ಬೈಕ್ ಗೆ ಕಾರು ಡಿಕ್ಕಿ:  ಮಗು ಸೇರಿ ಒಂದೇ ಕುಟುಂಬದ ಮೂವರು ಸಾವು

Prasthutha|

ಶಿವಮೊಗ್ಗ: ಕಾರು ಹಾಗೂ ಬೈಕ್ ಮುಖಾಮುಖಿ ಢಿಕ್ಕಿ ಸಂಭವಿಸಿ ಮಗು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ಶಿರಾಳಕೊಪ್ಪ ಸಮೀಪದ ಮಂಚಿಕೊಪ್ಪ ಬಳಿ  ಕಳೆದ ರಾತ್ರಿ ನಡೆದಿದೆ.

- Advertisement -

ಹಲುಗಿನಕೊಪ್ಪದ ಜ್ಯೋತಿ (30), ಗಂಗಮ್ಮ (50) ಮತ್ತು ಸೌಜನ್ಯ (4 ) ಮೃತಪಟ್ಟವರು. ಮತ್ತೊಬ್ಬರು ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಲ್ಲಿಕಾರ್ಜನ, ಮಗಳು ಸೌಜನ್ಯ, ತಾಯಿ ಜ್ಯೋತಿ, ಅವರ ತಾಯಿ ಗಂಗಮ್ಮ ಬೈಕಿನಲ್ಲಿ ತೆರಳುತ್ತಿದ್ದರು. ಇವರು ಶಿರಾಳಕೊಪ್ಪದಿಂದ ಹಲುಗಿನಕೊಪ್ಪದಲ್ಲಿರುವ ಮನೆಗೆ ಹೋಗುತ್ತಿದ್ದಾಗ ಹಿರೆಕೆರೂರು ಕಡೆಯಿಂದ ಶಿರಾಳಕೊಪ್ಪ ಕಡೆಗೆ ಹೋಗುತ್ತಿದ್ದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ.

- Advertisement -

ಮಂಚಿಕೊಪ್ಪ ಬಳಿ ಕಾರು, ಬೈಕು ಮುಖಾಮುಖಿ ಢಿಕ್ಕಿಯಾಗಿದ್ದು, ಮಗು ಸೌಜನ್ಯ ಸ್ಥಳದಲ್ಲೇ ಮೃತಪಟ್ಟಿದೆ. ಮಲ್ಲಿಕಾರ್ಜುನ, ಜ್ಯೋತಿ, ಗಂಗಮ್ಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಶಿಕಾರಿಪುರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಯಲ್ಲಿ ಗಂಗಮ್ಮ ನಿಧನರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಜ್ಯೋತಿ ಅಸುನೀಗಿದ್ದಾರೆ. ಮಲ್ಲಿಕಾರ್ಜುನ ಅವರ ಸ್ಥಿತಿ ಗಂಭೀರವಾಗಿದೆ.

ಘಟನೆಯಲ್ಲಿ ಬೈಕ್ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗ ಜಖಂ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಶಿರಾಳಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp