ಹೋರಾಡಿ ಸೋತ ಆಫ್ರಿಕಾ| ಟಿ20 ಸರಣಿ ಗೆದ್ದ ಟೀಮ್‌ ಇಂಡಿಯಾ

Prasthutha|

ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯ ಎರಡನೇ ಪಂದ್ಯದಲ್ಲೂ ಜಯಭೇರಿ ಬಾರಿಸಿದ ಟೀಮ್‌ ಇಂಡಿಯಾ, ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಸರಣಿಯನ್ನು  ತನ್ನದಾಗಿಸಿಕೊಂಡಿದೆ. ತಿರುವನಂತಪುರಂನಲ್ಲಿ ನಡೆದಿದ್ದ ಸರಣಿಯ ಮೊದಲನೇ ಪಂದ್ಯದಲ್ಲಿ ಟೀಮ್‌ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಇದೇ ಮೊದಲ ಬಾರಿಗೆ ತಾಯ್ನೆಲದಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಟಿ20 ಸರಣಿ ಗೆದ್ದ ಸಾಧನೆ ಮಾಡಿದೆ

- Advertisement -

ಭಾರತ ನೀಡಿದ್ದ 238 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಲು ಆಫ್ರಿಕಾ, ಅಂತಿಮ ಓವರ್‌ವರೆಗೂ ಹೋರಾಡಿತು. ನಿಗಧಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 221 ರನ್‌ಗಳಿಸಿತು. ಆಮೂಲಕ 16 ರನ್‌ಗಳ ಅಂತರದಲ್ಲಿ ಶರಣಾಯಿತು. ಆರಂಭಿಕ ಕ್ವಿಂಟನ್‌ ಡಿ ಕಾಕ್‌ 69 ಮತ್ತು ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಎಡಗೈ ಬ್ಯಾಟರ್‌ ಡೇವಿಡ್‌ ಮಿಲ್ಲರ್‌ 106 ರನ್‌ಗಳಿಸಿ ಅಜೇಯರಾಗುಳಿದರು. 

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಒಟ್ಟು 40 ಓವರ್‌ಗಳಲ್ಲಿ 450+ ರನ್‌ ದಾಖಲಾಗುವ ಮೂಲಕ, ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಭರಪೂರ ಮನರಂಜನೆ ಪಡೆದರು. 

- Advertisement -

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ್ದ  ಭಾರತ,  ರಾಹುಲ್‌ -ಕೊಹ್ಲಿ-ಸೂರ್ಯಕುಮಾರ್‌ ಯಾದವ್‌ ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ 237 ರನ್‌ಗಳಿಸಿತ್ತು

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ  ಟಾಸ್‌ ಗೆದ್ದ ತೆಂಬ ಬವುಮಾ, ರೋಹಿತ್‌ ಬಳಗವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಆದರೆ ಆಫ್ರಿಕಾ ನಾಯಕನ ಯೋಜನೆಗಳನ್ನು ತಲೆಕೆಳಗಾಗಿಸಿದ ರೋಹಿತ್‌ ಬಳಗ, ಹರಿಣ ಬೌಲರ್‌ಗಳ ಮೇಲೆ ದಂಡತ್ತಿ ಹೋದರು. ಆರಂಭಿಕ ಕೆ.ಎಲ್‌. ರಾಹುಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಭರ್ಜರಿ ಅರ್ಧಶತಕ ದಾಖಲಿಸಿದರೆ, ಮಾಜಿ ನಾಯಕ ವಿರಾಟ್‌ ಕೊಹ್ಲಿ 49 ರನ್‌ಗಳಿಸಿ ಅಜೇಯರಾಗುಳಿದರು. ಆ ಮೂಲಕ ಕೇವಲ ಒಂದು ರನ್‌ನಿಂದ ಅರ್ಧಶತಕ ವಂಚಿತರಾದರು.

ನಾಯಕ ರೋಹಿತ್‌ ಶರ್ಮಾ 43 ರನ್‌ ಮತ್ತು ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ 7 ಎಸೆತಗಳಲ್ಲಿ 17 ರನ್‌ಗಳಿಸಿ ಅಜೇಯರಾಗುಳಿದರು. ರಾಹುಲ್‌ 28 ಎಸೆತಗಳಲ್ಲಿ 57 ರನ್‌ಗಳಿಸಿದರೆ (4×5, 6×4), ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ ಸೂರ್ಯಕುಮಾರ್‌ ಯಾದವ್‌ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. 22 ಎಸೆತಗಳಲ್ಲಿ 61 ರನ್‌ಗಳಿಸಿದ್ದ ವೇಳೆ ರನೌಟ್‌ಗೆ ಬಲಿಯಾದರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 1000 ರನ್‌ ಪೂರ್ತಿಗೊಳಿಸಿದರು. ಅಂತಿಮವಾಗಿ ಭಾರತ ನಿಗಧಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 237 ರನ್‌ಗಳಿಸಿ ಇನ್ನಿಂಗ್ಸ್‌ ಮುಗಿಸಿತ್ತು. 

Join Whatsapp