ದೇಶದ್ರೋಹ ಕಾನೂನು ಅಮಾನತಿನಲ್ಲಿಟ್ಟ ಸುಪ್ರೀಂಕೋರ್ಟ್

Prasthutha|

ನವದೆಹಲಿ: ಸರ್ಕಾರ ತನ್ನ ಪರಿಶೀಲನೆಯನ್ನು ಪೂರ್ಣಗೊಳಿಸುವವರೆಗೆ ದೇಶದ್ರೋಹ ಕಾನೂನು ಅಮಾನತಿನಲ್ಲಿರಲಿದೆ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.

- Advertisement -

ಕೇಂದ್ರ ಸರ್ಕಾರ ಸೆಕ್ಷನ್ 124 ಎ ಮರುಪರಿಶೀಲನೆ ನಡೆಸುವವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕಾನೂನಿನಡಿ ಯಾವುದೇ ಎಫ್ ಐಆರ್ ದಾಖಲಿಸುವುದರಿಂದ, ತನಿಖೆ ಮುಂದುವರೆಸುವುದರಿಂದ ಅಥವಾ ಬಲವಂತದ ಕ್ರಮ ಕೈಗೊಳ್ಳುವುದರಿಂದ ದೂರ ಇರುತ್ತವೆ ಎಂದು ನಾವು ಭಾವಿಸುತ್ತೇವೆ ಎಂದು ನ್ಯಾಯಪೀಠ ಹೇಳಿತು.

ಈಗಾಗಲೇ ದೇಶದ್ರೋಹದ ಆರೋಪ ಎದುರಿಸುತ್ತಿರುವವರು ಜಾಮೀನಿಗಾಗಿ ನ್ಯಾಯಾಲಯವನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ.

- Advertisement -

“ಭಾರತ ಸರ್ಕಾರವು ದೇಶದ್ರೋಹ ಕಾನೂನನ್ನು ಮರುಪರಿಶೀಲಿಸುತ್ತದೆ. ಅರ್ಜಿದಾರರು ಕಾನೂನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಹೇಳುತ್ತಾರೆ. ಅಟಾರ್ನಿ ಜನರಲ್ ಅವರು ಹನುಮಾನ್ ಚಾಲೀಸಾ ಪ್ರಕರಣದಲ್ಲಿ ದಾಖಲಾದ ದೇಶದ್ರೋಹದ ಆರೋಪವನ್ನು ಪ್ರಸ್ತಾಪಿಸಿದ್ದಾರೆ. ಮುಂದಿನ ಮರುಪರಿಶೀಲನೆಯವರೆಗೆ ಈ ಕಾನೂನಿನ ನಿಬಂಧನೆಯನ್ನು ಬಳಸದಿರುವುದು ಸೂಕ್ತವಾಗಿರುತ್ತದೆ” ಎಂದು ಸುಪ್ರೀಂಕೋರ್ಟ್ ಹೇಳಿದೆ.

 “124ಎ ಅಡಿಯಲ್ಲಿ ಯಾವುದೇ ಎಫ್‌ಐಆರ್ ದಾಖಲಿಸಿಕೊಳ್ಳುವುದರಿಂದ ಅಥವಾ ಮರು ಪರಿಶೀಲನೆ ಮುಗಿಯುವವರೆಗೆ ಅದರ ಅಡಿಯಲ್ಲಿ ಮುಂದುವರಿಯುವುದನ್ನು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೈಬಿಡುತ್ತವೆ ಎಂದು ನಾವು ಭಾವಿಸುತ್ತೇವೆ ಮತ್ತು ನಿರೀಕ್ಷಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ಹೇಳಿದ್ದಾರೆ.

 ಯಾವುದಾದರೂ ಪ್ರಕರಣವನ್ನು 124ಎ ಅಡಿ ದಾಖಲಿಸಿದರೂ ಮೊಕದ್ದಮೆಗೊಳಗಾದವರು ಸಂಬಂಧಿಸಿದವರನ್ನು, ನ್ಯಾಯಾಲಯವನ್ನು ಸಂಪರ್ಕಿಸಲು ಮುಕ್ತರಿರುತ್ತಾರೆ ಎಂದು ಕೋರ್ಟು ಹೇಳಿತು.

ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಮೂವರ ನ್ಯಾಯಪೀಠವು ಭಾರತೀಯ ದಂಡ ಸಂಹಿತೆ ಸೆಕ್ಷನ್ 124ಎ ಅಡಿ ದಾಖಲಾದ ಎಲ್ಲ ಚಾರ್ಜ್ ಶೀಟ್ ಗಳನ್ನು ಮೇ 11ರ ಬುಧವಾರ ಸುಪ್ರೀಂ ಕೋರ್ಟು ತನ್ನಲ್ಲಿಗೆ ತರಿಸಿಕೊಂಡಿದೆ.

ಕೇಂದ್ರ ಸರಕಾರವು ಹೇಳಿದಂತೆ ಸದರಿ ಕಾಯ್ದೆಯನ್ನು ಮರು ಪರಿಶೀಲನೆ ಮಾಡಿ ಮುಗಿಸುವವರೆಗೆ ಈ ಎಲ್ಲ ದೇಶದ್ರೋಹ ಪ್ರಕರಣಗಳನ್ನು ತಡೆಹಿಡಿಯುವುದಾಗಿ, ಯಾವುದೇ ಎಫ್ ಐಆರ್ ದಾಖಲಿಸಿದರೂ ಆರೋಪಿ ಮುಕ್ತನಾಗಿ ಅದರ ನಿವಾರಣೆಗೆ ಯಾರನ್ನು ಬೇಕಾದರೂ ಸಂಪರ್ಕಿಸಲು ಸ್ವತಂತ್ರ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.  

ಜಸ್ಟಿಸ್ ಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಸಹ ಯಾವುದೇ ಎಫ್ ಐಆರ್ ಆದರೂ ಆರೋಪಿ ತನಗೆ ಅಗತ್ಯದ ನ್ಯಾಯಾಲಯ, ವಕೀಲರನ್ನು ನೇರ ಹೋಗಿ ನೋಡಲು ಸ್ವತಂತ್ರರು ಎಂದು ಪ್ರಕಟಿಸಿದರು.

“ಈಗ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪನ್ನು ಭಾರತ ಒಕ್ಕೂಟದ ಎಲ್ಲ ನ್ಯಾಯಾಲಯಗಳು ಕೂಡ ಲೆಕ್ಕಕ್ಕೆ ತೆಗೆದುಕೊಂಡು ಅದರ ಪ್ರಕಾರ ಆರೋಪಿಗಳಿಗೆ ಬಿಡುಗಡೆ ನೀಡಲು ಎಲ್ಲ ಸಂಗತಿಗಳನ್ನು ಕೂಡಲೆ ಪರಿಶೀಲಿಸಬೇಕು” ಎಂದು ಸಹ ಕೋರ್ಟು ಹೇಳಿತು.

124ಎ ಸಂವಿಧಾನಾತ್ಮಕವೇ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಬಂದಿರುವುದರಿಂದ ಕೇಂದ್ರ ಸರಕಾರವು ಕೂಡಲೆ ರಾಜ್ಯ ಸರಕಾರಗಳೊಡನೆ ಸಮಾಲೋಚನೆ ನಡೆಸಿ ಆ ಕಾಯ್ದೆಯನ್ನು ಸಂಪೂರ್ಣವಾಗಿ ಮರು ಪರಿಶೀಲಿಸಬೇಕು ಎಂದು ನ್ಯಾಯಾಲಯವು ಹೇಳಿತು.

ಇದನ್ನು ಮನಸ್ಸಿಗೆ ತೆಗೆದುಕೊಂಡು ಒಟ್ಟಾರೆ ದೇಶದ್ರೋಹದ ಮೊಕದ್ದಮೆ ದಾಖಲಾಗುವುದನ್ನು ತಡೆಯಲಾಗುವುದು ಎಂದು ಕೇಂದ್ರದ ಪರ ಸಾಲಿಸಿಟರ್ ಜನರಲ್ ಬುಧವಾರ ಕೋರ್ಟಿಗೆ ಸರಕಾರದ ಪತ್ರ ನೀಡಿದರು.

ವಿನೋದ್ ದುವಾ ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಅನುಸರಿಸಲಾಗುವುದು. ಇನ್ನು ಮೇಲೆ ಅತ್ಯಗತ್ಯದ ದೇಶದ್ರೋಹದ ಪ್ರಕರಣವನ್ನು ಪೊಲೀಸ್ ಸೂಪರಿನ್ ಟೆಂಡೆಂಟ್ ಗಿಂತ ಕಡಿಮೆ ದರ್ಜೆಯ ಪೊಲೀಸರು ದಾಖಲಿಸದಂತೆ ನೋಡಿಕೊಳ್ಳಲಾಗುವುದು ಎಂದೂ ಕೇಂದ್ರ ಹೇಳಿದೆ. ಅಂಥ ಅಪರಾಧಗಳನ್ನು ಮಾತ್ರ ಪರಿಗಣಿಸಲಾಗುವುದು. ಕಾಯ್ದೆಯನ್ನು ಮರು ಪರಿಶೀಲಿಸುವವರೆಗೆ ಆರೋಪಿಗೆ ನ್ಯಾಯ ಕೇಳಲು ಮುಕ್ತ ಅವಕಾಶವನ್ನೂ ನೀಡಲಾಗುತ್ತದೆ ಎಂದು ಕೋರ್ಟು ಹೇಳಿತು.

“ಅರಿವಿಗೆ ಬರುವ ಅಪರಾಧವನ್ನು ಸಂವಿಧಾನ ರೀತ್ಯಾ ನಿಬಾಯಿಸಬೇಕಾಗುತ್ತದೆ. ಸರಕಾರ, ನ್ಯಾಯಾಲಯ ಸಂವಿಧಾನ ರೀತ್ಯಾ ನಡೆದುಕೊಳ್ಳಬೇಕು. ಮಧ್ಯಂತರ ಆಜ್ಞೆಯು ನಿಶ್ಚಿತ ಕಾರ್ಯಾಚರಣೆಗೆ ತಡೆ ಆಗಿರುವುದಿಲ್ಲ. ಅದು ಜವಾಬ್ದಾರಿಯುತ ಪ್ರಕರಣ ಎಂಬುದಕ್ಕೆ ಖಾತರಿ ಬಯಸಿದೆ” ಎಂದು ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಹೇಳಿದರು.

124ಎ ದುರುಪಯೋಗ ಆಗದಂತೆ ಎಲ್ಲ ನ್ಯಾಯಾಲಯ, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟೆಚ್ಚರ ನೀಡುವ ಕೆಲಸವೂ ಕೇಂದ್ರ ಸರಕಾರದ್ದಾಗಿದೆ ಎಂದು ಸುಪ್ರೀಂ ಕೋರ್ಟು ಹೇಳಿತು. 

Join Whatsapp