ಅಝಾನ್‌ ವಿರುದ್ಧ ದೂರು ನೀಡಿದ ಅಲಹಾಬಾದ್ ವಿವಿ ಉಪಕುಲಪತಿ!

Prasthutha|

“ಹತ್ತಿರದ ಮಸೀದಿಯ ಅಝಾನ್ ನಿಂದ ನಿದ್ರಾಭಂಗ ಉಂಟಾಗಿ ದಿನವಿಡೀ ತಲೆನೋವಾಗುತ್ತಿರುವುದರಿಂದ ಕೆಲಸದ ಸಮಯದಲ್ಲಿ ಕಷ್ಟವಾಗುತ್ತದೆ” ಎಂದು ಅಲಹಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಸಂಗಿತಾ ಶ್ರೀವಾಸ್ತವ ಅವರು ಪ್ರಯಾಗರಾಜ್‌ನ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

- Advertisement -

ಪ್ರತಿದಿನ ಬೆಳಿಗ್ಗೆ 5.30 ರ ಸುಮಾರಿಗೆ ಹತ್ತಿರದ ಮಸೀದಿಯ ಮೌಲ್ವಿಗಳು ಜೋರಾಗಿ ಆಝಾನ್ ಮಾಡುವುದರಿಂದ ನನ್ನ ನಿದ್ದೆಗೆ ತೊಂದರೆಯಾಗುತ್ತಿದೆ. ಕಷ್ಟಪಟ್ಟು ಪ್ರಯತ್ನಿಸಿದರೂ ನಿದ್ದೆ ಮಾಡಲಾಗುತ್ತಿಲ್ಲ. ಇದರಿಂದಾಗಿ ದಿನವಿಡೀ ತಲೆನೋವಾಗುತ್ತಿರುವುದರಿಂದ ಕೆಲಸದ ಸಮಯದಲ್ಲಿ ಕಷ್ಟವಾಗುತ್ತದೆ ಎಂದು ಪ್ರಯಾಗರಾಜ್ ಡಿ.ಎಂ. ಭಾನು ಚಂದ್ರ ಗೋಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಲಾಲ್ ಮಸೀದಿಯಿಂದ ಸುಮಾರು 400 ಮೀ ದೂರದಲ್ಲಿರುವ ಸಿವಿಲ್ ಲೈನ್ಸ್‌ನಲ್ಲಿರುವ ಅಲಹಾಬಾದ್ ಉಪಕುಲಪತಿ ಪ್ರೊ.ಸಂಗಿತಾ ಶ್ರೀವಾಸ್ತವ ಅವರು “ನಾನು ಯಾವುದೇ ಜಾತಿ ಅಥವಾ ಧರ್ಮವನ್ನು ವಿರೋಧಿಸುವುದಿಲ್ಲ, ಅವರು ಮೈಕೆ ಇಲ್ಲದೆ ಆಜಾನ್ ಮಾಡಿದರೆ ಇತರ ಜನರಿಗೆ ತೊಂದರೆಯಾಗುವುದಿಲ್ಲ, ಅವರು ರಂಝಾನ್ ಸಮಯದಲ್ಲಿ ಸಹರಿಯನ್ನು ಮೈಕ್ ನಲ್ಲಿ 4 ಗಂಟೆಗೆ ಶುರು ಮಾಡುತ್ತಾರೆ. ಇದರಿಂದಾಗಿ ಇತರರು ತೊಂದರೆಗೊಳಗಾಗುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

- Advertisement -

ಈ ಪತ್ರವನ್ನು ಪ್ರಯಾಗರಾಜ್ (ಶ್ರೇಣಿ) ಐ.ಜಿ.ಕವೀಂದ್ರ ಪ್ರತಾಪ್ ಸಿಂಗ್ ಮತ್ತು ಎಸ್‌ಎಸ್‌ಪಿ ಸರ್ವಶ್ರೇಶ್ ತ್ರಿಪಾಠಿ ಮತ್ತು ಪ್ರಯಾಗರಾಜ್ ವಿಭಾಗೀಯ ಆಯುಕ್ತ ಸಂಜಯ್ ಗೋಯೆಲ್ ಅವರಿಗೂ ಕಳುಹಿಸಿದ್ದಾರೆ.

’ಪತ್ರವನ್ನು ಸ್ವೀಕರಿಸಲಾಗಿದೆ. ನಾವು ಅದನ್ನು ಪರಿಶೀಲಿಸಿದ ನಂತರ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ’ ಎಂದು ಪ್ರಯಾಗ್ ರಾಜ್ ನ ಡಿಎಂ ಗೋಸ್ವಾಮಿ ತಿಳಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಲಕ್ನೋ ಮೂಲದ ಪ್ರಮುಖ ಸುನ್ನಿ ವಿಧ್ವಾಂಸ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ ಮಾತನಾಡಿ  ’ಅಲಹಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಬರೆದ ಪತ್ರದಲ್ಲಿ ಅಜಾನ್ ಗೆ ಧ್ವನಿವರ್ಧಕವನ್ನು ನಿರ್ಬಂಧಿಸಲು ಮನವಿ ಮಾಡಲಾಗಿದೆ. ನಾವು ಅದನ್ನು ವಿರೋಧಿಸುತ್ತೇವೆ. ನಮ್ಮ ದೇಶವು ಗಂಗಾ-ಯಮುನಾ ತಹಝೀಬ್‌ಗೆ ಹೆಸರುವಾಸಿಯಾಗಿದೆ ಎಂದು ಉಪಕುಲಪತಿಯವರು ತಿಳಿದಿರಬೇಕು’ಎಂದಿದ್ದಾರೆ.

“ಮಸೀದಿಗಳಿಂದ ಅಜಾನ್ ಶಬ್ದ ಮತ್ತು ದೇವಾಲಯಗಳಿಂದ ಭಜನೆ ಮತ್ತು ಕೀರ್ತನೆ ಸದಾ ಬೀಸುವ ಗಾಳಿಯಲ್ಲಿರುತ್ತದೆ. ಇದುವರೆಗೂ ಯಾರೊಬ್ಬರ ನಿದ್ರೆಗೆ ತೊಂದರೆಯಾಗಿಲ್ಲ. ಈ ರೀತಿಯ ವಿಷಯಗಳನ್ನು ಹೇಳುವುದು ಅರ್ಥಹೀನ ಮತ್ತು ಮೊದಲಿನಿಂದಲೂ ಗೌರವಾನ್ವಿತ ಹೈಕೋರ್ಟ್‌ನ ಆದೇಶವನ್ನು ಮಸೀದಿಗಳಲ್ಲಿ ಅನುಸರಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

Join Whatsapp