ಸಚಿವೆ ಜೊಲ್ಲೆಯ ಭ್ರಷ್ಟಾಚಾರ ಪ್ರಕರಣ| ಸ್ವತಂತ್ರ ನ್ಯಾಯಾಂಗ ತನಿಖೆಗೆ ಸಿಪಿಐ(ಎಂ) ಆಗ್ರಹ

Prasthutha|

ಬೆಂಗಳೂರು: ಗರ್ಭಿಣಿಯರಿಗೆ ಮತ್ತು ಅಪೌಷ್ಠಿಕ ಮಕ್ಕಳಿಗೆ ನೀಡಲಾಗುವ ‘ಮಾತೃಪೂರ್ಣ’ ಮೊಟ್ಟೆ ವಿತರಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಸಲು ಮುಂದಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮನವಳ್ಳಿಯನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.

- Advertisement -

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ಹೈದರಾಬಾದ್‌ ಕರ್ನಾಟಕ ಭಾಗದ ದಶಲಕ್ಷಾಂತರ ಫಲಾನುಭವಿಗಳಾದ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳು, ಬಾಣಂತಿಯರು, ಗರ್ಭಿಣಿ ಮಹಿಳೆಯರಿಗೆ ಪ್ರತಿದಿನ ಕೊಡಲಾಗುವ ಮೊಟ್ಟೆ ಟೆಂಡರ್‌ ವಿಚಾರವಾಗಿ ತಮಗೆ ಕೋಟ್ಯಾಂತರ ರೂಪಾಯಿಗಳ ಕಮಿಷನ್ ನೀಡುವವರಿಗೆ ಗುತ್ತಿಗೆ ವಿಚಾರ ಬೆಳಕಿಗೆ ಬಂದಿದ್ದು, ಭ್ರಷ್ಟ ಸರಕಾರದ ನಿದರ್ಶನವಾಗಿದೆ ಎಂದಿದ್ದಾರೆ.

ಅದೇ ರೀತಿ, ಅಂಗನವಾಡಿ ಕೇಂದ್ರಗಳಿಗೆ ನೀಡಲಾಗುವ ಪೌಷ್ಠಿಕ ಆಹಾರ ಮತ್ತು ಮೊಟ್ಟೆಗಳ ವಿತರಣೆಯಲ್ಲೂ ಆಯಾ ಕೇಂದ್ರಗಳಿಗೆ ಅಲ್ಲಿನ ಫಲಾನುಭವಿಗಳನ್ನನುಸರಿಸಿ ನೀಡದೇ ಕಡಿಮೆ ನೀಡಲಾಗುತ್ತಿರುವ ವಿಚಾರವೂ ಇಂತಹ ಭ್ರಷ್ಠತೆಯ ಮೂಲವಾಗಿದೆ. ಪ್ರಶ್ನಿಸಿದ ಅಂಗನವಾಡಿ ನೌಕರರನ್ನು ಅಧಿಕಾರಿ ವಲಯ ಬೆದರಿಸುತ್ತಿರುವುದು ಗುಟ್ಟಾದ ವಿಚಾರವಾಗಿ ಉಳಿದಿಲ್ಲ. ಈ ಎಲ್ಲದರಿಂದ ರಾಜ್ಯದ ಜನತೆ ತೀವ್ರವಾಗಿ ಆತಂಕಿತರಾಗಿದ್ದಾರೆ.

- Advertisement -

ಬಡಜನತೆಯ ಅಪೌಷ್ಠಿಕತೆಯ ವಿಚಾರದಲ್ಲಿ ಸಚಿವರ ಹಾಗೂ ಶಾಸಕರ ಈ ಭ್ರಷ್ಠತೆಯ ನಡವಳಿಕೆ ತೀವ್ರ ಖಂಡನೀಯವಾಗಿದೆ. ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿಯು ಈ ಕೂಡಲೆ ಇಬ್ಬರ ರಾಜಿನಾಮೆಯನ್ನು ಮುಖ್ಯಮಂತ್ರಿಗಳು ಪಡೆಯಬೇಕು ಮತ್ತು ಈ ಭ್ರಷ್ಠಾಚಾರದ ಪ್ರಕರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಿ ಜನತೆಗೆ ನಿಜವೇನೆಂದು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದೆ.

Join Whatsapp