ತೀವ್ರಗೊಂಡ ಪಂಚಮಸಾಲಿ ಸಮುದಾಯದ 2A ಮೀಸಲಾತಿ ಹೋರಾಟ

Prasthutha|

- Advertisement -

ಬೆಂಗಳೂರು : ಲಿಂಗಾಯಿತ ಪಂಚಮಸಾಲಿ 2ಎ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ.
ಹೋರಾಟದ ನೇತೃತ್ವ ವಹಿಸಿರುವ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಮಾರ್ಚ್ 4ರೊಳಗೆ 2ಎ ಮೀಸಲಾತಿ ನೀಡದಿದ್ದರೆ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇಂದಿನಿಂದ ಫ್ರೀಡಂಪಾರ್ಕ್‍ನಲ್ಲಿ ಸತ್ಯಾಗ್ರಹ ಆರಂಭಗೊಂಡಿದ್ದು, ಮಾ.4ರೊಳಗೆ 2ಎ ಮೀಸಲಾತಿ ದೊರೆಯದ್ದಿರೆ ಹೋರಾಟ ಇನ್ನೂ ತೀವ್ರಗೊಳಿಸುತ್ತೇವೆ. ನಮ್ಮ ಸಮಾಜವನ್ನು ನಿರ್ಲಕ್ಷಿಸಿದರೆ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗಲಿದೆ ಎಂಬ ಎಚ್ಚರಿಕೆಯನ್ನು ಸಹ ಸರ್ಕಾರಕ್ಕೆ ರವಾನಿಸಿದ್ದಾರೆ.

- Advertisement -

ಕೂಡಲಸಂಗಮದಿಂದ ಬೆಂಗಳೂರುವರೆಗೆ 38 ದಿನಗಳ ಕಾಲ 708 ಕಿ.ಮೀ ಪಾದಯಾತ್ರೆ ನಡೆಸಿ ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ಮೂಲಕ ಬೃಹತ್ ಪಂಚಮಸಾಲಿ ಸಮಾವೇಶ ನಡೆಸಿ ಶಕ್ತಿಪ್ರದರ್ಶನದ ಮೂಲಕ 2ಎ ಮೀಸಲಾತಿಗಾಗಿ ಹಕ್ಕೋತ್ತಾಯ ಮಂಡಿಸಲಾಗಿತ್ತು. ಸರ್ಕಾರದಿಂದ ಯಾವುದೇ ಸ್ಪಷ್ಟ ಭರವಸೆ ಸಿಗದಿರುವುದರಿಂದ ಹೋರಾಟ ಮುಂದುವರೆದಿದ್ದು, ಫ್ರೀಡಂಪಾರ್ಕ್‍ನಲ್ಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಇಂದಿನಿಂದ ಮಾರ್ಚ್ 4ರವರೆಗೆ ಹಮ್ಮಿಕೊಳ್ಳಲಾಗಿರುವ ಧರಣಿ ಸತ್ಯಾಗ್ರಹದಲ್ಲಿ ಎಲ್ಲಾ ರಾಜಕೀಯ ನಾಯಕರು ಮತ್ತು ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಮೀಸಲಾತಿ ನೀಡದೆ ಹೋದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಂದಿನ ದಿನಗಳಲ್ಲಿ ಅಗ್ನಿಪರೀಕ್ಷೆ ಎದುರಿಸಬೇಕಾಗುತ್ತದೆ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ತಿಳಿಸಿದ್ದಾರೆ. ನಿನ್ನೆ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ನಾವು ಸಮಾಜದ ಒಗ್ಗಟ್ಟು ತೋರಿಸಿದ್ದೇವೆ. 2ಎ ಮೀಸಲಾತಿ ನೀಡಲು ಸಿಎಂ ಯಡಿಯೂರಪ್ಪ ಅವರು ಸಮಯಾವಕಾಶ ಕೇಳಿದ್ದರು. ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ನಾವು ಸುಮ್ಮನಿದ್ದೆವು. ಆದರೆ ಈಗ ಮೀಸಲಾತಿ ನೀಡದೆ ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ಸಮುದಾಯದ ಜನರು ಧರಣಿ ಸತ್ಯಾಗ್ರಹ ಹೋರಾಟ ಮಾಡೋಣ ಎಂದು ಹೇಳಿದ್ದರು. ಅದರಂತೆ ನಾವು ಸತ್ಯಾಗ್ರಹಕ್ಕೆ ಇಳಿದಿದ್ದೇವೆ ಎಂದರು.

ಸಮಾವೇಶದ ನಂತರ ನಡೆದ ಪಾದಯಾತ್ರೆಯಿಂದ ಇಡೀ ಬೆಂಗಳೂರು ಸ್ತಬ್ದಗೊಂಡಿತ್ತು. ನಾವು ಒಂದು ಕರೆ ಕೊಟ್ಟಿದ್ದರೆ ಅಲ್ಲೋಲ ಕಲ್ಲೋಲವಾಗುತ್ತಿತ್ತು. ನಾವು ವಿಧಾನಸೌಧ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಕೈಬಿಟ್ಟೆವು. ಶಾಂತಿಯುತವಾಗಿ ನಡೆಸುತ್ತಿದ್ದ ನಮ್ಮ ಪಾದಯಾತ್ರೆಗೆ ಬ್ಯಾರಿಕೇಡ್‍ಗಳನ್ನು ಹಾಕಿ ತಡೆಯುವ ಮೂಲಕ ಪೊಲೀಸರು ಹತ್ತಿಕ್ಕುವ ಕೆಲಸವನ್ನು ಮಾಡಿದ್ದಾರೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು. ಇದೇ ರೀತಿ ಸಮಾಜವನ್ನು ನಿರ್ಲಕ್ಷಿಸುವುದು ಮುಂದುವರೆಸುತ್ತಿದ್ದರೆ ಪರಿಸ್ಥಿತಿ ಬದಲಾಗುವುದರಲ್ಲಿ ಅನುಮಾನವಿಲ್ಲ. ಬೇರೆ ಯಾರೇ ಮುಖ್ಯಮಂತ್ರಿಯಾಗಿದ್ದರೂ ನಾವು ಹೋರಾಟ ಮಾಡುವ ಅವಶ್ಯಕತೆ ಇರಲಿಲ್ಲ. ನಮ್ಮವರೇ ಮುಖ್ಯಮಂತ್ರಿಗಳಾಗಿದ್ದಾರೆ. ಬಾಯಿಮಾತಿನ ಭರವಸೆ ಬೇಡ. ಲಿಖಿತರೂಪದಲ್ಲಿ ನಮಗೆ ಸ್ಪಷ್ಟ ಭರವಸೆ ಸಿಗಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಶ್ರೀಗಳು ಹೇಳಿದ್ದಾರೆ.

“ಸರ್ಕಾರದ ವಿಳಂಬ ನೀತಿಯಿಂದ ಸಮಾಜದವರು ಆಕ್ರೋಶಗೊಂಡಿದ್ದಾರೆ. ನಮ್ಮ ಹೋರಾಟ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಮನವಿ ಕೊಡುವ ಪರಿಸ್ಥಿತಿ ಈಗ ಇಲ್ಲ. ಅನಗತ್ಯವಾಗಿ ವಿಳಂಬ ನೀತಿ ಅನುಸರಿಸಿ ಚೆಲ್ಲಾಟವಾಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಪಂಚಮಸಾಲಿಗಳಿಗೆ ಮೀಸಲಾತಿ ನೀಡಿದರೆ ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂಬ ಆತಂಕ ಅವರಿಗೆ ಇದೆ. ಹಾಗಾಗಿ ವಿಳಂಬ ಮಾಡುತ್ತಿದ್ದಾರೆ. ಹಿಂದುಳಿದ ವರ್ಗದ ಆಯೋಗಕ್ಕೆ ಪತ್ರ ಬರೆಯಬೇಕಾಗಿಲ್ಲ. ಕುಲಶಾಸ್ತ್ರ ಅಧ್ಯಯನದ ಅಗತ್ಯವೂ ಇಲ್ಲ. ಮೀಸಲಾತಿ ನೀಡಲೇಬೇಕು. ಇದು ಸಮಾಜದ ಆಗ್ರಹವಾಗಿದೆ” ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.

Join Whatsapp