಾಗಿ ಈ ರೀತಿಯ ಅಣಕು ಕಾರ್ಯಾಚರಣೆಗಳು ನಡೆಯಬೇಕು ಎಂದರು.

ಜಿಲ್ಲಾ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿ ವಿಜಯಕುಮಾರ್ ಪೂಜಾರಿ, ನಿಟ್ಟೆ ತಾಂತ್ರಿಕ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಜಿ. ಶ್ರೀನಿಕೇತನ್, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಮಹಮ್ಮದ್ ನವಾಜ್, ಎಸ್ ಡಿ ಆರ್ ಎಫ್ ಉಪ ಕಮಾಂಟೆಂಟ್ ಶರತ್, ಎನ್ ಡಿ ಆರ್ ಎಫ್ ಟಿಂ ಕಮಾಂಡರ್ ಶಿಬು ಕುಮಾರ್ ಭಾಗವಹಿಸಿದ್ದರು.

Join Whatsapp