ಉನ್ನಾವೊ ದಲಿತ ಬಾಲಕಿಯರ ನಿಗೂಢ ಸಾವು ಕೇಸ್ | ನೀರಿನಲ್ಲಿ ವಿಷ ಬೆರೆಸಿ ನೀಡಿದ್ದ ಇಬ್ಬರ ಬಂಧನ

Prasthutha|

ಲಖನೌ : ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದ ಇಬ್ಬರು ದಲಿತ ಬಾಲಕಿಯರ ಹತ್ಯೆ ಮತ್ತೋರ್ವ ಹುಡುಗಿ ನಿಗೂಢ ಅಸ್ವಸ್ಥಳಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಓರ್ವ 28ರ ಹರೆಯದ ವ್ಯಕ್ತಿ ಮತ್ತು 15ರ ಹರೆಯದ ಅಪ್ರಾಪ್ತ ವಯಸ್ಕನನ್ನು ಬಂಧಿಸಿದ್ದಾರೆ. ತನ್ನ ಪ್ರೀತಿಯನ್ನು ಒಪ್ಪದ ಅಸ್ವಸ್ಥಗೊಂಡಿರುವ 17ರ ಹರೆಯದ ಹುಡುಗಿಗೆ ಬಂಧಿತನು ನೀರಿನಲ್ಲಿ ವಿಷ ಬೆರೆಸಿ ನೀಡಿದ್ದು, ಇದನ್ನು ಹಂಚಿ ಕುಡಿದ ಆಕೆಯ ಸೋದರ ಸಂಬಂಧಿಗಳಾದ 16 ಮತ್ತು 13 ವರ್ಷದ ಬಾಲಕಿಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

ಬಂಧಿತ 28ರ ಹರೆಯದ ವ್ಯಕ್ತಿಯನ್ನು ವಿನಯ್ ಅಲಿಯಾಸ್ ಲಂಬು ಎಂದು ಗುರುತಿಸಲಾಗಿದೆ. ವಿನಯ್ ಪಕ್ಕದ ಗ್ರಾಮನಾಗಿದ್ದು, ಆತನ ಕುಟುಂಬಕ್ಕೆ ಸೇರಿದ ಹೊಲ ಮತ್ತು ಮೃತ ಯುವತಿಯರ ಹೊಲ ಅಕ್ಕಪಕ್ಕದಲ್ಲಿದ್ದು, ಅಲ್ಲಿಗೆ ಬರುತ್ತಿದ್ದಾಗ ಆತನಿಗೆ 17ರ ಹರೆಯದ ಹುಡುಗಿಯ ಮೇಲೆ ಆಕರ್ಷಣೆಯಾಗಿದೆ. ಆದರೆ, ಆಕೆ ಆತನ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ. ಇದರಿಂದ ಕೋಪಿತನಾದ ವಿನಯ್ ಆಕೆಗೆ ನೀರಿನಲ್ಲಿ ವಿಷ ಬೆರೆಸಿ ನೀಡಿದ್ದಾನೆ.

ಲಾಕ್ ಡೌನ್ ಬಳಿಕ ಹೊಲದ ಬಳಿ ಬರುತ್ತಿದ್ದ ವಿನಯ್ ಗೆ ಬಾಲಕಿಯರು ಅಲ್ಲಿಗೆ ಬರುವ, ಹೋಗುವ ವಿಚಾರ ತಿಳಿದಿತ್ತು. 17ರ ಹರೆಯದ ಹುಡುಗಿಯು ಆತನ ಪ್ರೀತಿಯನ್ನು ನಿರಾಕರಿಸಿದ್ದರೂ, ಇತರ ಸೋದರ ಸಂಬಂಧಿಗಳ ಮೂಲಕ ಮಾತುಕತೆ ಮುಂದುವರಿದಿತ್ತು. ಘಟನೆ ದಿನ ಮೇವು ತರಲೆಂದು ಬಂದಿದ್ದ ಸೋದರ ಸಂಬಂಧಿ ಸಹೋದರಿಯರಿಗೆ ಆರೋಪಿಗಳು ಅಂಗಡಿಯಿಂದ ಸ್ನಾಕ್ಸ್ ತಂದು ಕೊಟ್ಟಿದ್ದರು. ಈ ವೇಳೆ ಕುಡಿಯುವ ನೀರಿನಲ್ಲಿ ವಿಷ ಬೆರೆಸಿದ್ದ ಆರೋಪಿಯು, ಬಾಲಕಿಯರು ನೀರು ಕೇಳಿದಾಗ ಅದನ್ನೇ ನೀಡಿದ್ದಾರೆ. ಇದನ್ನು ಹಂಚಿಕುಡಿದ ಬಾಲಕಿಯರು ನೊರೆ ಕಾರಿ ಸಾವಿಗೀಡಾಗಿದ್ದಾರೆ. ತಪ್ಪನ್ನು ಆರೋಪಿಯು ಒಪ್ಪಿಕೊಂಡಿರುವುದಾಗಿ ಮತ್ತು ನಡೆದಿರುವ ಘಟನೆಯ ಬಗ್ಗೆ ವಿವರಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.     

Join Whatsapp