ಕನ್ವರ್ ಯಾತ್ರೆಗೆ ನಾವು ನೀಡಿದ್ದ ತೀರ್ಪು ಕೇರಳದಲ್ಲಿ ಬಕ್ರೀದ್ ಗೂ ಅನ್ವಯವಾಗುತ್ತದೆ : ಸುಪ್ರೀಮ್ ಕೋರ್ಟ್ ಹೇಳಿಕೆ

Prasthutha|

ನವದೆಹಲಿ ಜುಲೈ 20 : ಕೇರಳ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಕೇಸ್ ವ್ಯಾಪಕವಾಗಿದ್ದು, ಪ್ರದೇಶದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕೇರಳದಾಧ್ಯಾಂತ ಕೋವಿಡ್ – 19 ಮಾರ್ಗಸೂಚಿ ನಿರ್ಭಂಧಗಳನ್ನು ಸಡಿಲಗೊಳಿಸುವ ಕೇರಳ ಸರ್ಕಾರ ನಿರ್ಧಾರವು ಸುಪ್ರೀಮ್ ಕೋರ್ಟ್ ಅನ್ನು ಕೆರಳಿಸಿದೆ. ಈ ಕುರಿತು ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ನೇತೃತ್ವದ ನ್ಯಾಯಪೀಠವು ಯಾವುದೇ ರೀತಿಯ, ಧಾರ್ಮಿಕ ಅಥವಾ ಇತರ ಒತ್ತಡದ ಗುಂಪುಗಳ ಒಲೈಕೆಗಾಗಿ ಜನರ ಜೀವಿಸುವ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದೆ.

- Advertisement -

ಕನ್ವರ್ ಯಾತ್ರೆ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ಅದೇಶಗಳನ್ನು ಪಾಲಿಸುವಂತೆ ಸುಪ್ರೀಮ್ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಮಧ್ಯೆ ಕೊರೋನ 3ನೇ ಅಲೆ ಅಪ್ಪಳಿಸುವ ಸಾಧ್ಯತೆಯ ಹೊರತಾಗಿಯೂ ಕನ್ವರ್ ಯಾತ್ರೆಗೆ ಅವಕಾಶ ನೀಡುವ ಯುಪಿ ಸರ್ಕಾರದ ನಿರ್ಧಾರದ ಕುರಿತು ಮಾಧ್ಯಮಗಳಲ್ಲಿ  ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್, ಕನ್ವರ್ ಯಾತ್ರೆಗೆ ಅವಕಾಶ ನೀಡುವುದನ್ನು ಮರುಪರಿಶೀಲಿಸುವಂತೆ ನ್ಯಾಯಮೂರ್ತಿ ನಾರಿಮನ್ ರವರು ಉತ್ತರ ಪ್ರದೇಶ ರಾಜ್ಯಕ್ಕೆ ನಿರ್ದೇಶಿಸಿದ್ದರು. 

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರದಿಂದ ಮೂರು ದಿನಗಳ ಕಾಲ ಲಾಕ್ ಡೌನ್ ಸಡಿಲಿಸುವಂತೆ ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಸೋಮವಾರ ಕೇರಳ ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ತನ್ನ ಪ್ರತಿಕ್ರಿಯೆ ಸಲ್ಲಿಸಿ ಕೋವಿಡ್ – 19 ನಿರ್ಬಂಧಗಳೊಂದಿಗೆ ವ್ಯಾಪಾರಿಗಳು ವಹಿವಾಟು ಮತ್ತು ಜೀವನ ನಡೆಸಬೇಕಾದ ಸಂಕಷ್ಟಕ್ಕೆ ಸಿಲುಕಿರುವುದರಿಂದ ಲಾಕ್ ಡೌನ್ ಸಡಿಲಿಕೆಗೆ ಅವಕಾಶ ನೀಡಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

- Advertisement -

ದೇಶದಲ್ಲಿ ಪ್ರಸಕ್ತ 30,000 ಕೋವಿಡ್ ಪ್ರಕರಣದಲ್ಲಿ 15,000 ಪ್ರಕರಣ ಕೇರಳದಲ್ಲೇ ದಾಖಲಾಗಿದೆಯೆಂದು ಹಿರಿಯ ವಕೀಲರಾದ ವಿಕಾಸ್ ಸಿಂಗ್ ರವರು ವಾದಿಸಿದರು. ಈ ಕ್ರಮವನ್ನು ಆತಂಕಕಾರಿಯೆಂದು ಬಣ್ಣಿಸಿದ ನ್ಯಾಯಪೀಠವು, ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಅವಕಾಶ ನೀಡಿರುವಾಗ ಕೋವಿಡ್ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಇನ್ನಿತರ ಅಂಗಡಿಗಳನ್ನು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ತೆರೆಯಬಹುದೆಂದು ರಾಜ್ಯ ಸರ್ಕಾರ ಕುರುಡಾಗಿ  ವಾದಿಸುತ್ತಿರುವುದು ಅಪ್ರಸ್ತುತವೆಂದು ನ್ಯಾಯಮೂರ್ತಿ ನಾರಿಮನ್ ತಿಳಿಸಿದ್ದಾರೆ.

ವ್ಯಾಪಕವಾಗುತ್ತಿರುವ ಕೋವಿಡ್ ವೇಳೆ ಬಕ್ರೀದ್ ಹಬ್ಬದ ಪ್ರಯುಕ್ತ ಲಾಕ್ ಡೌನ್ ಸಡಿಲಿಕೆಯು ದುಬಾರಿ ಆಗುವ ಸಾಧ್ಯತೆಯಿದೆ. ಕನ್ವರ್ ಯಾತ್ರೆ ಪ್ರಕರಣದಲ್ಲಿ ನಮ್ಮ ಆದೇಶಗಳನ್ನು ಅನುಸರಿಸಲು ನಾವು ಕೇರಳ ರಾಜ್ಯವನ್ನು ನಿರ್ದೇಶಿಸುತ್ತೇವೆ ”ಎಂದು ನ್ಯಾಯಪೀಠ ತೀರ್ಮಾನಿಸಿತು

Join Whatsapp