ಮೇಕೆಗಳನ್ನು ಮೇಯಿಸುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಕೊಂದು ಹಾಕಿದ ಹುಲಿ

Prasthutha|

ಮೈಸೂರು: ತಾಲ್ಲೂಕಿನ ಮೂರ್ಬಾಂದ್ ಬೆಟ್ಟದ ಬಳಿ ಆದಿವಾಸಿ ಮಹಿಳೆಯ ಶವ ಇಂದು ಪತ್ತೆಯಾಗಿದ್ದು, ಮೇಕೆಗಳನ್ನು ಮೇಯಿಸುತ್ತಿದ್ದ ಮಹಿಳೆಯನ್ನು ಶನಿವಾರ ಸಂಜೆ ಹುಲಿ ಎಳೆದೊಯ್ದು ಕೊಂದು ಹಾಕಿದ್ದು ಬೆಳಕಿಗೆ ಬಂದಿದೆ.

- Advertisement -

ತಾಲ್ಲೂಕಿನ ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳದಹಾಡಿಯ ಚಿಕ್ಕಮ್ಮ (48) ಮೃತರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರಿಗೆ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ಮಹಿಳೆಯ ಮೇಲೆ ದಾಳಿ ಮಾಡಿದ ಹುಲಿ, ಆಕೆಯನ್ನು ಸುಮಾರು 200 ಮೀಟರ್‌ವರೆಗೆ ಎಳೆದೊಯ್ದಿದೆ. ಅರಣ್ಯ ವೀಕ್ಷಣೆಯ ಟವರ್ ಬಳಿ ಒಂದು ಕಾಲನ್ನು ತಿಂದು ಉಳಿದ ಭಾಗವನ್ನು ಬಿಟ್ಟು ಹೋಗಿದೆ. ಮಹಿಳೆಯೊಂದಿಗೆ ಕುರಿ ಮೇಯಿಸುತ್ತಿದ್ದ ಮತ್ತೊಬ್ಬರು ಗ್ರಾಮಕ್ಕೆ ತೆರಳಿ ಮಾಹಿತಿ ನೀಡಿದಾಗ ಘಟನೆ ನಡೆದಿರುವುದು ಗೊತ್ತಾಗಿದೆ.

- Advertisement -

ಶನಿವಾರ ಮಹಿಳೆಯ ಹುಡುಕಾಟ ನಡೆಸಿದ್ದರಾದರೂ ಕತ್ತಲು ಆವರಿಸಿದ್ದರಿಂದ ಸಿಕ್ಕಿರಲಿಲ್ಲ. ಭಾನುವಾರ ಬೆಳಿಗ್ಗೆ ಪತ್ತೆ ಕಾರ್ಯ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದರು.

ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿಸಿಎಫ್ ಪ್ರಭಾಕರನ್, ಎಸಿಎಫ್ ರವೀಂದ್ರ, ಆರ್‌ಎಫ್‌ಒ ಮಂಜುನಾಥ್ ಬಾಗೇವಾಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು, 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ್ದಾರೆ.

Join Whatsapp