ಪರೇಶ್ ಮೇಸ್ತಾ ಹತ್ಯೆ: ಸಿಬಿಐ ವರದಿಗೂ ಮುನ್ನವೇ ಪ್ರಕರಣಗಳ ವಿಚಾರಣೆ ಕೈಬಿಟ್ಟಿದ್ದೇಕೆ?

Prasthutha|

ಜಿ.ಮಹಾಂತೇಶ್
ಕೃಪೆ: ದಿ ಫೈಲ್.ಇನ್

- Advertisement -

ಬೆಂಗಳೂರು: ಹಿಂದೂಗಳ ಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಟ್ವಿಟ್ ಸಮರ ಮುಂದುವರೆದಿದೆ. ಹೊನ್ನಾವರದ ಪರೇಶ್ ಮೇಸ್ತ ಹತ್ಯೆ ಪ್ರಕರಣವನ್ನೂ ಸಿದ್ದರಾಮಯ್ಯ ಅವರು ಮುನ್ನೆಲೆಗೆ ತಂದಿದ್ದಾರೆ. ಇದೇ ಪರೇಶ್ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 4 ವರ್ಷಗಳಿಂದಲೂ ತನಿಖೆ ನಡೆಸುತ್ತಿರುವ ಸಿಬಿಐ ಇದುವರೆಗೂ ಯಾವುದೇ ಪ್ರಗತಿ ವರದಿಯನ್ನು ಸರ್ಕಾರದೊಂದಿಗೆ ಹಂಚಿಕೊಂಡಿಲ್ಲ. ಅಲ್ಲದೆ ರಾಜ್ಯ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದು 2 ವರ್ಷಗಳಾದರೂ ತನಿಖೆ ಪ್ರಗತಿ ವರದಿ ಮತ್ತು ಸದ್ಯದ ವಿವರಗಳನ್ನು ಪಡೆಯುವ ಗೋಜಿಗೆ ಹೋಗಿಲ್ಲ. ಸಿಬಿಐನಿಂದ ವರದಿ ತರಿಸಿಕೊಳ್ಳಲು ನಿರಾಸಕ್ತಿ ವಹಿಸಿರುವ ಬಿಜೆಪಿ ಸರ್ಕಾರವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಸಿಬಿಐ ವರದಿ ನೀಡುವ ಮುನ್ನವೇ ವಿಚಾರಣೆಯಿಂದ ಕೈಬಿಟ್ಟಿದ್ದ ಸಂಗತಿಯೂ ಮುನ್ನೆಲೆಗೆ ಬಂದಿದೆ.

ಬಿಜೆಪಿ ಸರ್ಕಾರದ 2 ವರ್ಷದ ಅಡಳಿತ ಅವಧಿಯಲ್ಲಿ ಒಮ್ಮೆಯೂ ಮೇಸ್ತ ಪ್ರಕರಣದ ತನಿಖಾ ಪ್ರಗತಿ ಕುರಿತು ಸಿಬಿಐಯನ್ನು ಸಂಪರ್ಕಿಸಿಲ್ಲ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸಹ ‘ ಪ್ರಸ್ತುತ ಪ್ರಕರಣವು ಸಿಬಿಐ ತನಿಖೆಯಲ್ಲಿರುತ್ತದೆ ಎಂದಷ್ಟೇ ಉತ್ತರಿಸಿ ನುಣುಚಿಕೊಂಡಿದ್ದಾರೆ.

- Advertisement -

ಮೇಸ್ತ ಹತ್ಯೆ ತನಿಖಾ ಪ್ರಕರಣ ಯಾವ ಹಂತದಲ್ಲಿದೆ, ವಿವರ ನೀಡುವುದು ಎಂದು ವಿಧಾನಸಭೆ ಅಧಿವೇಶನದಲ್ಲಿ ಕುಮಟ ಶಾಸಕ ದಿನಕರ್ ಕೇಶವ್ ಶೆಟ್ಟಿ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಆರಗ ಜ್ಞಾನೇಂದ್ರ ಅವರು ‘ಪರೇಶ್ ಮೇಸ್ತ ಹೊನ್ನಾವರ ತಾಲೂಕು ಇವರ ಹತ್ಯೆ ಪ್ರಕರಣವನ್ನು ಸರ್ಕಾರದ ಆದೇಶ ಸಂಖ್ಯೆ ಹೆಚ್ ಡಿ 115 115 ಸಿಐಡಿ 2017 ದಿನಾಂಕ 13.12.2017ರ ಆದೇಶದಲ್ಲಿ ಸಿಬಿಐ ತನಿಖೆಗೆ ವಹಿಸಿದೆ. ಪ್ರಸ್ತುತ ಸದರಿ ಪ್ರಕರಣವು ಸಿಬಿಐ ತನಿಖೆಯಲ್ಲಿರುತ್ತದೆ,’ ಎಂದು ಹೇಳಿ ತನಿಖೆಯ ಪ್ರಗತಿ ಕುರಿತು ಯಾವುದೇ ವಿವರವನ್ನೂ ಬಹಿರಂಗಪಡಿಸಿಲ್ಲ.


ಆದರೆ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದ್ದ ಪ್ರತಿಭಟನೆ ವೇಳೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಪೊಲೀಸ್ ಇಲಾಖೆಯ ಅಸಮ್ಮತಿ ನಡುವೆಯೂ ಬಿಜೆಪಿ ಸರ್ಕಾರವು ವಿಚಾರಣೆಯಿಂದಲೇ ಹಿಂದಕ್ಕೆ ಪಡೆದಿತ್ತು. ಅಲ್ಲದೆ ಸಿಬಿಐನಿಂದ ವರದಿ ಬರುವ ಮುನ್ನವೇ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ಕೈಬಿಡುವ ಮೂಲಕ ಕೂಡ ಸಂಶಯಗಳಿಗೆ ದಾರಿಮಾಡಿಕೊಟ್ಟಿತ್ತು.
ಪರೇಶ್ ಮೇಸ್ತಾ ಎಂಬ ಯುವಕನ ಹತ್ಯೆ ಪ್ರಕರಣದಲ್ಲಿ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣವನ್ನು ಕೈಬಿಡಲು ಶಾಸಕಿ ರೂಪಾಲಿನಾಯ್ಕ ಅವರು 2019ರ ಜುಲೈ 29ರಂದು ಪತ್ರ ಬರೆದಿದ್ದರು. ಆದರೆ ಪ್ರಕರಣಗಳ ವ್ಯತ್ಯಾಸವಿದೆ ಎಂದು ಡಿಜಿಐಜಿಪಿ ಅವರು ಒಳಾಡಳಿತ ಇಲಾಖೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೂ ಬಿಜೆಪಿ ಸರ್ಕಾರ ಪ್ರಕರಣವನ್ನು ವಿಚಾರಣೆಯಿಂದಲೇ ಹಿಂದಕ್ಕೆ ಪಡೆದಿತ್ತು.


ಈ ಪ್ರಕರಣ ಸಂಬಂಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ‘ಹಿಂದೂಗಳ ಹತ್ಯೆ ಬಗ್ಗೆ ಕಣ್ಣೀರು ಸುರಿಸುತ್ತಿರುವ ಬಸವರಾಜ ಬೊಮ್ಮಾಯಿ ಅವರೇ ಹೊನ್ನಾವರದ ಪರೇಶ್ ಮೇಸ್ತ ಹತ್ಯೆ ಪ್ರಕರಣ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ನಿಮ್ಮ ಪ್ರಭಾವ ಬೀರಿ ಶೀಘ್ರವಾಗಿ ಈ ಹತ್ಯೆಯ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಿ ಒಬ್ಬ ಹಿಂದು ಯುವಕನ ಸಾವಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುವಿರಾ,’ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.


ಪರೇಶ್ ಮೇಸ್ತ ಹತ್ಯೆ ಪ್ರಕರಣವು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ ಕರಾವಳಿ ಭಾಗದಲ್ಲಿ ತೀವ್ರ ಪ್ರತಿಭಟನೆ, ಗಲಾಟೆಗಳಿಗೆ ಕಾರಣವಾಗಿತ್ತು. ಈ ಪ್ರಕರಣವನ್ನು ಅತ್ಯಂತ ಪ್ರತಿಷ್ಠೆಯನ್ನಾಗಿಸಿಕೊಂಡಿದ್ದ ಬಿಜೆಪಿಯೇ ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಸಿಬಿಐನಿಂದ ವರದಿ ತರಿಸಿಕೊಳ್ಳಲು ಆಸಕ್ತಿ ವಹಿಸುತ್ತಿಲ್ಲ. ಮೇಸ್ತ ಹತ್ಯೆಯಾದ ನಂತರ ಬಿಜೆಪಿಯ ಅಂದಿನ ರಾಷ್ಟ್ರಾಧ್ಯಕ್ಷ ಹಾಗೂ ಹಾಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದರು.


ಹೊನ್ನಾವರ ನಿವಾಸಿ ಆಜಾದ್ ಅಣ್ಣಿಗೇರಿ, ಆಸಿಫ್ ರಫೀಕ್, ಮುಹಮ್ಮದ್ ಫೈಸಲ್, ಇಮ್ತಿಯಾಜ್ ಘನಿ, ಸಲೀಂ ಸೇರಿದಂತೆ ಇನ್ನಿತರರ ವಿರುದ್ಧ ಗಲಭೆ, ಶಸ್ತ್ರಾಸ್ತ್ರ, ಅಕ್ರಮ ಗುಂಪು ಸೇರುವಿಕೆ ಸೇರಿದಂತೆ ಇನ್ನಿತರ ಐಪಿಸಿ ಕಾಯಿದೆಯ ಕಲಂಗಳ ಅಡಿ ಏ.23ರಂದು ಚೆನ್ನೈ ಸಿಬಿಐ ವಿಭಾಗದಲ್ಲಿ ಎಫ್ ಐಆರ್ ದಾಖಲಾಗಿದೆ. 2017ರ ಡಿ. 6 ರಂದು ಪರೇಶ್ ಮೇಸ್ತನನ್ನು ಕೊಲೆ ಮಾಡಿ ಶವವನ್ನು ಕೆರೆಯಲ್ಲಿ ಬಿಸಾಡಲಾಗಿತ್ತು ಎಂಬ ಆರೋಪವಿದೆ. ಈ ಪ್ರಕರಣವನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಸಿಬಿಐಗೆ 2017ರಲ್ಲಿ ವಹಿಸಿತ್ತು.


ಎಫ್ ಐಆರ್ ದಾಖಲಾದ ನಂತರದ ಪ್ರಗತಿ ಆಗಿದೆಯೇ?
ಡಿ. 6ರಂದು ರಾತ್ರಿ ಆರೋಪಿಗಳು ಹೊನ್ನಾವರ ಬಸ್ ನಿಲ್ದಾಣದ ಬಳಿ ಕಬ್ಬಿಣದ ರಾಡ್, ಕತ್ತಿ ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದೇವಸ್ಥಾನ, ಅಂಗಡಿಗಳು, ಟೆಂಪೊ ವಾಹನಗಳು ಸೇರಿದಂತೆ ಸಾರ್ವಜನಿಕ ಆಸ್ತಿ-ಪಾಸ್ತಿ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ್ದರು. ಅಲ್ಲದೇ, ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ 18 ವರ್ಷದ ಯುವಕ ಪರೇಶ್ ಮೇಸ್ತನನ್ನು ಹತ್ಯೆಗೈಯಲಾಗಿತ್ತು. ಬಳಿಕ ಶವವನ್ನು ಶೆಟ್ಟಿಕೆರೆಯಲ್ಲಿ ಬಿಸಾಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರು. ಕೊಲೆಯಾದ ಎರಡು ದಿನಗಳ ಬಳಿಕ ಅಂದರೆ ಡಿ.8ರಂದು ಶವ ಪತ್ತೆಯಾಗಿತ್ತು ಎಂದು ಸಿಬಿಐ ಎಫ್ ಐಆರ್ನಲ್ಲಿ ಉಲ್ಲೇಖಿಸಿತ್ತು.


ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಆ ನಂತರ ಎಫ್ ಐಆರ್ ದಾಖಲಿಸಿಕೊಂಡಿದ್ದ ಸಿಬಿಐ ಪೊಲೀಸರು, ಪ್ರಕರಣದ ಕುರಿತು ಹೊಸದಾಗಿ ತನಿಖೆಗೆ ಕೈಗೆತ್ತಿಕೊಂಡಿತ್ತು. ತನಿಖೆಯ ಹೊಣೆ ಹೊತ್ತಿದ್ದ ಸಿಬಿಐನ ಇನ್ಸ್ ಪೆಕ್ಟರ್ ಎಸ್. ಸುಬ್ರಮಣಿಯನ್ ತನಿಖೆಗೆ ಚಾಲನೆ ನೀಡಿದ್ದರು. ಆದರೆ ಈ ಸಂಬಂಧ ತನಿಖಾ ಪ್ರಗತಿ ಏನಾಗಿದೆ ಎಂಬ ಮಾಹಿತಿ ಖುದ್ದು ಒಳಾಡಳಿತ ಇಲಾಖೆಗೇ ಇಲ್ಲ ಎಂದು ತಿಳಿದು ಬಂದಿದೆ.


ಹತ್ಯೆ ಪ್ರಕರಣವನ್ನು ವಿರೋಧಿಸಿದ್ದ ಬಿಜೆಪಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಕರಾವಳಿ ಭಾಗದ ವಿವಿಧ ಪಟ್ಟಣಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಇದು ಹೊನ್ನಾವರ, ಕುಮಟಾ, ಕಾರವಾರ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆದು ಕೋಮು ಗಲಭೆಗೆ ತಿರುಗಿಕೊಂಡಿತ್ತು. ಹಾಗೆಯೇ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಉತ್ತರ ಕನ್ನಡ ಜಿಲ್ಲೆ ಬಂದ್ ವೇಳೆ ಕಾರವಾರದಲ್ಲಿನ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದನ್ನು ಸ್ಮರಿಸಬಹುದು

Join Whatsapp