ಬೆಂಗಳೂರಿನಲ್ಲಿ ನಾಳೆಯಿಂದ ಕಂಪೆನಿ ಸೆಕ್ರೆಟರಿಗಳ 49 ನೇ ರಾಷ್ಟ್ರೀಯ ಸಮಾವೇಶ

Prasthutha|

ರಾಜ್ಯಪಾಲ, ಮುಖ್ಯಮಂತ್ರಿ, ಕೇಂದ್ರ ಸಚಿವರು ಭಾಗಿ 

- Advertisement -

ಬೆಂಗಳೂರು;  ದೇಶದ ಆಡಳಿತ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲು ಮಹತ್ವದ ಪಾತ್ರವಹಿಸುತ್ತಿರುವ ಇನ್ಸ್ಟಿಟ್ಯೂಟ್ ಆಪ್ ಕಂಪೆನಿ ಸೆಕ್ರೇಟರೀಸ್ ಆಪ್ ಇಂಡಿಯಾದಿಂದ “ ಉತ್ತಮ ಆಡಳಿತ ; ಸಾರ್ವತ್ರಿಕ ಧರ್ಮ” ಎಂಬ ವಿಷಯದಡಿ ಮೂರು ದಿನಗಳ 49 ನೇ ಕಂಪೆನಿ ಸೆಕ್ರೆಟರಿಗಳ ರಾಷ್ಟ್ರೀಯ ಸಮಾವೇಶ ನಾಳೆಯಿಂದ ಆರಂಭವಾಗಲಿದೆ.

ಬೆಂಗಳೂರು ಅರಮನೆ ಆವರಣದಲ್ಲಿ ನಡೆಯಲಿರುವ ಸಮಾವೇಶವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸ್ವಾಮಿನಾಥನ್ ಜಾನಕಿರಾಮನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳ ಸಮಾವೇಶದಲ್ಲಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮೂರು ದಿನಗಳ ಸಮಾವೇಶವನ್ನು ವೀಕ್ಎಂಡ್ ಕರ್ಪ್ಯೂ ಕಾರಣ ವರ್ಚುವಲ್ ಮೂಲಕ ಆಯೋಜಿಸಲಾಗಿದೆ  ಎಂದು ಐ.ಸಿ.ಎಸ್.ಐ ಅಧ್ಯಕ್ಷ ಸಿ.ಎಸ್. ನಾಗೇಂದ್ರ ಡಿ ರಾವ್ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ದಿನದಂದು ಸಂಜೆ ನಾಯಕತ್ವದಲ್ಲಿ ಪರಿವರ್ತನೆ ಮತ್ತು ಉತ್ತಮ ಆಡಳಿತ ಕುರಿತು ಜೈನ್ ವಿಶ್ವವಿದ್ಯಾಲಯದ ಪ್ರೇರಣಾದಾಯಕ ಭಾಷಣಕಾರ ಡಾ. ರಾಜ್ ದೀಪ್ ಮನ್ವಾನಿ ಸಮಾವೇಶದಲ್ಲಿ ಪಾಲ್ಗೊಂಡವರಲ್ಲಿ ತಮ್ಮ ಚಿಂತನೆಗಳ ಮೂಲಕ ಅಮಿತೋತ್ಸಾಹ ತುಂಬಲಿದ್ದಾರೆ ಎಂದರು.

ಜನವರಿ 7 ರಂದು ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಆಡಳಿತ ಕುರಿತು ಮೈಸೂರಿನ ಯದುವಿರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶೇಷ ಅಧಿವೇಶನದಲ್ಲಿ ಮಾತನಾಡಲಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕಾರಿ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಮಹಾರಾಷ್ಟ್ರದ ನಿವೃತ್ತ ಐಎಎಸ್ ಅಧಿಕಾರಿ ಸಂಜಯ್ ಉಬಲೆ ಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಇದಕ್ಕೂ ಮುನ್ನ ಡಿಟಿಟಲ್ ಯುಗದಲ್ಲಿ ಆಡಳಿತ, ಸವಾಲುಗಳು ಮತ್ತು ಅವಕಾಶಗಳು ಕುರಿತ ಗೋಷ್ಠಿಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಉಪಕುಲಪತಿ ಪ್ರೊ. ಸುಧೀರ್ ಕೃಷ್ಣ ಸ್ವಾಮಿ ಮಾತನಾಡಲಿದ್ದು, ಸಾಂಸ್ಥಿಕ ಮಂಡಳಿಗಳು, ವೈವಿದ್ಯತೆ, ಇಕ್ವಿಟಿ ಮತ್ತು ಎಲ್ಲವನ್ನೊಳಗೊಂಡ ಪರಿಣಾಮಕಾರಿ ಆಡಳಿತ ಕುರಿತು ಬೆಂಗಳೂರಿನ ಐ.ಎಸ್.ಬಿ.ಎಂನ ಸಹಾಯಕ ಪ್ರಾಧ್ಯಾಪಕ ಡಾ. ರಂಗರಾಜನ್ ಶ್ರೀನಿವಾಸನ್ ಮಾತನಾಡಲಿದ್ದಾರೆ. ಬಳಿಕ ಮಂಡಳಿಗಳ ಸ್ವಾಯತ್ತತೆ, ಆಡಳಿತದ ಗುಣಮಟ್ಟ ಹೆಚ್ಚಳ ಕುರಿತು  ಎನ್.ಎಸ್.ಡಿ.ಎಲ್ ನ ಕಾರ್ಯಕಾರಿ ನಿರ್ದೇಶಕ ಸಮೀರ್ ಬನ್ವಾತ್ ಅವರು ಬೆಳಕು ಚೆಲ್ಲಲಿದ್ದಾರೆ. ಬೆಂಗಳೂರಿನ ಐಐಎಂನ ನಿರ್ದೇಶಕ ರಿಶಿಕೇಶ್ ಟಿ. ಕೃಷ್ಣನ್ ಮತ್ತು ಇಂಡಿಯನ್ ಬ್ಯಾಂಕ್ ನ ನಿವೃತ್ತ ಸಿ.ಎಂ.ಡಿ ಸುಂದರರಾಜನ್ ಅವರು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. 

ಕೊನೆಯ ದಿನದಂದು  ವರ್ಚುವಲ್ ಮೂಲಕ

ಹೆಚ್ಚಿನ ಅಭ್ಯಾಸಗಳನ್ನು ಸಮನ್ವಯಗೊಳಿಸುವುದು ಮತ್ತು ವೃತ್ತಿಪರರನ್ನು ಅಭಿವೃದ್ಧಿಪಡಿಸುವ ಕುರಿತ ಗೋಷ್ಠಿಯಲ್ಲಿ ಎನ್.ಸಿ.ಎಲ್.ಟಿ ಅಧ್ಯಕ್ಷ ನ್ಯಾಯಮೂರ್ತಿ ಅಶೋಕ್ ಭೂಷಣ್ ಮಾತನಾಡಲಿದ್ದಾರೆ. ಬಳಿಕ ಸಮಾರೋಪ ಕಾರ್ಯಕ್ರಮದ ಮೂಲಕ ಸಮಾವೇಶ ಸಂಪನ್ನಗೊಳ್ಳಲಿದೆ ಎಂದು ಐ.ಸಿ.ಎಸ್.ಐ ಅಧ್ಯಕ್ಷ ಸಿ.ಎಸ್. ನಾಗೇಂದ್ರ ಡಿ ರಾವ್ ಹೇಳಿದರು.

Join Whatsapp