ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ವಿಧ್ವಂಸಕತೆ ಸಹಿಸಲು ಸಾಧ್ಯವಿಲ್ಲ: ಸುಪ್ರೀಮ್ ಕೋರ್ಟ್ ಸ್ಪಷ್ಟನೆ

Prasthutha|

ಸದನದಲ್ಲಿ ಅಶಾಂತಿ ಸೃಷ್ಟಿಸಿದ್ದ ತನ್ನ ಸದಸ್ಯರ ವಿರುದ್ಧದ ಪ್ರಕರಣವನ್ನು ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದ ಕೇರಳದ ಕಮ್ಯೂನಿಸ್ಟ್ ಸರಕಾರ

- Advertisement -

ನವದೆಹಲಿ ಜುಲೈ 28: ಸದನದಲ್ಲಿರುವ ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಲ್ಲ ಮತ್ತು ಅಪರಾಧ ಕೃತ್ಯದಲ್ಲಿ ಶಾಸಕರಿಗೆ ಕಾನೂನಿನಲ್ಲಿ ವಿನಾಯಿತಿ ನೀಡುವುದು ಸಮಂಜಸವಲ್ಲವೆಂದು ಸುಪ್ರೀಮ್ ಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ. ಪ್ರಸಕ್ತ ಕೇರಳದ ಆಡಳಿತ ಪಕ್ಷವಾದ ಸಿಪಿಐ (ಎಂ) 2015ರಲ್ಲಿ ಪ್ರತಿಪಕ್ಷದಲ್ಲಿದ್ದಾಗ ರಾಜ್ಯ ವಿಧಾನಸಭೆಯಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದಕ್ಕಾಗಿ ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಸೇರಿದಂತೆ ಸಿಪಿಐ (ಎಂ) ನಾಯಕರ ವಿರುದ್ಧದ ಪ್ರಕರಣಗಳನ್ನು ಕೈಬಿಡುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಉನ್ನತ ನ್ಯಾಯಾಲಯ ತಳ್ಳಿಹಾಕಿದೆ.

ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ಎಂ.ಆರ್. ಶಾ ರವರನ್ನೊಳಗೊಂಡ ಪೀಠವು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಶಾಸಕರು ಮತ್ತು ಸಂಸದರು ಸದನದೊಳಗೆ ಅಪರಾಧ ಕೃತ್ಯಗಳಿಂದ ವಿನಾಯಿತಿ ಪಡೆಯುತ್ತಾರೆ ಎಂದರ್ಥವಲ್ಲ. ವಾಕ್ ಸ್ವಾತಂತ್ರ್ಯ, ಸವಲತ್ತುಗಳು ಮತ್ತು ವಿನಾಯಿತಿ ಹಕ್ಕನ್ನು ಸುಪ್ರೀಮ್ ಕೋರ್ಟ್ ಅವರಿಗೆ ಒತ್ತಿ ಹೇಳಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ವಿಧ್ವಂಸಕತೆಯನ್ನು ಸಾಧ್ಯವಿಲ್ಲವೆಂದು ಉಲ್ಲೇಖಿಸಿರುವ ಸುಪ್ರೀಮ್ ಕೋರ್ಟ್, ಕೇರಳ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಇಂದು ತಿರಸ್ಕರಿಸಿದೆ.

- Advertisement -

ಸಾರ್ವಜನಿಕ ಸೇವೆಯ ನೆಪದಲ್ಲಿ ವಿಧ್ವಂಸಕ ಕೃತ್ಯವು ವಾಕ್ ಸ್ವಾತಂತ್ರ್ಯದ ಪರಿಮಿತಿಗೆ ಬರುವುದಿಲ್ಲವೆಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ 2015 ರಲ್ಲಿ ಎಲ್.ಡಿ.ಎಫ್ ಮಾಜಿ ಶಾಸಕರ ವಿರುದ್ಧ ಸದನದ ಒಳಗೆ ಅಶಾಂತಿ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪ್ರಕರಣ ಮುಂದುವರಿಯಲಿದೆ ಮತ್ತು ಇದರಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲವೆಂದು ಉನ್ನತ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕೇರಳ ಸರ್ಕಾರವು 2015 ರಲ್ಲಿ ವಿಧಾನಸಭೆಯಲ್ಲಿ ಅಸಭ್ಯ ವರ್ತನೆಯ ಕಾರಣಕ್ಕಾಗಿ ಶಾಸಕರ ವಿರುದ್ಧ ಕ್ರಮಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ವಿಚಾರಣೆಯ ವೇಳೆ ನ್ಯಾಯಮೂರ್ತಿ ಚಂದ್ರಚೂಡ್ ಅವರು ಕೇರಳ ಸರ್ಕಾರವನ್ನು ಪ್ರತಿನಿಧಿಸಿದ ಹಿರಿಯ ವಕೀಲ ರಂಜಿತ್ ಕುಮಾರ್ ಅವರನ್ನು ತರಾಟೆಗೆ ತೆಗೆದಿದ್ದರು. ಜುಲೈ 5 ರಂದು ವಾದ ಆಲಿಸಿದ್ದ ನ್ಯಾಯಾಲಯವು ಸಂಸತ್ ಮತ್ತು ವಿಧಾನಸಭೆಯಲ್ಲಿ ಕಾನೂನು ನಿರೂಪಕರ ಅಶಿಸ್ತಿನ ನಡವಳಿಕೆಯನ್ನು ಕ್ಷಮಿಸಲು ಸಾಧ್ಯವಿಲ್ಲ. ಮಾತ್ರವಲ್ಲ ಅವರು ಸದನದೊಳಗಿನ ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಉನ್ನತ ನ್ಯಾಯಾಲಯ ಹೇಳಿತ್ತು.

Join Whatsapp