ಆರ್ಥಿಕ ಸಂಕಷ್ಟದ ನಡುವೆಯೂ ಸಚಿವರಿಗೆ ದುಬಾರಿ ಕಾರುಗಳ ಖರೀದಿಗೆ ಮುಂದಾದ ಯಡಿಯೂರಪ್ಪ ಸರಕಾರ!

Prasthutha|

- Advertisement -

ಬೆಂಗಳೂರು : ಕೊರೊನಾದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದರಿಂದ ಅನೇಕ ಮೂಲಭೂತ ಅಭಿವೃದ್ಧಿ ಕಾರ್ಯಗಳಿಗೂ ಕೂಡ ಅನುದಾನವನ್ನು ಕಡಿತಗೊಳಿಸಲಾಗಿದೆ. ಆದರೆ ನಮ್ಮ ಜನಪ್ರತಿನಿಧಿಗಳ ದುಂದುವೆಚ್ಚಕ್ಕೆ ಮಾತ್ರ ಕಡಿವಾಣ ಬೀಳಲಿಲ್ಲ. ಕೊರೊನಾ ವೈರಸ್ ಆರ್ಥಿಕ ಸಂಕಷ್ಟದ ಮಧ್ಯೆ ರಾಜ್ಯದ ಸಚಿವರು ಹಾಗೂ ಸಂಸದರು ಐಷಾರಾಮಿ ಹೊಸ ಕಾರು ಕೊಳ್ಳಲು ಖರೀದಿಯ ಮೊತ್ತವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿದೆ

ಸಚಿವರು ಹಾಗೂ ರಾಜ್ಯದ ಎಲ್ಲ ಸಂಸದರು ಹೊಸ ಕಾರು ಖರೀದಿ ಮಾಡಲು 23 ಲಕ್ಷ ರೂಪಾಯಿ ನೀಡಲು ಸರ್ಕಾರ ಸಮ್ಮತಿಸಿದೆ. ಹೀಗಾಗಿ ರಾಜ್ಯದ ಎಲ್ಲಾ ಸಚಿವರು, ಸಂಸದರು ಕಾರು ಖರೀದಿ ಮಾಡಲು ಸರ್ಕಾರದಿಂದ 23 ಲಕ್ಷ ರೂ. ಗಳನ್ನು ಪಡೆಯಲು ಅವಕಾಶವಿದೆ. ಈ ಹಿಂದೆ ಕಾರು ಖರೀದಿಗೆ ನೀಡುತ್ತಿದ್ದ ಮೊತ್ತವನ್ನು ಹೆಚ್ಚಳ ಮಾಡಲು ಸಚಿವರು, ಸಂಸದರಿಂದ ಒತ್ತಡ ಬಂದಿತ್ತು. ಹೀಗಾಗಿ ಸಚಿವರು ಮತ್ತು ಸಂಸದರ ಒತ್ತಡಕ್ಕೆ ಮಣಿದ ಸರ್ಕಾರದಿಂದ ಹೊಸ ಕಾರು ಖರೀದಿಗೆ 23 ಲಕ್ಷ ರೂ. ಅನುದಾನ ಬಿಡುಗಡೆಗೆ ಒಪ್ಪಿಕೊಂಡಿದೆ.

- Advertisement -

ರಾಜ್ಯದ 33 ಸಚಿವರು (ಸಿಎಂ ಹೊರತು ಪಡಿಸಿ) ಹಾಗೂ 28 ಸಂಸದರು ಹೊಸ ಐಷಾರಾಮಿ ಕಾರುಗಳನ್ನು ಕೊಳ್ಳಬಹುದಾಗಿದೆ. ಅದಕ್ಕೆ ಸರ್ಕಾರ ತಲಾ 23 ಲಕ್ಷ ರೂಪಾಯಿಗಳನ್ನು ಒದಗಿಸಲಿದೆ. ಎಲ್ಲ ಸಚಿವರು ಹಾಗೂ ಸಂಸದರು ಐಶಾರಾಮಿ ಕಾರುಗಳನ್ನು ಖರೀದಿಗೆ ಸುಮಾರು 14 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ವ್ಯಯಿಸಬೇಕಾಗುತ್ತದೆ.

ಮೊದಲೇ ಕೊರೊನಾ ವೈರಸ್ ಸಂಕಷ್ಟದಿಂದ ಮಕ್ಕಳ ಶಾಲಾ ಶುಲ್ಕವನ್ನು ಕಟ್ಟಲು ಜನರು ಪರದಾಡುತ್ತಿದ್ದಾರೆ. ಆದರೆ ನಮ್ಮ ಜನಪ್ರತಿನಿಧಿಗಳು ಮಾತ್ರ ತಮ್ಮ ಐಷಾರಾಮಿ ಬದುಕಿನಿಂದ ಹೊರಗೆ ಬರಲಿಲ್ಲ.  ಒಂದು ವರ್ಷಕ್ಕೆ ಕಾರು ಖರೀದಿ ಮುಂದೂಡಿದ್ದರೆ ಏನೂ ಆಗುತ್ತಿರಲಿಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ.

Join Whatsapp