ಲವ್ ಮ್ಯಾರೇಜ್” ರದ್ದುಗೊಳಿಸಿದ ಹೈಕೋರ್ಟ್ |ಯುವ ಜೋಡಿಗೆ ದಂಡ..!

Prasthutha|


ಹರಿಯಾಣ; ಪ್ರೀತಿಸಿ, ಮದುವೆಗೆ ಮನೆಯವರ ವಿರೋಧ ಎದುರಾದ ಕಾರಣ ಓಡಿಹೋಗಿ ಮದುವೆಯಾಗಿದ್ದ ಯುವ ಜೋಡಿಗೆ ನ್ಯಾಯಾಲಯ ದಂಡ ವಿಧಿಸಿ, ಮದುವೆಯನ್ನು ಅಸಿಂಧುಗೊಳಿಸಿದ ಘಟನೆ ಹರಿಯಾಣದಲ್ಲಿ ನಡೆದಿದೆ.

- Advertisement -


19 ವರ್ಷದ ಯುವಕ ಹಾಗೂ 20 ವರ್ಷದ ಯುವತಿ ತಮಗೆ ಕುಟುಂಬಸ್ಥರಿಂದ ಬೆದರಿಕೆ ಇದೆ ಎಂದು ಹೇಳಿ, ರಕ್ಷಣೆಯನ್ನು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು ನ್ಯಾಯಾಲಯದ ‘ದಾರಿತಪ್ಪಿಸಿದ’ ಆರೋಪದಲ್ಲಿ ಜೋಡಿಗೆ 25,000 ದಂಡ ವಿಧಿಸಿ, ವಿವಾಹವನ್ನು ಅಸಿಂಧುಗೊಳಿಸಿದೆ.


ಆಗಿದ್ದೇನು..?
ಯುವ ಜೋಡಿಯು ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯ ಪ್ರಕಾರ, ಊರು ಬಿಟ್ಟು ಬಂದ ಬಳಿಕ ಹೊಟೇಲ್ ಕೋಣೆಯೊಂದರಲ್ಲಿ ತಂಗಿದ್ದ ಜೋಡಿಯು, ಸೆಪ್ಟೆಂಬರ್ 26, 2021 ರಂದು ವಿವಾಹವಾಗಿದೆ. ಯುವಕ ಮತ್ತು ಯುವತಿಯ ಹಣೆಗೆ ಸಿಂಧೂರ ಹಾಕಿದ ಬಳಿಕ ಕೊಠಡಿಯಲ್ಲಿದ್ದ ಪಾತ್ರೆಯಲ್ಲಿ ಬೆಂಕಿಯನ್ನು ಹಾಕುವ ಮೂಲಕ ಸಪ್ತಪದಿ ತುಳಿದಿದ್ದಾರೆ. ಬಳಿಕ ಇಬ್ಬರೂ ಹೂಮಾಲೆಯನ್ನು ಅದಲು ಬದಲು ಮಾಡಿಕೊಂಡಿದ್ದಾರೆ. ಹೀಗಾಗಿ ಯಾವುದೇ ವಿವಾಹ ಪ್ರಮಾಣ ಪತ್ರವಾಗಲಿ, ಚಿತ್ರಗಳಾಗಲಿ ನಮ್ಮ ಬಳಿ ಇಲ್ಲ. ಇನ್ನು ಮದುವೆ ನಡೆದ ಸ್ಥಳದಲ್ಲಿ ಬೇರೆ ಯಾರೂ ಕೂಡಾ ಸಾಕ್ಷಿಯಾಗಿ ಇರಲಿಲ್ಲ ಎಂದು ಈ ಜೋಡಿಯು ಹೇಳಿಕೊಂಡಿದೆ.

- Advertisement -


ಈ ಜೋಡಿಯ ವಿವರಣೆಯನ್ನು ಆಲಿಸಿದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್’ನ ನ್ಯಾಯಮೂರ್ತಿ ಗುರುವಿಂದರ್ ಸಿಂಗ್ ಗಿಲ್ರನ್ನು ಒಳಗೊಂಡ ನ್ಯಾಯಾಪೀಠವು, ಈ ಪ್ರಕರಣದಲ್ಲಿ ಯುವಕನು ವಿವಾಹವಾಗುವ ವಯಸ್ಸಿನವನು ಅಲ್ಲ ಎಂಬುವುದನ್ನು ಗುರುತಿಸಿದ್ದಾರೆ. ಭಾರತದಲ್ಲಿ ವಿವಾಹವಾಗಲು ಪುರುಷರಿಗೆ 21 ವಯಸ್ಸಿನ ಮಿತಿಯಾಗಿದೆ. ಆದರೆ ಈ ಯುವಕನಿಗೆ 19 ವರ್ಷವಾಗಿದೆ.
“ಈ ಜೋಡಿಯು ವಿವಾಹವಾಗಿದ್ದೇವೆ ಎಂದು ಹೇಳುವ ಮೂಲಕ ನ್ಯಾಯಾಲಯವನ್ನು ದಾರಿ ತಪ್ಪಿಸಿದೆ. ಆದರೆ ಈ ಜೋಡಿ ವಿವಾಹವಾಗಿರುವ ಬಗ್ಗೆ ಯಾವುದೇ ಸಾಕ್ಷಿಯೂ ಇಲ್ಲ. ಈ ಜೋಡಿಯು ಹೋಟೆಲ್ ರೂಮ್ ನಲ್ಲಿ ವಿವಾಹವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅದು ಕೂಡಾ ಯಾವುದೇ ಶ್ಲೋಕವನ್ನು ಹೇಳದೆಯೇ ವಿವಾಹವಾಗಿದ್ದೇವೆ ಎಂದಿದ್ದಾರೆ.


ಇನ್ನು ಈ ಜೋಡಿಗೆ ರಕ್ಷಣೆ ಇಲ್ಲ, ಜೀವಕ್ಕೆ ಅಪಾಯ ಇದೆ ಎಂದಾದರೆ ಈ ಬಗ್ಗೆ ಪೊಲೀಸ್ ಆಯುಕ್ತರು ಪರಿಶೀಲನೆ ನಡೆಸಿ, ಹಾಗೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗುವುದು,” ಎಂದು ನ್ಯಾಯಮೂರ್ತಿ ಗುರುವಿಂದರ್ ಸಿಂಗ್ ಗಿಲ್ ತಿಳಿಸಿದ್ದಾರೆ.

Join Whatsapp