ಗತಿ ಶಕ್ತಿ ಯೋಜನೆ- ಸ್ಥಳೀಯ ಉತ್ಪಾದಕರಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ: ವಿ.ಸೋಮಣ್ಣ

Prasthutha|

ಬೆಂಗಳೂರು: ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯವಾಗಲಿರುವ 100 ಲಕ್ಷ ಕೋಟಿಯ ಗತಿಶಕ್ತಿ ಉಪಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ದಿಲ್ಲಿಯ ಪ್ರಗತಿ ಮೈದಾನದಲ್ಲಿ ಬುಧವಾರ ಚಾಲನೆ ನೀಡಿದರು.
ಕೊರೊನಾ, ಲಾಕ್ ಡೌನ್ ನಿಂದ ಹಳಿ ತಪ್ಪಿದ್ದ ದೇಶದ ಆರ್ಥಿಕತೆ ಮತ್ತೆ ನಿಧಾನಗತಿಗೆ ಹಳಿಗೆ ಮರಳುತ್ತಿದ್ದು, ಅದಕ್ಕೆ ಮತ್ತಷ್ಟು ಉತ್ತೇಜನ ನೀಡಲು, ‘ಗತಿಶಕ್ತಿ’ ಯೋಜನೆ ಪೂರಕವಾಗಿದೆ. 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಇದಾಗಿದ್ದು, ದೇಶದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ. ಜತೆಗೆ ಲಾಜಿಸ್ಟಿಕ್ ವೆಚ್ಚವನ್ನೂ ತಗ್ಗಿಸಲಿದೆ.

- Advertisement -


ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಸತಿ ಮತ್ತು ಮೂಲಸೌಕರ್ಯ ಸಚಿವ ವಿ. ಸೋಮಣ್ಣ ಅವರು ರಾಜ್ಯ ಸರ್ಕಾರದ ಪರವಾಗಿ ಪಾಲ್ಗೊಂಡು, ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನಾ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದರು.
“ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯು ದೇಶದ ಪ್ರಗತಿಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಲ್ಲಿ ಮತ್ತು ಮೂಲಸೌಕರ್ಯದ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಯೋಜನೆಯ ಮೂಲಕ ಸ್ಥಳೀಯ ಉತ್ಪಾದಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ಗುರಿ ಇದೆ. ಇದು ಕೈಗಾರಿಕೆಗಳ ಅಭಿವೃದ್ಧಿಗೆ ಕಾರಣವಾಗಲಿದೆ,”ಎಂದು ಸೋಮಣ್ಣ ತಿಳಿಸಿದರು.


“ರಾಜ್ಯದಲ್ಲಿ ಕೈಗಾರಿಕಾ-ಸ್ನೇಹಿ ವಾತಾವರಣ ಹಾಗೂ ಸುಲಲಿತ ವ್ಯವಹಾರಕ್ಕೆ ಒತ್ತು ನೀಡಲಾಗುತ್ತಿದೆ. ರಾಷ್ಟ್ರೀಯ ಯೋಜನೆಗೆ ಅನುಗುಣವಾಗಿ ರಾಜ್ಯದಲ್ಲಿನ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಗೊಳಿಸಲು ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸುತ್ತದೆ. ರಾಜ್ಯದ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ವಲಯಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಿಸುವುದರಿಂದ ವಿವಿಧ ಆರ್ಥಿಕ ವಲಯಗಳಿಗೆ ತ್ವರಿತಗತಿಯ ಸಂಪರ್ಕ ದೊರೆಯಲಿದೆ. ರಾಜ್ಯ ಹಾಗೂ ಅಂತಾರಾಜ್ಯ ರೈಲು ಮಾರ್ಗಗಳ ನಿರ್ಮಾಣ ವೆಚ್ಚದಲ್ಲಿ ಶೇ.50ರಷ್ಟು ಭಾಗವನ್ನು ರಾಜ್ಯ ಸರ್ಕಾರ ಭರಿಸುವುದಲ್ಲದೆ, ಅಗತ್ಯ ಭೂಮಿಯನ್ನು ಉಚಿತವಾಗಿ ನೀಡುತ್ತದೆ. 9 ಹೊಸ ರೈಲು ಮಾರ್ಗಗಳ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತದೆ. ಬಂದರು ಹಾಗೂ ಜಲ ಸಾರಿಗೆ ಅಭಿವೃದ್ಧಿ ಮೂಲಕ ಆರ್ಥಿಕ ಹಾಗೂ ಔದ್ಯಮಿಕ ಪ್ರಗತಿ ಹೆಚ್ಚಲಿದೆ ,”ಎಂದು ವಿವರಿಸಿದರು.

- Advertisement -


ದಾಬಸ್ ಪೇಟೆಯಲ್ಲಿ ಲಾಜಿಸ್ಟಿಕ್ ಪಾರ್ಕ್
ದಾಬಸ್ಪೇಟೆಯಲ್ಲಿ ಮಲ್ಟಿ ಮೋಡಲ್ ಲಾಜಿಸ್ಟಿಕ್ ಪಾರ್ಕ್ (ಎಂಎಂಎಲ್) ಅಭಿವೃದ್ಧಿಗೆ 400 ಎಕರೆ ಭೂಮಿ ಗುರುತಿಸಲಾಗಿದೆ. ದೇಶದ ಅತಿ ಹೆಚ್ಚು ಲಾಜಿಸ್ಟಿಕ್ ಜಾಲ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ನೂತನ ಕೈಗಾರಿಕಾ ನೀತಿಯ ಅನುಸ್ಠಾನದ ಮೂಲಕ ಮೊದಲ ಸ್ಥಾನಕ್ಕೇರುವುದು ನಮ್ಮ ಗುರಿ”ಎಂದರು. ಕಾರ್ಯಕ್ರಮದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಡಾ. ಇವಿ ರಣಮಣರೆಡ್ಡಿ, ಕೆಐಎಡಿಬಿ ಸಿಇಓ ಡಾ.ಎನ್ ಶಿವಶಂಕರ್, ಇನ್ವೆಸ್ಟ್ ಕರ್ನಾಟಕದ ಸಿಓಓ ಬಿ.ಕೆ ಶಿವಕುಮಾರ್ ಉಪಸ್ಥಿತರಿದ್ದರು.

ಏನಿದು ಗತಿಶಕ್ತಿ ಯೋಜನೆ?
100 ಲಕ್ಷ ಕೋಟಿ ಗತಿಶಕ್ತಿ ಉಪಕ್ರಮವು ಸಮಗ್ರ ಮೂಲಸೌಕರ್ಯ ಬೆಳವಣಿಗೆಗೆ ಪೂರಕವಾಗಿದ್ದು, ವಿವಿಧ ಆರ್ಥಿಕ ವಲಯಗಳಿಗೆ ಬಹುಮುಖ ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ. ಇದು ರೈಲ್ವೆ, ರಸ್ತೆಗಳು ಮತ್ತು ಹೆದ್ದಾರಿಗಳು, ಪೆಟ್ರೋಲಿಯಂ ಮತ್ತು ಅನಿಲ, ವಿದ್ಯುತ್, ದೂರಸಂಪರ್ಕ, ಹಡಗು, ವಾಯುಯಾನ ಮತ್ತು ಕೈಗಾರಿಕಾ ಪಾರ್ಕ್ ಇಲಾಖೆಗಳು ಸೇರಿದಂತೆ ಕೇಂದ್ರ ಸರ್ಕಾರದ 16 ಇಲಾಖೆಗಳು ಒಳಗೊಳ್ಳಲಿವೆ. ಕೇಂದ್ರದ ಎಲ್ಲಾ 16 ಇಲಾಖೆಗಳ ಉನ್ನತ ಅಧಿಕಾರಿಗಳ ನೆಟ್ ವರ್ಕ್ ಪ್ಲಾನಿಂಗ್ ಗ್ರೂಪ್ ಸಹ ರಚಿಸಲಾಗುತ್ತಿದೆ. 100 ಲಕ್ಷ ಕೋಟಿಯ ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆ ಆರಂಭಿಸವುದಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

Join Whatsapp