ಸರ್ಕಾರಿ ಶಾಲೆಯ ಖರ್ಚು ವೆಚ್ಚಗಳ ನಿರ್ವಹಣೆಯ ಹೊಣೆ ಇನ್ನು ಮುಂದೆ ಪೋಷಕರ ಹೆಗಲಿಗೆ: ತಿಂಗಳಿಗೆ ₹ 100 ದೇಣಿಗೆ

Prasthutha|

ಬೆಂಗಳೂರು: ವರ್ಗಾವಣೆ ಪ್ರಮಾಣ ಪತ್ರ ಪಡೆಯುವಾಗ ಮತ್ತುವಿಶೇಷ ಸಂದರ್ಭಗಳಲ್ಲಿ ಒಂದಷ್ಟು ವಂತಿಗೆ ಪಡೆಯುತ್ತಿದ್ದ ಸರ್ಕಾರಿ ಶಾಲೆಗಳು ಇನ್ನು ಮುಂದೆ ನಿತ್ಯದ ವೆಚ್ಚಗಳಿಗೂ ವಿದ್ಯಾರ್ಥಿಗಳ ಪೋಷಕರಿಂದಲೇ ಮಾಸಿಕ 100 ರೂ.ಗಳನ್ನು ದೇಣಿಗೆ ಸಂಗ್ರಹಿಸಲು ಸುತ್ತೋಲೆ ಹೊರಡಿಸಿದೆ.

- Advertisement -

ರಾಜ್ಯದ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅಗತ್ಯವಿರುವ ಖರ್ಚುವೆಚ್ಚಗಳಿಗಾಗಿ ಮಕ್ಕಳ ಪೋಷಕರಿಂದ ಹಣ ಸಂಗ್ರಹಿಸಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್ ಡಿಎಂಸಿ) ಸರ್ಕಾರವೇ ಅಧಿಕೃತ ಸಮ್ಮತಿ ನೀಡಿದ್ದು, ದೇಣಿಗೆ ರೂಪದಲ್ಲಿ ಪ್ರತಿ ತಿಂಗಳು ₹ 100 ಸಂಗ್ರಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ತಜ್ಞರು, ಸರ್ಕಾರದ ಈ ನಡೆಯು  ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆ, ಕಡ್ಡಾಯ ಶಿಕ್ಷಣ ಹಕ್ಕು ಮೊಟಕುಗೊಳಿಸುವ ಹುನ್ನಾರ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

- Advertisement -

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಆಯವ್ಯಯದಲ್ಲಿ ವಾರ್ಷಿಕವಾಗಿ ಒದಗಿಸುತ್ತಿರುವ  25,000 ಕೋಟಿ ರೂ.ಗಳನ್ನು ಹೆಚ್ಚಿಸಿಕೊಂಡು ಸರಿದೂಗಿಸಬೇಕಿದ್ದ ಸರಕಾರವು ಇದೀಗ ಪೋಷಕರಿಂದಲೇ ಮಾಸಿಕ 100 ರೂ.ಗಳನ್ನು ಸಂಗ್ರಹಿಸಬೇಕು ಎಂದು ಹೊರಡಿಸಿರುವ ಸುತ್ತೋಲೆಯು ಶಿಕ್ಷಕರನ್ನು ಪುನಃ ಬೀದಿಗಿಳಿಸಿದೆ. ಶಾಲಾ ದೇಣಿಗೆ ಸಂಬಂಧ  ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2022ರ ಅಕ್ಟೋಬರ್ 19 ರಂದು ಸುತ್ತೋಲೆ ಹೊರಡಿಸಿದ್ದಾರೆ.

ಶಾಲಾ ನಿರ್ವಹಣೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಸರ್ಕಾರದ ಮಂಜೂರಾತಿ ಇಲ್ಲದಾದಾಗ, ಅನುದಾನದ ಕೊರತೆ ಎದುರಾದಾಗ ಸ್ಥಳೀಯವಾಗಿ ಸುಗಮ ನಿರ್ವಹಣೆ ಸಾಧ್ಯವಾಗಿಸಲು ಸರ್ಕಾರ ‘ನಮ್ಮ ಶಾಲೆ–ನನ್ನ ಕೊಡುಗೆ’ ಯೋಜನೆ ರೂಪಿಸಿದೆ. ಈ ಯೋಜನೆ ಅನ್ವಯ ಸಾರ್ವಜನಿಕರಿಂದ ಆರ್ಥಿಕ ಸಹಾಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೂ, ಪೋಷಕರಲ್ಲಿ ಶಾಲಾ ಚಟುಚಟಿಕೆ, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡುವಂತೆ ಮಾಡಲು ಮಕ್ಕಳ ಪೋಷಕರು, ತಂದೆ, ತಾಯಿಯರ ಮನವೊಲಿಸಿ ಪ್ರತಿ ತಿಂಗಳು ಹಣವನ್ನು ಪಡೆಯಬೇಕು. ಹಣಕ್ಕಾಗಿ ಬಲವಂತ ಮಾಡಬಾರದು. ಸಂಗ್ರಹಿಸಿದ ಹಣವನ್ನು ಎಸ್ ಡಿಎಂಸಿ ಖಾತೆಗೆ ಜಮೆ ಮಾಡಬೇಕು’ ಎಂದು ಸೂಚಿಸಲಾಗಿದೆ.

ಸಂಗ್ರಹಿಸಿದ ಅನುದಾನ ಯಾವ ಯಾವ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬೇಕು ಎನ್ನುವ ಕುರಿತು ಆದ್ಯತಾ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ರಸೀದಿ ನೀಡುವ, ಪ್ರತ್ಯೇಕ ಲೆಕ್ಕಪತ್ರ ಇಡುವ, ಹಣಕಾಸಿನ ನಿರ್ವಹಣೆಯ ಹೊಣೆಗಾರಿಕೆಯನ್ನು ಎಸ್ ಡಿಎಂಸಿ ಸದಸ್ಯ ಕಾರ್ಯದರ್ಶಿಗೆ ನೀಡಲಾಗಿದೆ.

‘ಸಂವಿಧಾನದ 21 ಎ ವಿಧಿಯ ಪ್ರಕಾರ ಮಕ್ಕಳಿಗೆ ಶಿಕ್ಷಣ ನೀಡುವುದು ಆಯಾ ಸರ್ಕಾರಗಳ ಹೊಣೆ. ಆರ ಟಿಇ ಸೆಕ್ಷನ್ 3ರ ಪ್ರಕಾರ 8ನೇ ತರಗತಿಯವರೆಗೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಸರ್ಕಾರ ಒಳ್ಳೆಯ ಉದ್ದೇಶ ಇಟ್ಟುಕೊಂಡು ಸುತ್ತೋಲೆ ಹೊರಡಿಸಿರುವುದಾಗಿ ಸಮರ್ಥಿಸಿ ಕೊಂಡರೂ, ಬಲವಂತ ಇಲ್ಲದೇ ನೈತಿಕ ಜವಾಬ್ದಾರಿಯ ಆಧಾರದಲ್ಲಿ ಹಣ ನೀಡುವ ಅನಿವಾರ್ಯಕ್ಕೆ ಮಕ್ಕಳ ಪೋಷಕರು ಒಳಗಾಗಲಿದ್ದಾರೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಸರ್ಕಾರದ ಸುತ್ತೋಲೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Join Whatsapp