ವಿಜಯಪುರ: ಪಾಲಿಕೆ ಚುನಾವಣೆಯಲ್ಲಿ ಎಸ್‌ಡಿಪಿಐ 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ  – ಅಫ್ಸರ್‌ ಕೊಡ್ಲಿಪೇಟೆ

Prasthutha|

ವಿಜಯಪುರ : ವಿಜಯಪುರ (ಬಿಜಾಪುರ) ಪಾಲಿಕೆ ಚುನಾವಣೆ ಇದೇ ತಿಂಗಳ 28ಕ್ಕೆ ನಿಗದಿಯಾಗಿದ್ದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) 8 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಿಳಿಸಿದರು.

- Advertisement -

ಈಗಾಗಲೇ ಕೆಲವು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಸಮಿತಿಗೆ ಸಲ್ಲಿಸಲಾಗಿದೆ. ಇನ್ನುಳಿದ ಅಭ್ಯರ್ಥಿಗಳನ್ನು ಮುಂದಿನ ಎರಡು ಮೂರು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕಳೆದ ಮೂರೂವರೆ ವರ್ಷಗಳ ಹಿಂದೆಯೇ ಪಾಲಿಕೆ ಅವಧಿ ಮುಗಿದಿದ್ದರೂ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡನೆ ನೆಪದಲ್ಲಿ ಈ ಸರ್ಕಾರ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಕಾಂಗ್ರೆಸ್ – ಜೆಡಿಎಸ್ ಮತ್ತು ಬಿಜೆಪಿ  ಮುಂದೂಡುತ್ತಲೇ ಬಂದಿವೆ. ಹಾಗಾಗಿ ಸ್ಥಳೀಯವಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ  ಎಂದು ಅವರು ಆರೋಪಿಸಿದ್ದಾರೆ.

- Advertisement -

ಈ ಸಂಚಿನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳ ಕೈವಾಡವಿದೆ ಎಂದ ಅವರು, ಸ್ಥಳೀಯ ಶಾಸಕರ ಲಾಭಿಯಿಂದಾಗಿ ಸ್ಥಳೀಯ ಸಂಸ್ಥೆಯ ಚುನಾವಣೆಗಳನ್ನು ನಿರಂತರ ಮುಂದೂಡಲ್ಪಡುತ್ತಿವೆ ಎಂದರು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬೆಂಗಳೂರಿನ ಬಿಬಿಎಂಪಿ ಹೀಗೆ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಕೂಡ ಇದೇ ರೀತಿ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಹೆಸರಿನಲ್ಲಿ ಮುಂದೂಡಿಕೊಂಡು ಹೋಗಲಾಗುತ್ತಿದೆ ಎಂದ ಅವರು, ಇದರಿಂದ ಸ್ಥಳೀಯ ಶಾಸಕರು ಮತ್ತು ಮಂತ್ರಿಗಳಿಗೆ ಭ್ರಷ್ಟಾಚಾರ ಮಾಡಿ ಹಣ ಹೊಡೆಯಲು ಅನುಕೂಲವಾಗುತ್ತದೆ ಎನ್ನುವುದು ಅವರ ಸಂಚು ಎಂದು ಅಫ್ಸರ್ ಕೊಡ್ಲಿಪೇಟೆ ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯ ಮುಖಂಡರಾದ ಅಕ್ರಂ ಹಸನ್ ಉಳ್ಳಾಲ್ ಅವರು ಮಾತನಾಡಿ ಎಸ್‌ಡಿಪಿಐ ಪಕ್ಷ ಕಳೆದ 13 ವರ್ಷಗಳಿಂದ ದೇಶದ 15 ರಾಜ್ಯಗಳಲ್ಲಿ ಸಕ್ರಿಯವಾಗಿ ಚುನಾವಣೆ ಮತ್ತು ಹೋರಾಟಗಳಲ್ಲಿ ತೊಡಗಿಸಿಕೊಂಡಿದೆ. ಕರ್ನಾಟಕದಲ್ಲಿ ಪಕ್ಷದ ಕಡೆಯಿಂದ 300ಕ್ಕೂ ಹೆಚ್ಚು ಕಾರ್ಪೊರೇಟರ್, ಕೌನ್ಸಿಲ್ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಗೆದ್ದಿದ್ದಾರೆ. ಪಕ್ಷ 20ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿದೆ ಮತ್ತು ಕೆಲವು ಕಡೆ ಸ್ವತಂತ್ರವಾಗಿ ಅಧಿಕಾರ ನಡೆಸುತ್ತಿದೆ ಎಂದು ಅವರು ವಿವರಿಸಿದರು. ರಾಜ್ಯದ ಮೂರೂ ಪಕ್ಷಗಳಿಂದ ಬೇಸತ್ತಿರುವ ಜನ ಈ ಬಾರಿ ಅಭಿವೃದ್ಧಿಗಾಗಿ ಎಸ್‌ಡಿಪಿಐ ಪಕ್ಷದ ಕಡೆ ಒಲವು ತೋರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Join Whatsapp