ಇನ್ನು ಮುಂದೆ ಕನ್ನಡದಲ್ಲೂ ‘ನಂದಿ ಫೀಲ್ಮ್ ಅವಾರ್ಡ್’: ಲೋಗೋ ಬಿಡುಗಡೆ ಮಾಡಿದ ಸಿದ್ದರಾಮಯ್ಯ

Prasthutha|

ಬೆಂಗಳೂರು: ತೆಲುಗು ಸಿನಿಮಾ ರಂಗದಲ್ಲಿ ಅನನ್ಯ ಸೇವೆಗೈದ ಸಾಧಕರಿಗೆ ನಂದಿ ಪ್ರಶಸ್ತಿ ಕೊಡಲಾಗುತ್ತದೆ. ಇದೇ ನಂದಿ ಪ್ರಶಸ್ತಿ ಈಗ ಕನ್ನಡದಲ್ಲಿಯೂ ಪ್ರಾರಂಭವಾಗುತ್ತಿದೆ. ಅದರ ಭಾಗವಾಗಿ ನಂದಿ ಅವಾರ್ಡ್​ನ ಲೋಗೋ ಅನ್ನು ಸಿಎಂ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಪ್ರಶಸ್ತಿಯನ್ನು ಕೊಡಲಾಗುತ್ತಿದ್ದು, ಸರ್ಕಾರದ ನೆರವು, ಸಹಕಾರ ಇರಲಿದೆ ಎನ್ನಲಾಗುತ್ತಿದೆ.

- Advertisement -

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ ನೇತೃತ್ವದ ನಿಯೋಗ ಸೆಪ್ಟೆಂಬರ್ 15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಂದಿ ಪ್ರಶಸ್ತಿಯ ಲೋಗೋ ಅನಾವರಣ ಮಾಡಿಸಿದ್ದಾರೆ. ಅನಿತಾ ರೆಡ್ಡಿ, ನಿತ್ಯನಂದ ಪ್ರಭು, ಪದ್ಮವತಿ ಚಂದ್ರಶೇಖರ್, ಭಾಮಾ ಗಿರೀಶ್, ಗಿರೀಶ್ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

‘ನಂದಿ’ ‘ಕನ್ನಡದ ಹೆಮ್ಮೆ’ ಈ ಹೆಸರಿನಲ್ಲಿ ಪ್ರಶಸ್ತಿ ಕೊಡಬೇಕೆಂದು ಸಿನಿಮಾ ರಂಗದ ಸ್ನೇಹಿರೊಂದಿಗೆ ಚರ್ಚಿಸಿ ಈ ತೀರ್ಮಾನ ಮಾಡಲಾಗಿದೆ ಎಂದು ಅಧ್ಯಕ್ಷ ಭಾ.ಮಾಹರೀಶ್ ತಿಳಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಪ್ರತಿ ವರ್ಷ ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ‘ನಂದಿ ಪ್ರಶಸ್ತಿ’ ನೀಡಲಾಗುತ್ತದೆ.

- Advertisement -

ಕೆಲವೇ ದಿನಗಳಲ್ಲಿ ವಾಣಿಜ್ಯ ಚಲನಚಿತ್ರ ಮಂಡಳಿ ಚುನಾವಣೆ ನಡೆಯಲಿದೆ, ಹೊಸ ಪದಾಧಿಕಾರಿಗಳ ಆಯ್ಕೆ ಬಳಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಪ್ರಸ್ತುತ ರಾಜ್ಯ ಸರ್ಕಾರವು ಸಿನಿಮಾಕ್ಕೆ ಸಂಬಂಧಿಸಿದಂತೆ ರಾಜ್ಯ ಪ್ರಶಸ್ತಿಗಳನ್ನು ನೀಡುತ್ತಿದೆ. ಇದರ ಹೊರತಾಗಿ ಕೆಲವು ಖಾಸಗಿ ಪ್ರಶಸ್ತಿಗಳು ಇವೆ. ಇದೀಗ ಆರಂಭವಾಗಿರುವ ನಂದಿ ಪ್ರಶಸ್ತಿಯು ರಾಜ್ಯ ಪ್ರಶಸ್ತಿಯ ಬಳಿಕ ಹೆಚ್ಚು ಘನತೆಯುಕ್ತ ಪ್ರಶಸ್ತಿಯಾಗಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ.

Join Whatsapp