ಕಾಂಗ್ರೆಸ್ಸಿಗೆ ಸ್ಪಷ್ಟವಾದ ನಿಲುವಿಲ್ಲ: ಸಿಎಂ ಬೊಮ್ಮಾಯಿ

Prasthutha|

ಬೆಳಗಾವಿ: ಕಾಂಗ್ರೆಸ್ಸಿಗೆ ಸ್ಪಷ್ಟವಾದ ನಿಲುವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

- Advertisement -

ಅವರು ಇಂದು ರಾಯಭಾಗದಲ್ಲಿ  ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಒಂದೆಡೆ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ಹಿಂಪಡೆಯುವುದಿಲ್ಲ ಎಂದಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ಇದನ್ನು ಒಪ್ಪುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನುಣುಚಿ ಕೊಳ್ಳುತ್ತಿದ್ದಾರೆ. ಯಾಕಿಷ್ಟು ಅಸ್ಪಷ್ಟತೆ ಕಾಂಗ್ರೆಸ್ ನಲ್ಲಿ ಇದೆ ಎಂದು ತಿಳಿದಿಲ್ಲ ಎಂದು ಅವರು ತಿಳಿಸಿದರು.

- Advertisement -

ಸತೀಶ್ ಜಾರಕಿಹೊಳಿ ಒಪ್ಪಿಲ್ಲ ಎಂದರೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಒಪ್ಪಿದ್ದೇವೆ ಎನ್ನಬೇಕು. ಬಹುಸಂಖ್ಯಾತ ಹಿಂದೂಗಳಿದ್ದಾರೆ. ಪರಿಶಿಷ್ಟರಿದ್ದಾರೆ ಅವರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ನೂರು ವರ್ಷಗಳ ಹಳೆ ಪಕ್ಷ ನಡೆದುಕೊಳ್ಳುತ್ತಿದೆ. ಅಂದರೆ ಭಾರತವನ್ನು ಗೊಂದಲದಲ್ಲಿಟ್ಟು ಆಳಬೇಕೆನ್ನುವ ಮೂಲ ಸಿದ್ಧಾಂತವಿದೆ. ರಾಹುಲ್ ಗಾಂಧಿ ಸುಮ್ಮನಿದ್ದಾರೆ. ಅವರು ಒಂದೆಡೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತಾರೆ, ಇನ್ನೊಂದೆಡೆ ಈ ರೀತಿಯ ಹೇಳಿಕೆಗಳು ಬಂದಾಗ ಪರೋಕ್ಷವಾಗಿ ಬೆಂಬಲ ನೀಡುತ್ತಾರೆ. ಈ ದ್ವಂದ್ವ ನೀತಿ ಕಾಂಗ್ರೆಸ್ ಗೆ ಒಳ್ಳೆಯದಲ್ಲ ಎಂದರು.

ಯಾರ ಭಾವನೆಗಳಿಗೂ ಧಕ್ಕೆ ತರಬಾರದು ಎಂಬ ಅರಿವಿನಿಂದ ನಡೆದುಕೊಳ್ಳಬೇಕು

ಹೇಳಿಕೆ ತಪ್ಪು ಎಂದು ಸಾಬೀತಾದರೆ ರಾಜೀನಾಮೆ ನೀಡುವುದಾಗಿ ಸತೀಶ್ ಜಾರಕಿಹೊಳಿ ಹೇಳಿರುವ ಬಗ್ಗೆ ಉತ್ತರಿಸಿ ಯಾವ ಪುರಾವೆಯ  ಆಧಾರದ ಮೇಲೆ ಅವರು ಹೇಳಿದ್ದಾರೆ ಎಂದು ಬಹಿರಂಗಪಡಿಸಲಿ. ಅವರ ಹೇಳಿಕೆ ಯಾವುದನ್ನು ಆಧರಿಸಿದ್ದು ಎನ್ನುವುದೇ ಸಾಕ್ಷಿಯಾಗುತ್ತದೆ. ಅಂತರ್ಜಾಲದಲ್ಲಿ  ಹತ್ತು ಹಲವಾರು ವಿಚಾರಗಳಿರುತ್ತವೆ.  ಎಲ್ಲಾ ವಿಚಾರಗಳಲ್ಲಿ ಪರ, ವಿರೋಧ ಇದ್ದೇ ಇರುತ್ತದೆ. ಆದರೆ ನಾವು ಯಾವುದನ್ನು ತೆಗೆದುಕೊಳ್ಳಬೇಕು ಎಂದು ವಿಚಾರ ಮಾಡಬೇಕು.  ಸಾರ್ವಜನಿಕ ಜೀವನದಲ್ಲಿ  ಯಾರ ಭಾವನೆಗಳಿಗೂ ಧಕ್ಕೆ ತರಬಾರದು ಎಂಬ ಅರಿವಿನಿಂದ ನಡೆದುಕೊಳ್ಳಬೇಕು ಎಂದರು.

ಚರ್ಚೆ ಮಾಡಲು ವಸ್ತುವಿಲ್ಲ. ಅವರ ಹೇಳಿಕೆ ಅತ್ಯಂತ ಅಸಂಗತ್ಯವಾಗಿದೆ. ಮಾಧ್ಯಮ ಗಳಲ್ಲಿ ಅದು ತಪ್ಪು  ಎಂದು ಹೇಳಿದ್ದಾರೆ. ಒಪ್ಪಲು ತಯಾರಿಲ್ಲದಿದ್ದರೆ ಮುಂದೆ ಅನುಭವಿಸುತ್ತಾರೆ ಎಂದರು.

Join Whatsapp