ಕುಸಿತದ ಭೀತಿಯಲ್ಲಿದ್ದ ಮೂರು ಕಟ್ಟಡ ತೆರವುಗೊಳಿಸಿದ BBMP| ಕಣ್ಣೀರಿಟ್ಟ ನಿವಾಸಿಗಳು

Prasthutha|

ಬೆಂಗಳೂರು: ಬೆಂಗಳೂರಿನ ಕಮಲಾನಗರದ ಶಂಕರ್‌ನಾಗ್ ಬಸ್ ನಿಲ್ದಾಣದ ಹತ್ತಿರ ಕುಸಿಯುವ ಹಂತದಲ್ಲಿದ್ದ ಮೂರು ಕಟ್ಟಡಗಳನ್ನು ಬಿಬಿಎಂಪಿ ಅಧಿಕಾರಿಗಳು ನೆಲಸಮಗೊಳಿಸಿದ್ದು, ಅಧಿಕಾರಿಗಳು ಕಟ್ಟಡ ಕೆಡವಲು ಮುಂದಾದಾಗ ನಿವಾಸಿಗಳು ಕಣ್ಣೀರು ಹಾಕಿದ್ದಾರೆ.

- Advertisement -

ಕಮಲಾನಗರದ ಶಂಕರ್ ನಾಗ್ ಬಸ್ ನಿಲ್ದಾಣದ ಬಳಿಯ ಯಾವುದೇ ಕ್ಷಣದಲ್ಲಾದರೂ ಕುಸಿಯುವ ಆತಂಕಕ್ಕೆ ‌ಕಾರಣವಾಗಿದ್ದ ಮೂರು ಅಂತಸ್ತಿನ ಕಟ್ಟಡವನ್ನು ಅಕ್ಕಪಕ್ಕದ ನಿವಾಸಿಗಳಿಗೆ ‌ ಹಾನಿಯಾಗದಂತೆ ತೆರವುಗೊಳಿಸುವ ವೇಳೆ ಕುಸಿದು ಬಿದ್ದು ಮತ್ತೊಂದು ‌ಕಟ್ಟಡಕ್ಕೂ ಹಾನಿಯಾಯಿತು.

ಹಾನಿಯಾಗಿದ್ದ ಕಟ್ಟಡ ಕೂಡ ಕುಸಿತದ ಭೀತಿಗೆ ಸಿಲುಕಿದ್ದರಿಂದ ಕಾರ್ಯಾಚರಣೆ ಮುಂದುವರೆಸಿ ಅದನ್ನು ತೆರವುಗೊಳಿಸಲಾಗಿದ್ದು ಎರಡು ಕಟ್ಟಡಗಳ‌ ತೆರವು ಕಾರ್ಯದ ವೇಳೆ ಯಾರಿಗೂ ‌ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ.

- Advertisement -

ರಾಜೇಶ್ವರಿ ಅವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡ ಕುಸಿದು ಬೀಳುವ ಹಂತದಲ್ಲಿದ್ದ ಸ್ಥಳಕ್ಕೆ ಸಚಿವ ಗೋಪಾಲಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ  ಕಾರ್ಯಾಚರಣೆ ಮಾಹಿತಿ ಪಡೆದರು.

ನಗರದಲ್ಲಿ ಸುರಿಯುತ್ತಿರುವ‌ ಮಳೆಗೆ ನಿನ್ನೆ ರಾತ್ರಿ ಇದರ ತಳಪಾಯ ಕುಸಿತದಿಂದಾಗಿ ಕುಸಿಯುವ ಹಂತಕ್ಕೆ ತಲುಪಿತ್ತು. ಇಂದು ತೆರವು ಕಾರ್ಯಾಚರಣೆ ವೇಳೆ ಪಕ್ಕದ ಕಟ್ಟಡಕ್ಕೂ ಹಾನಿಯಾಗಿದ್ದು, ಆ ಕಟ್ಟಡ ತೆರವಿಗೂ ನೋಟಿಸ್​​​ ನೀಡಲಾಗಿತ್ತಾದರೂ ಕುಸಿಯವ ಹಂತದಲ್ಲಿದ್ದರಿಂದ ಅದನ್ನು ಉರುಳಿಸಲಾಗಿದೆ.

ಮಳೆಯಿಂದ ಕಟ್ಟಡದ ಪಾಯ ಕುಸಿದು ನಿನ್ನೆ ರಾತ್ರಿ ವಾಲಿಕೊಂಡಿತ್ತು. ಕಟ್ಟಡದಲ್ಲಿ ವಾಸವಿದ್ದ ಕುಟುಂಬಸ್ಥರನ್ನು ಖಾಲಿ ಮಾಡಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕಟ್ಟಡ ಕುಸಿಯುತ್ತಿರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಅದರಲ್ಲಿ ವಾಸವಿದ್ದ 4 ಕುಟುಂಬ ಹೊರಗೆ ಬಂದಿದ್ದು  ದಿಕ್ಕು ತೋಚದೆ ಕಂಗಾಲಾಗಿವೆ.ಕಟ್ಟಡದಲ್ಲಿ 7 ಕುಟುಂಬಗಳು ವಾಸವಾಗಿದ್ದವು. ಆದರೆ ಶಿಥಿಲಾವಸ್ಥೆಗೊಂಡಿದ್ದ ಕಾರಣ 3 ಮನೆಗಳನ್ನು ಖಾಲಿ ಮಾಡಲಾಗಿತ್ತು.

ಸದ್ಯ ಕಟ್ಟಡದಲ್ಲಿ 4 ಕುಟುಂಬಗಳು ವಾಸವಾಗಿದ್ದವು.

Join Whatsapp