ನನ್ನ ವಿರುದ್ಧ ಎರಡೂ ಪಕ್ಷಗಳಿಂದ ಷಡ್ಯಂತ್ರ: ಡಿ.ಕೆ. ಶಿವಕುಮಾರ್ ಆರೋಪ

Prasthutha|

ಬೆಂಗಳೂರು: ‘ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದು, ಎಲ್ಲವೂ ನನಗೆ ಗೊತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

- Advertisement -

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ಬಹಳ ಹಿರಿಯರು, ಬುದ್ಧಿವಂತರು ಹಾಗೂ ಸಾಹಿತಿಗಳಿದ್ದಾರೆ, ಅವರಿಗೆ ರಾಜಕಾರಣದಲ್ಲಿ ಬಹಳ ಅನಭವವಿದೆ. ಅವರಿಗೆ ಹೋರಾಟದ ಕುಟುಂಬದ ಹಿನ್ನೆಲೆಯಿದೆ. ಅವರು ಚಲನಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರೂ ಆಗಿದ್ದಾರೆ. ಅವರಿಗೆ ಯಾವ ಸಮಯದಲ್ಲಿ ಏನು ಹೇಳಬೇಕು ಎನ್ನುವುದು ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ನಾಡ ಹಿತಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ನಮ್ಮ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಕುಮಾರಸ್ವಾಮಿ ಅವರ ಟ್ವೀಟ್ ಟೀಕೆಗೆ ನಾವು ಉತ್ತರ ನೀಡಬೇಕಾಗುತ್ತದೆ. ಅವರ ಮಾತಿನಲ್ಲಿ ಸಾಹಿತ್ಯದ ಶಬ್ಧಕೋಶವೇ ಅಡಗಿದ್ದು, ನಾನು ಅದನ್ನು ಕಲಿತುಕೊಳ್ಳುತ್ತೇನೆ. ರಾಜಕೀಯದಲ್ಲಿ ಗೆಲುವು, ಸೋಲು ಸಹಜ. ಅದರಿಂದ ಅನುಭವ ಬರುತ್ತದೆ. ಅವರು ಟೀಕೆ ಮಾಡಲಿ. ಆದರೆ ಆಶ್ಚರ್ಯ ಎಂದರೆ, ಚನ್ನಪಟ್ಟಣದಲ್ಲಿ ಫೈರಿಂಗ್ ಆಯ್ತು ಎಂದು ಎಸ್.ಎಂ. ಕೃಷ್ಣ ಅವರ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡಿದರು. ಗಂಗಾಧರಮೂರ್ತಿ ಕೊಲೆ ಪ್ರಕರಣ ಸಂಬಂಧ ಪಾದಯಾತ್ರೆ ಮಾಡಿದರು. ತಲೆ ಮೇಲೆ ಸೀಮೆಎಣ್ಣೆ ಡಬ್ಬ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಅದೇ ರೀತಿ ಕಾಂಗ್ರೆಸ್ ಪಕ್ಷ ಕೂಡ ಪಾದಯಾತ್ರೆ ಮಾಡುತ್ತಿದೆ. ಮಾಜಿ ಪ್ರಧಾನಿ ಚಂದ್ರಶೇಖರ್, ದೇವೆಗೌಡರು ಮಾಡಿದ್ದಾರೆ. ಬಿಜೆಪಿಯವರು ರಥಯಾತ್ರೆ ಮಾಡಿದ್ದಾರೆ. ನೆರೆರಾಜ್ಯದ ಜಗನ್ ಮೋಹನ್ ರೆಡ್ಡಿ ಅವರು ಪಾದಯಾತ್ರೆ ಮಾಡಿದ್ದಾರೆ. ದೇಶದ ರೈತರು ಕೂಡ ಹೋರಾಟ ಮಾಡಿದ್ದಾರೆ. ಇವೆಲ್ಲ ಹೋರಾಟಗಳ ಮೈಲಿಗಲ್ಲು. ಕೆಲವಕ್ಕೆ ಫಲ ಸಿಕ್ಕರೆ, ಕೆಲವಕ್ಕೆ ಸಿಕ್ಕಿಲ್ಲ. ಎಲ್ಲರಿಗೂ ಫಲ ಸಿಗಬೇಕು ಎಂಬುದಿಲ್ಲ ಎಂದು ಹೇಳಿದರು.

- Advertisement -

ಆದರೆ ಪಂಚೆ ಕಟ್ಟುವುದಕ್ಕೂ, ಶರ್ಟ್ ಹಾಕುವುದಕ್ಕೂ, ನಮಸ್ಕಾರ ಮಾಡುವುದಕ್ಕೂ ಸಿನಿಮಾ ಸ್ಟೈಲ್, ಡಿಸೈನ್ ಶೂರ ಎಂದು ಬಿರುದು ಕೊಟ್ಟಿದ್ದಾರೆ. ನೀವು ಈ ಹಿಂದೆ ಬಂಡೆ, ಚಪ್ಪಡಿ, ವಿಗ್ರಹ, ಜಲ್ಲಿ ಆಯ್ತು ಎಂದು ಹೇಳಿದ್ದೀರಿ. ಹಳ್ಳಿಯಿಂದ ಬಂದ ನಮಗೆ ಬೇಸರವಿಲ್ಲ. ನಾನೀಗ ದೇವಸ್ಥಾನಕ್ಕೆ ಹೋಗುತ್ತಿದ್ದು, ಹಳೇ ದೇವಸ್ಥಾನ ರಿಪೇರಿ ಮಾಡಿಸಿ, ವಾಹನ ನಿಲುಗಡೆ ವ್ಯವಸ್ಥೆ ಮಾಡಿಸಬೇಕಿದೆ. ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಈಗಷ್ಟೇ ತಿಳಿದಿದ್ದು, ಅದನ್ನು ನೋಡುತ್ತೇನೆ. ಅವರು ಏನೇ ಹೇಳಿದರು, ಇದು ಪಕ್ಷಾತೀತ ಹೋರಾಟ. ದಳದವರು, ಬಿಜೆಪಿಯವರು, ಸಂಘ ಸಂಸ್ಥೆಗಳು ಬರಲಿ. ಸಿನಿಮಾ ಕ್ಷೇತ್ರದವರು, ಮಠಾಧೀಶರು, ಕಾಲೇಜು, ಅಪಾರ್ಟ್ ಮೆಂಟ್ ಸಂಘಗಳಿಗೂ ಮನವಿ ಮಾಡಿದ್ದೇನೆ. ಯಾರಿಗೆ ಇಚ್ಛೆ ಇದೆ, ಯಾರಿಗೆ ಇಚ್ಛೆ ಇಲ್ಲ ಎಂಬುದು ಅವರವರಿಗೆ ಬಿಟ್ಟದ್ದು ಎಂದು ಹೇಳಿದರು.

ಈ ಯೋಜನೆ ನನಗಾಗಿ ಅಲ್ಲ, ಜನರಿಗಾಗಿ. ಹೋರಾಟ, ತ್ಯಾಗ, ಬಲಿದಾನ ನಮ್ಮ ಪಕ್ಷದ ಇತಿಹಾಸ. ಅದು ನಮ್ಮ ರಕ್ತದಲ್ಲಿ ಹರಿದು ಬಂದಿದೆ. ಕುಮಾರಣ್ಣನವರು ಏನೇ ಹೇಳಿದರೂ ಬಹಳ ಸಂತೋಷ. ಅದನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಅವರು ಏನು ಬೇಕಾದರೂ ತಿದ್ದಲಿ. ಅವರ ಜತೆ ಪ್ರಮಾಣ ವಚನ ಸ್ವೀಕರಿಸುವಾಗ ಹಾಕಿದ್ದ ಪಂಚೆಯನ್ನೇ ಹಾಕಿದ್ದೆ. ನಾನು ಇವತ್ತು ಕಾಟನ್ ಹಾಕಿದ್ದು, ಅವತ್ತು ರೇಷ್ಮೆ ಹಾಕಿದ್ದೆ. ಯಾವ ಶುಭ ಸಂದರ್ಭದಲ್ಲಿ ನಾನು ರೇಷ್ಮೇ ಹಾಕಿದ್ದೇನೆ ಎಂಬುದನ್ನು ಗಮನಿಸಿ. ಪಂಚೆ ಧರಿಸಿಯೇ ಅವರ ಜತೆ ಇದೇ ಕಾವೇರಿ ಪೂಜೆಯನ್ನೂ ಮಾಡಿದ್ದೇನೆ. ಬ್ರದರ್ ಜತೆ ಅಕ್ಷತೆಯನ್ನೂ ಹಾಕಿದ್ದೇನೆ. ಅಕ್ಕಿ ಒಂದು ಕಡೆ ಇರುತ್ತದೆ, ಅರಿಶಿನ ಒಂದು ಕಡೆ ಇರುತ್ತದೆ. ಅವೆರಡು ಸೇರಿದರೆ ಮಂತ್ರಾಕ್ಷತೆ ಆಗುತ್ತದೆ.

ನನಗೆ 11 ದಿನಗಳ ಸೂತಕ ಇದ್ದ ಕಾರಣ ನಾನು ತಲಕಾವೇರಿಯಲ್ಲಿ ದೇವಾಲಯದ ಒಳಗೆ ಪ್ರವೇಶ ಮಾಡಲಿಲ್ಲ. ಧೃವನಾರಾಯಣ್ ಹಾಗೂ ರೇವಣ್ಣ ಅವರು ಪೂಜೆ ಮಾಡಿಸಿದ್ದರು. ಧರ್ಮ ಪಾಲನೆಯಲ್ಲಿ ನಮ್ಮದೇ ಆದ ಸಂಪ್ರದಾಯವಿದೆ. ಹೀಗಾಗಿ ನಾನು ದೂರದಿಂದಲೇ ಆ ದೇವಿಗೆ ನಮಸ್ಕರಿಸಿದ್ದೆ. ಅದನ್ನೂ ಟೀಕೆ ಮಾಡಿದರೆ..? ನಾನು ನಟನೇ..? ನಾನು ಇಂದಿರಾಗಾಂಧಿ ಅವರ ಹೆಸರಿನಲ್ಲಿ ಚಿತ್ರಮಂದಿರ ಕಟ್ಟಿದ್ದೆ. ನನ್ನದು ನಟನೆಯೋ ಅಥವಾ ನೈಜತೆಯೋ ಎಂಬುದನ್ನು ಜನ ತೀರ್ಮಾನ ಮಾಡಲಿದ್ದಾರೆ. ಕುಮಾರಸ್ವಾಮಿ ಅವರು ಯಾವ ಬಿರುದು ಬೇಕಾದರೂ ನೀಡಲಿ. ನಾನು ಬಹಳ ಸಂತೋಷದಿಂದ ಸ್ವೀಕಾರ ಮಾಡುತ್ತೇನೆ.’

ಹಳೇ ಮೈಸೂರು ಭಾಗದಲ್ಲಿ ಡಿ.ಕೆ. ಶಿವಕುಮಾರ್ ಬೆಳೆಯುತ್ತಿರುವುದರಿಂದ ಕುಮಾರಸ್ವಾಮಿ ಹಾಗೂ ದೇವೇಗೌಡರ ಕುಟುಂಬ ವಿಚಲಿತವಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರ ಜತೆ ಸ್ಪರ್ಧಿಸುವಷ್ಟು ಶಕ್ತಿ ನನಗಿಲ್ಲ’ ಎಂದರು.

‘ರಾಜಕಾರಣ, ಪವಿತ್ರ ಕಾವೇರಿ ಯಾರ ಸ್ವತ್ತೂ ಅಲ್ಲ. ಇಡೀ ರಾಜ್ಯದ ಜನರ ಆಸ್ತಿ. ರಾಜ್ಯ, ದೇಶಕ್ಕೆ ಒಳ್ಳೆಯದಾಗಬೇಕು. ಬಡವರು, ರೈತರಿಗೆ ಅನುಕೂಲವಾಗಬೇಕು’ ಎಂದರು.

ಈ ವಿಚಾರದಲ್ಲಿ ಕುಮಾರಸ್ವಾಮಿ ಅವರು ವೈಯಕ್ತಿಕ ದಾಳಿ ಮಾಡುತ್ತಿರುವುದೇಕೆ ಎಂಬ ಪ್ರಶ್ನೆಗೆ, ‘ಅವರು ದಾಳಿ ಮಾಡಿದ್ದಾರೆ ಎಂದು ನೀವು ಹೇಳುತ್ತಿದ್ದೀರಿ. ಆದರೆ ಅವರು ಏನೇ ಹೇಳಿದರೂ ಅದು ನನ್ನ ಹಿತಕ್ಕಾಗಿ, ನಾನು ತಿದ್ದುಕೊಳ್ಳಲಿ ಎಂದು. ತಿದ್ದಿಕೊಳ್ಳೋಣ’ ಎಂದರು.

ಪಕ್ಷದ ಅಧ್ಯಕ್ಷರಾಗಿ ಜಾರಿಕೆ ಉತ್ತರ ನೀಡಬಾರದು ಎಂಬ ಮಾಧ್ಯಮದವರ ಪ್ರಶ್ನೆಗೆ, ‘ಯಾವ ವಯಸ್ಸಿನಲ್ಲಿ ಎಲ್ಲೆಲ್ಲಿ ಕುಸ್ತಿ, ಜಗಳ ಮಾಡಬೇಕೋ ಮಾಡಿದ್ದೇನೆ. ಕೂದಲು ಬೆಳ್ಳಗಾಗಿವೆ. ಅವರಿಗೆ ಶಕ್ತಿ ಇರಬಹುದು, ನಮಗೆ ಇಲ್ಲ. ಅವರ ಮಾತಿಗೆ ಜನ ಉತ್ತರ ನೀಡುತ್ತಾರೆ. ನನ್ನ ಮೇಲೆ ಏನೆಲ್ಲಾ ಪ್ರಯೋಗ ಆಗಬೇಕೋ ಅವೆಲ್ಲ ಆಗಿವೆ. ನಾನು ಕಲ್ಲು, ಬಂಡೆ ಎಲ್ಲವನ್ನು ಹೊತ್ತಿದ್ದೇನೆ. ಎರಡೂ ಪಕ್ಷದಿಂದ ನನ್ನ ವಿರುದ್ಧ ದೊಡ್ಡ ಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತಿದ್ದು, ನನಗೆ ಎಲ್ಲವೂ ಗೊತ್ತಿದೆ.’ ಎಂದರು.

ಪಾದಯಾತ್ರೆಗೆ ಕೋವಿಡ್ ನಿಯಮ ಅಡ್ಡಿಯಾಗುತ್ತದೆ, ಅನುಮತಿ ನೀಡುವುದಿಲ್ಲ ಎಂಬ ಮಾತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಯಾರ ಅನುಮತಿಯನ್ನೂ ಕೇಳುವುದಿಲ್ಲ. ಕೇಳುವ ಅಗತ್ಯವೂ ಇಲ್ಲ. ನಮ್ಮ ಕಾಲು, ನಮ್ಮ ನಡಿಗೆ. ನೀರಿಗಾಗಿ ನಮ್ಮ ಹಕ್ಕು, ನಮ್ಮ ನಡಿಗೆ. ಇದು ನಮ್ಮ ಹೋರಾಟ. ನಮ್ಮ ಪಾದಯಾತ್ರೆ 7 ಗಂಟೆಗೆ ಮುಗಿಯುತ್ತದೆ. ನಮ್ಮ ರಸ್ತೆಯಲ್ಲಿ ನಾವು ನಡೆಯಲು ಯಾರ ಅಪ್ಪಣೆ ಬೇಕು? ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಬಹುದು ಎಂದು ನಾವು ಡಬಲ್ ರಸ್ತೆಗಳನ್ನೇ ಪಾದಯಾತ್ರೆಗೆ ಆಯ್ಕೆ ಮಾಡಿದ್ದೇವೆ. ನಾವು ಬೇರೆ ವಿಚಾರವಾಗಿ ಹೋರಾಟ ಮಾಡಿದಾಗ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅವರು ಕೋವಿಡ್ ನಿಯಮ ಉಲ್ಲಂಘಿಸಿ, ಮದುವೆ, ಸಭೆ, ಸಮಾರಂಭ ಮಾಡಿದ್ದರೂ ಪ್ರಕರಣ ದಾಖಲಿಸಿಲ್ಲ. ಆ ವಿಚಾರವಾಗಿ ಬೇರೆ ಸಮಯದಲ್ಲಿ ಮಾತನಾಡುತ್ತೇವೆ. ಮೇಕೆದಾಟು ಹೋರಾಟದಿಂದ ನಮ್ಮ ಪ್ರಾಣ ಹೋದರೂ ಸರಿ, ನಾವು ಹಿಂದೆ ಸರಿಯುವುದಿಲ್ಲ. ಪಾದಯಾತ್ರೆ ಮಾಡಿಯೇ ಮಾಡುತ್ತೇವೆ. ಇದು ಕಾಂಗ್ರೆಸ್ ಇತಿಹಾಸ, ಬದ್ಧತೆ. ನಾನು, ಶಾಸಕಾಂಗ ಪಕ್ಷದ ನಾಯಕರು, ಶಾಸಕರು, ಮುಖಂಡರು ಸೇರಿ ಈ ಬಗ್ಗೆ ತೀರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು.

Join Whatsapp