ಡಾ. ಕಫೀಲ್ ಖಾನ್ ವಿರುದ್ಧ ಮುಂದುವರೆದ ಆದಿತ್ಯನಾಥ್ ದ್ವೇಷ : BRD ಮಕ್ಕಳ ಆಸ್ಪತ್ರೆ ಕಾಲೇಜಿನಿಂದ ವಜಾ!

Prasthutha|

ಲಖ್ನೋ: BRD ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞ ಕಫೀಲ್ ಖಾನ್ ಅವರನ್ನು ಉತ್ತರಪ್ರದೇಶ ಸರ್ಕಾರ ವಜಾಗೊಳಿಸಿದೆ.

- Advertisement -

ಸರ್ಕಾರಿ ವಕ್ತಾರರು ಈ ಕುರಿತು ಖಚಿತಪಡಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

ತನ್ನ ವಿರುದ್ಧ ದಾಖಲಿಸಿದ್ದ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದ ಪ್ರಕರಣದಲ್ಲಿ ಕ್ಲೀನ್ ಚಿಟ್ ಲಭಿಸಿದ್ದರೂ ಸೇವೆಯಿಂದ ವಜಾ ಮಾಡಿದ ಉತ್ತರಪ್ರದೇಶ ಸರ್ಕಾರದ ಕ್ರಮವನ್ನು ಡಾ. ಕಫೀಲ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

“ಸರ್ಕಾರ ಆಮ್ಲಜನಕವನ್ನು ಪೂರೈಸದ ಕಾರಣ 63 ಶಿಶುಗಳು ಸಾವನ್ನಪ್ಪಿವೆ. ಅಮಾನತುಗೊಂಡಿದ್ದ 8 ವೈದ್ಯರ ಪೈಕಿ 7 ಮಂದಿಯನ್ನು ಸೇರಿಸಿಕೊಂಡಿದ್ದು, ವೈದ್ಯಕೀಯ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದ ಆರೋಪದಲ್ಲಿ ಕ್ಲೀನ್ ಚಿಟ್ ಪಡೆದರೂ ನನ್ನನ್ನು ವಜಾಗೊಳಿಸಲಾಗಿದೆ. ಪೋಷಕರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಇದು ನ್ಯಾಯವೋ ಅನ್ಯಾಯವೋ? ನೀವೇ ನಿರ್ಧರಿಸಿ”ಎಂದು ಕಫೀಲ್ ಖಾನ್ ಹೇಳಿದ್ದಾರೆ.

ಗೋರಖ್‌ ಪುರದ BRD ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಕೊರತೆಯಿಂದ ನವಜಾತ ಶಿಶು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಈ ಹಿಂದೆ ಕಫೀಲ್ ಖಾನ್ ಅವರನ್ನು ಅಮಾನತುಗೊಳಿಸಿತ್ತು. ಆದರೆ, ಈ ಕ್ರಮಕ್ಕೆ ನ್ಯಾಯಾಲಯ ತಡೆ ನೀಡಿತ್ತು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವಾದ ಗೋರಖ್ಪುರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆಯಿಂದ ಹಲವಾರು ಮಕ್ಕಳು ಸಾವನ್ನಪ್ಪಿದ್ದರು. ಅಂದು ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ಸಿಲಿಂಡರ್ ಗಳನ್ನು ವಿತರಿಸಿದ್ದ ಕಫೀಲ್ ಖಾನ್ ಯೋಗಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು.

ಅಂದಿನಿಂದ ಉತ್ತರಪ್ರದೇಶ ಸರ್ಕಾರ ಪದೇ ಪದೇ ಕಫೀಲ್ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಬಂದಿದೆ.
ಕರಾಳ ಪೌರತ್ವ ಕಾನೂನು ವಿರೋಧಿ ಪ್ರತಿಭಟನೆಗೆ ಸಂಬಂಧಿಸಿ ಉತ್ತರಪ್ರದೇಶ ಸರ್ಕಾರ ಕಫೀಲ್ ಖಾನ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಜೈಲಿನಲ್ಲಿರಿಸಿತ್ತು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

Join Whatsapp