ಅತಿಥಿ ಉಪನ್ಯಾಸಕ ಬೇಡಿಕೆ ಈಡೇರಿಸುವಂತೆ ತಹಶೀಲ್ದಾರ್ ಗೆ ಕ್ಯಾಂಪಸ್ ಫ್ರಂಟ್ ಮನವಿ

Prasthutha|

ಮಂಗಳೂರು: ಅತಿಥಿ ಉಪನ್ಯಾಸಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು  ಜಿಲ್ಲಾ ಸಮಿತಿ ನಿಯೋಗವು ತಹಶೀಲ್ದಾರರಿಗೆ ಮನವಿ ಸಲ್ಲಿಸಿದೆ.

- Advertisement -

ನಿಯೋಗದಲ್ಲಿ ಕ್ಯಾಂಪಸ್ ಫ್ರಂಟ್ ಮಂಗಳೂರು ನಗರ ಅಧ್ಯಕ್ಷರಾದ ಶರ್ಫುದ್ದೀನ್ ಬಜ್ಪೆ , ಜಿಲ್ಲಾ ಮುಖಂಡರಾದ ಶಬೀರ್ ಮತ್ತು ಬಾಸಿತ್ ಮತ್ತಿತರರು ಇದ್ದರು.

ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರು ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಸರಕಾರ ಅವರ ಬೇಡಿಕೆಗಳನ್ನು ಈಡೇರಿಸದೆ ಚೆಲ್ಲಾಟವಾಡುತ್ತಿದೆ. ರಾಜ್ಯದಲ್ಲಿ ಸುಮಾರು 14,447 ಅತಿಥಿ ಶಿಕ್ಷಕರಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಅರೆಕಾಲಿಕವಾಗಿ ಅಲ್ಪವೇತನ ಪಡೆದುಕೊಂಡು ಸಮಾಜದಲ್ಲಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಉಪನ್ಯಾಸ ನೀಡಿವ ಶಿಕ್ಷಕರು ಮಾಸಿಕವಾಗಿ ಹನ್ನೊಂದು ಸಾವಿರದಿಂದ ಹದಿಮೂರು ಸಾವಿರದಷ್ಟು ವೇತನವನ್ನು ಪಡೆಯುತ್ತಿದ್ದಾರೆ. ವರ್ಷದಲ್ಲಿ ಎಂಟು ತಿಂಗಳು ಮಾತ್ರ ವೇತನ ಸಿಗುವುದಾದರೂ, ಅದು ಕೈ ಸೇರಲು ಮೂರು ತಿಂಗಳು ಕಾಯಬೇಕಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

- Advertisement -

ಉದ್ಯೋಗದಲ್ಲಿ ಯಾವುದೇ ಭಧ್ರತೆಯಾಗಲಿ, ಪಿಎಫ್ ಇಎಸ್ಐ ಸಹಿತ ಯಾವುದೇ ಸೌಲಭ್ಯಗಳಿಲ್ಲದೆ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಬೀದಿಗೆ ಬರುವಂತಾಗಿದೆ. ಕಳೆದ ಲಾಕ್ ಡೌನ್ ಸಂದರ್ಭದಲ್ಲಿ 163 ಅತಿಥಿ ಶಿಕ್ಷಕರು ಪ್ರಾಣ ಕಳೆದುಕೊಂಡಿದ್ದಾರೆಂದು ವರದಿಯಾಗಿದೆ. ಅದರಲ್ಲಿ ಕೆಲವರು ಮನೆಯ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಸರಿಯಾದ ಚಿಕಿತ್ಸೆ ಪಡೆಯಲು ಹಣವಿಲ್ಲದೆ ಪ್ರಾಣ ಕಳೆದುಕೊಂಡಿದ್ದಾರೆ. ಅವರಿಗೆ ಯಾವುದೇ ಪರಿಹಾರ ಧನವಾಗಲಿ ಕನಿಷ್ಟ ಪಕ್ಷ ಸಾಂತ್ವನವಾಗಲಿ ದೊರಕಲಿಲ್ಲ!

ಸಮಾಜವನ್ನು ಶೈಕ್ಷಣಿಕವಾಗಿ ಕಟ್ಟಿಬೆಳೆಸುವಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸುವ ಅತಿಥಿ ಉಪನ್ಯಾಸಕರನ್ನು ತಕ್ಷಣ ಖಾಯಂಗೊಳಿಸಬೇಕು. ಉದ್ಯೋಗ ಭಧ್ರತೆಯೊಂದಿಗೆ ಪಿಎಫ್, ಇಎಸ್ಐ ನೀಡಬೇಕು. ಗೌರವಧನ ಹೆಚ್ಚಿಸಬೇಕು. ಬಾಕಿ ಇರುವ ಗೌರವಧನವನ್ನು ತಕ್ಷಣ ಮಂಜೂರುಗೊಳಿಸಬೇಕು. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಪರಿಹಾರ ಧನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪುತ್ತೂರು ತಹಶೀಲ್ದಾರ್ ಗೆ ಮನವಿ

 ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ನಿಯೋಗ ಕೂಡ ಬುಧವಾರ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದೆ.

ನಿಯೋಗದಲ್ಲಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಮುಸ್ತಾಫಾ ಕೊಡಿಪ್ಪಾಡಿ ಸಮಿತಿ ಸದಸ್ಯರಾದ ಫಾರೂಕ್ ಕಟ್ಟತರ್ ಮುನೀರ್ ಪಾತ್ರಕೋಡಿ ಉಪಸ್ಥಿತರಿದ್ದರು.

Join Whatsapp