ಸ್ವಾತಂತ್ರ್ಯ ದಿನದಂದು ಪಾಪ್ಯುಲರ್ ಫ್ರಂಟಿನಿಂದ 75 ಸ್ಥಳಗಳಲ್ಲಿ ರಕ್ತದಾನ ಶಿಬಿರ; 10 ಸಾವಿರ ಯೂನಿಟ್ ರಕ್ತ ಸಂಗ್ರಹ ಗುರಿ: ಎ.ಕೆ.ಅಶ್ರಫ್

Prasthutha|

ಬೆಂಗಳೂರು: ದೇಶದಲ್ಲಿ ರಕ್ತದ ಕೊರತೆಯ ಸಮಸ್ಯೆ ಗಂಭೀರವಾಗಿರುವುದನ್ನು ಪರಿಗಣಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜುಲೈ 15ರಿಂದ ಆಗಸ್ಟ್ 15ರ ವರೆಗೆ ರಾಜ್ಯಾದ್ಯಂತ ಬ್ಲಡ್ ಡೋನರ್ಸ್ ಫೋರಂ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅಭಿಯಾನದ ಅಂಗವಾಗಿ 75ನೇ ಸ್ವಾತ್ರಂತ್ರ್ಯೋತ್ಸವ ದಿನದಂದು ರಾಜ್ಯಾದ್ಯಂತ 75ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿದೆ. ಈ ಶಿಬಿರದಲ್ಲಿ 10 ಸಾವಿರ‌ ಯುನಿಟ್ ರಕ್ತವನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ತಿಳಿಸಿದ್ದಾರೆ.

- Advertisement -


ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಕ್ತದ ಕೊರತೆಯ ಸಮಸ್ಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಗಂಭೀರವಾಗಿ ಪರಿಗಣಿಸಿದೆ. ರಕ್ತದಾನ ಕಾರ್ಯಕ್ಕೆ ಬಹಳಷ್ಟು ಮಹತ್ವ ನೀಡುತ್ತಾ ಬಂದಿದೆ. ಕಳೆದ ಎರಡು ದಶಕಗಳಿಂದಲೂ ಸಂಘಟನೆಯು ಜಾತಿ, ಮತ ಭೇದವಿಲ್ಲದೇ ರಕ್ತದಾನ ಶಿಬಿರ ಮತ್ತು ವೈಯಕ್ತಿಕ ರಕ್ತದಾನದ ಮೂಲಕ ತುರ್ತು ಸಂದರ್ಭಗಳಲ್ಲಿ ರಕ್ತ ಪೂರೈಕೆ ಮಾಡಿ ಜನರ ಜೀವ ಉಳಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಾ ಬರುತ್ತಿದೆ ಎಂದು ತಿಳಿಸಿದರು.

ಪಾಪ್ಯುಲರ್ ಫ್ರಂಟ್, ಮಾನವೀಯ ಸೇವೆಯನ್ನು ವ್ಯಾಪಕಗೊಳಿಸುವ, ರಕ್ತದ ಕೊರತೆ ನೀಗಿಸುವ, ಜನರಲ್ಲಿ ಜಾಗೃತಿ ಮೂಡಿಸಿ ಅವರನ್ನು ರಕ್ತದಾನಕ್ಕೆ ಪ್ರೇರೇಪಿಸುವ ಒಂದು ವಿಶಾಲ ಪರಿಕಲ್ಪನೆಯೊಂದಿಗೆ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಎಂಬ ರಾಷ್ಟ್ರ ಮಟ್ಟದ ವೇದಿಕೆಗೂ ಚಾಲನೆ ನೀಡಿದೆ. ಅದರಂತೆ ಕರ್ನಾಟಕದಲ್ಲಿಯೂ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ವೇದಿಕೆಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

- Advertisement -

ರಕ್ತದಾನವು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಆದರೆ ಇಂದು ಸಕಾಲದಲ್ಲಿ ರಕ್ತ ದೊರಕದೆ ಅಸಂಖ್ಯಾತ ರೋಗಿಗಳು ಸಾವನ್ನಪ್ಪುತ್ತಿರುವ ಘಟನೆಗಳೂ ನಡೆಯುತ್ತಿರುತ್ತವೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 1.2 ಕೋಟಿ ಯುನಿಟ್ ರಕ್ತದ ಅಗತ್ಯವಿದ್ದು, 1.1 ಕೋಟಿ ಮಾತ್ರ ಲಭ್ಯವಿದೆ. 11.5 ಲಕ್ಷ ಯುನಿಟ್ ರಕ್ತದ ಕೊರತೆ ಇದೆ ಎಂದು ಸರಕಾರದ ಸಚಿವಾಲಯದ ವರದಿ ಹೇಳುತ್ತವೆ. ಕೋವಿಡ್ ನಂತರದ ದಿನಗಳಲ್ಲಿ ರಕ್ತದ ಸಂಗ್ರಹಣೆಯಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ಻ದಕ್ಈಕಾಗಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ರಾಜ್ಯ ಸಂಚಾಲಕ ಅಬೂ ಸಿನಾನ್, ಪಾಪ್ಯುಲರ್ ಫ್ರಂಟ್ ಬೆಂಗಳೂರು ಝೋನಲ್‌ ಅಧ್ಯಕ್ಷ ಇಲ್ಯಾಸ್ ಅಹ್ಮದ್ ಉಪಸ್ಥಿತರಿದ್ದರು.

Join Whatsapp