ಕೈಗಾರಿಕೋದ್ಯಮಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಚಿಂತನೆ: ಸುನಿಲ್ ಕುಮಾರ್

Prasthutha|

ಬೆಂಗಳೂರು; ರಾಜ್ಯದಲ್ಲಿ ಇಂಧನ ವಲಯವನ್ನು ಖಾಸಗೀಕರಣ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಕರುಣಾಕರ ರೆಡ್ಡಿ ಮತ್ತಿತರ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೈಗಾರಿಕೋದ್ಯಮಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸಲು ಸರ್ಕಾರ ಗಂಭೀರ ಪ್ರಯತ್ನ ಮಾಡಿದೆ ಎಂದರು. ವಿದ್ಯುತ್ ವಲಯವನ್ನು ರಾಜ್ಯದಲ್ಲಿ ಖಾಸಗೀಕರಿಸಲಾಗುತ್ತದೆ ಎಂಬುದು ಕೇವಲ ಊಹಾಪೋಹ ಎಂದು ಸುನಿಲ್ ಕುಮಾರ್ ಸ್ಪಷ್ಟಪಡಿಸಿದರು.

- Advertisement -


ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸದಸ್ಯರು ರಾಜ್ಯದಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದ್ದು ಅದನ್ನು ಹೊರ ರಾಜ್ಯದ ಉದ್ದಿಮೆಗಳಿಗೆ 2, 3 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ರಾಜ್ಯದ ಉದ್ದಿಮೆದಾರರಿಗೆ ಪ್ರತಿಯೂನಿಟ್ಗೆ 8 ರಿಂದ 10 ರೂಪಾಯಿಗಳಷ್ಟು ದುಬಾರಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿನ ಕೈಗಾರಿಕೆಗಳು ಯಾವ ರೀತಿ ಬೆಳೆಯಲು ಸಾಧ್ಯ ಎಂದು ಪ್ರಶ್ನಿಸಿದರು.


ಸದ್ಯದಲ್ಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಬಳಕೆದಾರರು ಮತ್ತು ಉದ್ದಿಮೆದಾರರ ಸಭೆ ಕರೆದು ಅವರಿಗೆ ಯಾವುದೇ ತೊಂದರೆಯಾಗದಂತೆ ಮತ್ತು ಕಡಿಮೆ ದರದಲ್ಲಿ ಗುಣಮಟ್ಟದ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಸದನಕ್ಕೆ ತಿಳಿಸಿದರು.

- Advertisement -


ರಾಜ್ಯದಲ್ಲಿ 160 ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ ಎಂದು ಮತ್ತೊಂದು ಪ್ರಸ್ತಾಪಕ್ಕೆ ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದರು. ರಾಜ್ಯದಲ್ಲಿ 169 ಟ್ರಾನ್ಸ್ ಫಾರ್ಮರ್ ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 24 ಗಂಟೆಯೊಳಗೆ ಟಿಸಿ ದುರಸ್ತಿಪಡಿಸುವಂತಹ ವ್ಯವಸ್ಥೆಗಾಗಿ ಇಲಾಖೆ ವಿಶೇಷ ಆಪ್ ರೂಪಿಸಲಿದೆ. ಬಳ್ಳಾರಿ ಜಿಲ್ಲೆ ಹರಪನಹಳ್ಳಿಯಲ್ಲಿ ವಿದ್ಯುತ್ ಏರಿಳಿತ ಮತ್ತು ಪ್ರಕೃತಿ ವಿಕೋಪದಿಂದ ರೈತರ ಪಂಪ್ ಸೆಟ್ ಗಳಿಗೆ ತೀವ್ರ ಹಾನಿಯಾಗಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೂ ತುಂಬಾ ಕಷ್ಟವಾಗಿದೆ ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಸದಸ್ಯ ಕರುಣಾಕರ ರೆಡ್ಡಿ ಮನವಿ ಮಾಡಿದರು.ಸಚಿವರು ಉತ್ತರ ಮುಂದುವರಿಸಿ ಹರಪನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ೪೮೩ ಟಿಸಿಗಳು ವಿಫಲವಾಗಿದ್ದು ಕೇವಲ 72 ಗಂಟೆಗಳಲ್ಲಿ 48 ಟ್ರಾನ್ಸ್ ಫಾರ್ಮರ್‌ಗಳನ್ನು ದುರಸ್ತಿ ಮಾಡಿ ಮರು ಸ್ಥಾಪನೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

Join Whatsapp