ರೈತ ಕ್ರಾಂತಿ | ಸೆಲೆಬ್ರಿಟಿಗಳ ಟ್ವೀಟ್ ವಿವಾದದ ತನಿಖೆ; ಬಿಜೆಪಿ ಐಟಿ ಸೆಲ್, 12 ಪ್ರಭಾವಿಗಳು ಭಾಗಿ : ಸಚಿವ

Prasthutha|

ಮುಂಬೈ : ಪ್ರಧಾನಿ ಮೋದಿ ಸರಕಾರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಎರಡು ತಿಂಗಳುಗಳಿಂದ ಪ್ರತಿಭಟನೆ ಮಾಡುತ್ತಿರುವ ರೈತರ ಪರವಾಗಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ ಬೆನ್ನಲ್ಲೇ, ಭಾರತದ ಸೆಲೆಬ್ರಿಟಿಗಳು ಬಿಜೆಪಿ ಸರಕಾರದ ಪರವಾಗಿ ಟ್ವೀಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೊರಹಾಕಿದ್ದಾರೆ.

- Advertisement -

ಭಾರತದ ಸೆಲೆಬ್ರಿಟಿಗಳ ಈ ಟ್ವೀಟ್ ಪ್ರಕರಣದ ಹಿಂದೆ, ಇಲ್ಲಿ ವರೆಗೆ ನಡೆದಿರುವ ತನಿಖೆಯಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಮತ್ತು 12 ಪ್ರಭಾವಿಗಳ ಹೆಸರುಗಳು ಮುಂದೆ ಬಂದಿವೆ ಎಂದು ಸಚಿವರು ಹೇಳಿದ್ದಾರೆ.

ಕೋವಿಡ್ 19ನಿಂದ ಗುಣಮುಖರಾಗಿ, ಮೊದಲ ಬಾರಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಮ್ಮ ಈ ಹಿಂದಿನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

- Advertisement -

“ನನ್ನ ಹೇಳಿಕೆ ತಿರುಚಲಾಗಿದೆ. ಸೆಲೆಬ್ರಿಟಿಗಳನ್ನು ತನಿಖೆಗೊಳಪಡಿಸಲಾಗುತ್ತದೆ ಎಂದು ನಾನು ಹೇಳಿಲ್ಲ. ಲತಾ ಮಂಗೇಶ್ಕರ್ ನಮಗೆ ದೇವರಿದ್ದಂತೆ. ಇಡೀ ಜಗತ್ತು ಸಚಿನ್ ತೆಂಡೂಲ್ಕರ್ ಅವರನ್ನು ಗೌರವಿಸುತ್ತದೆ. ಟ್ವೀಟ್ ಗಳ ಮೇಲೆ ಪರಿಣಾಮ ಬೀರಲಾಗಿದೆಯೇ?, ಇಲ್ಲವೇ? ಎಂಬುದರ ಬಗ್ಗೆ ಬಿಜೆಪಿ ಐಟಿ ಸೆಲ್ ಪಾತ್ರವನ್ನು ಮಾತ್ರ ನಾವು ತನಿಖೆ ಮಾಡುತ್ತಿದ್ದೇವೆ ಎಂದು ದೇಶ್ಮುಖ್ ಹೇಳಿದ್ದಾರೆ.

ರೈತರ ಹೋರಾಟಕ್ಕೆ ಸಂಬಂಧಿಸಿ ಸೆಲೆಬ್ರಿಟಿಗಳು ಟ್ವೀಟ್ ಮಾಡುವಂತೆ ಒತ್ತಡ ಹೇರಲಾಗಿದೆ ಎಂಬ ಆರೋಪಗಳ ಬಗ್ಗೆ ಮಹಾರಾಷ್ಟ್ರ ಸರಕಾರದ ಗುಪ್ತಚರ ಇಲಾಖೆ ತನಿಖೆ ನಡೆಸುತ್ತಿದೆ.

ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಅಂತಾರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕಿ ರಿಹಾನ್ನಾ ಟ್ವೀಟ್ ಮಾಡಿದ ಬೆನ್ನಲ್ಲೇ, ವಿಷಯ ಜಾಗತಿಕ ಗಮನ ಸೆಳೆದಿತ್ತು. ಇದರ ಬೆನ್ನಿಗೇ, ದೇಶದ ಬಿಜೆಪಿ ಸರಕಾರದ ಮರ್ಯಾದೆ ಉಳಿಸಲು ಕೆಲವು ಭಾರತೀಯ ಸೆಲೆಬ್ರಿಟಿಗಳು ಇದರ ವಿರುದ್ಧ ಟ್ವೀಟ್ ಗಳನ್ನು ಮಾಡಿದ್ದರು. ಈ ಸೆಲೆಬ್ರಿಟಿಗಳು ಮಾಡಿರುವ ಟ್ವೀಟ್ ಗಳಲ್ಲಿ ಹೋಲಿಕೆಗಳಿದ್ದ ಹಿನ್ನೆಲೆಯಲ್ಲಿ, ಬಿಜೆಪಿ ಕಡೆಯಿಂದ ಒತ್ತಡ ಹೇರಿ ಟ್ವೀಟ್ ಮಾಡಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

Join Whatsapp