ಎಲ್​ಎಲ್​ಬಿ ಸೀಟ್ ಸಿಗದೆ ನೊಂದ ಯುವಕ ಆತ್ಮಹತ್ಯೆ

Prasthutha|

ಬೆಂಗಳೂರು: ಎಲ್​ಎಲ್​ಬಿ ಸೀಟ್ ಸಿಗದ ಹಿನ್ನೆಲೆಯಲ್ಲಿ ಮನನೊಂದು ಯುವಕನೋರ್ವ ಆತ್ಮಹತ್ಯೆ ಮಾಡಿರುವ ಘಟನೆ ಕುದೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

ಹಾಸನ ಜಿಲ್ಲೆಯ ಕುಂಬೇನಹಳ್ಳಿ ಗ್ರಾಮದ ಗೋಪಾಲ್​ (22) ಆತ್ಮಹತ್ಯೆಗೆ ಶರಣಾದ ಯುವಕ. ನೆಲಮಂಗಲ – ಕುಣಿಗಲ್ ಹೆದ್ದಾರಿಯ ಪಕ್ಕದಲ್ಲೇ ಪಲ್ಸರ್​ ಬೈಕ್​ ನಿಲ್ಲಿಸಿ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಗೋಪಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಮೃತನ ಮೊಬೈಲ್​ನಿಂದ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಮೃತ ಗೋಪಾಲ್​ ವಕೀಲನಾಗುವ ಕನಸು ಕಟ್ಟಿಕೊಂಡಿದ್ದ.ಪಿಯುಸಿ ಹಾಗೂ ಐಟಿಐ ಮುಗಿಸಿದ್ದ ಈತನಿಗೆ  ಶೇಕಡಾವಾರು ಅಂಕ ಕಡಿಮೆ ಇದ್ದುದರಿಂದ ಎಲ್​ಎಲ್​ಬಿ ಸೀಟ್​ ಸಿಕ್ಕಿರಲಿಲ್ಲ. ಹೀಗಾಗಿ ಈತ ಸಾವಿಗೆ ಶರಣಾಗಿದ್ದಾನೆ.

- Advertisement -

ಆತ್ಮಹತ್ಯೆಗೂ ಮುನ್ನ ಮೊಬೈಲ್​ನಲ್ಲಿ ಸೆಲ್ಫಿ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಗೋಪಾಲ್, ‘ನನ್ನ ಈ ಪರಿಸ್ಥಿತಿಗೆ ನಾನೇ ಕಾರಣ. ಇದಕ್ಕಾಗಿ ಯಾರೂ ಕಣ್ಣೀರು ಹಾಕುವ ಅವಶ್ಯಕತೆಯೂ ಇಲ್ಲ. ಅಲ್ಲದೇ, ಯಾರನ್ನೂ ದೂಷಿಸಬೇಡಿ. ಜೊತೆಗೆ ನಾನು ಪತ್ರವೊಂದನ್ನು ಕೂಡ ಬರೆದಿದ್ದೆ. ಆದರೆ, ಅದು ಸಿಗುತ್ತದೋ, ಇಲ್ಲವೋ ಗೊತ್ತಿಲ್ಲ. ಹೀಗಾಗಿಯೇ ವಿಡಿಯೋ ಚಿತ್ರೀಕರಣ ಮಾಡಿದ್ದೇನೆ’ ಎಂದು ಹೇಳಿದ್ದಾನೆ. ಈ ವಿಡಿಯೋವನ್ನು ತನ್ನ ಅಣ್ಣ ಹಾಗೂ ತನ್ನ ಸ್ನೇಹಿತರಿಗೆ ಕಳಿಸಿದ್ದಾನೆ.

ಈ ಬಗ್ಗೆ ಕುದೂರು ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Join Whatsapp