ಸಾವರ್ಕರ್ ಭಾವಚಿತ್ರ: ಕಮಿಷನರನ್ನು ತರಾಟೆಗೆ ತೆಗೆದುಕೊಂಡ SDPI ಕಾರ್ಪೊರೇಟರ್ ಶಂಶಾದ್

Prasthutha|

ಮಂಗಳೂರು: ಮಹಾನಗರ ಪಾಲಿಕೆ ಸುರತ್ಕಲ್ ವಲಯ ಹೊಸ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಶಾಸಕ ಭರತ್ ಶೆಟ್ಟಿ ಛೇಂಬರ್ ನಲ್ಲಿ ಬಿಜೆಪಿ ಕಾರ್ಯಕರ್ತರು ಬ್ರಿಟಿಷರೊಂದಿಗೆ ಕ್ಷಮೆ ಯಾಚಿಸಿದ್ದ ವಿ.ಡಿ.ಸಾವರ್ಕರ್ ಭಾವಚಿತ್ರ ಅಳವಡಿಸಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಿದ ಕೃಷ್ಣಾಪುರ ಐದನೇ ವಾರ್ಡ್ SDPI ಕಾರ್ಪೊರೇಟರ್ ಶಂಶಾದ್ ಅಬೂಬಕರ್ , ಮಂಗಳೂರು ಪಾಲಿಕೆ ಕಮಿಷನರ್ ಶ್ರೀಧರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

- Advertisement -

ಉದ್ಘಾಟನೆ ಬಳಿಕ ಶಾಸಕ ಭರತ್ ಶೆಟ್ಟಿ ಕಚೇರಿಗೆ ಕಾರ್ಪೊರೇಟರ್ ಗಳು ತೆರಳಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ವಿ.ಡಿ .ಸಾವರ್ಕರ್ ಚಿತ್ರವನ್ನು ಕಚೇರಿಯಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಆ ವೇಳೆ ಅಲ್ಲಿಂದ ಹೊರನಡೆದು, ಕಾರ್ಯಕರ್ತರ ನಡೆಯನ್ನು ಬಹಿಷ್ಕರಿಸಿದ ಶಂಶಾದ್ , ಪಾಲಿಕೆ ಆಯುಕ್ತರ ವಿರುದ್ಧ ಗರಂ ಆಗಿದ್ದಾರೆ.

ಸಾರ್ವಜನಿಕರು ಬಂದುಹೋಗುವ ಕಚೇರಿಯಲ್ಲಿ ಬೇರೆ ಯಾವ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಅಳವಡಿಸದೆ ರಣ ಹೇಡಿ ಸಾವರ್ಕರ್ ಚಿತ್ರ ಅಳವಡಿಸಲು ಅನುಮತಿ ನೀಡಿದವರು ಯಾರು? ಸಾವರ್ಕರ್ ಭಾವಚಿತ್ರ ಅಳವಡಿಸುವ ಮೂಲಕ ಬಿಜೆಪಿ ಗಲಭೆ ಉಂಟು ಮಾಡುವ ಹುನ್ನಾರ ಹೊಂದಿದೆ. ಆದ್ದರಿಂದ ತಕ್ಷಣವೇ ಅದನ್ನು ತೆರವುಗೊಳಿಸಬೇಕೆಂದು ಪಾಲಿಕೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

- Advertisement -

ಶಂಶಾದ್ ಮಾತಾಡುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಅಡ್ಡಿಪಡಿಸಲು ಯತ್ನಿಸಿದರೂ ವಿಚಲಿತರಾಗದ ಅವರು ದಿಟ್ಟಧ್ವನಿಯೊಂದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಘಟನೆಯಿಂದ ತಬ್ಬಿಬಾದ ಮಹಾನಗರ ಪಾಲಿಕೆ ಆಯುಕ್ತರು ಸಮಾಧಾನಪಡಿಸಿ ನಿಮ್ಮೊಂದಿಗೆ ಮತ್ತೆ ಮಾತನಾಡುತ್ತೇನೆ ಎಂದು ಹೇಳಿ ಸನ್ನಿವೇಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು.

Join Whatsapp