ರೋಹಿತ್ ಚಕ್ರತೀರ್ಥನಿಗೆ ಯಕ್ಷಗಾನ ಸಮ್ಮೇಳನದ ದಿಕ್ಸೂಚಿ ಭಾಷಣಕ್ಕೆ ಆಮಂತ್ರಣ; ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

Prasthutha|

ಉಡುಪಿ: ಫೆಬ್ರವರಿ 11, 12ರಂದು ಉಡುಪಿಯ ಎಂಜಿಎಂ ಕಾಲೇಜಿನ ಎ.ಎಲ್.ಎನ್. ರಾವ್ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಗೋಷ್ಠಿಗಳ ಉದ್ಘಾಟನೆ ಹಾಗೂ ದಿಕ್ಸೂಚಿ ಭಾಷಣಕ್ಕೆ ಲೇಖಕ ರೋಹಿತ್ ಚಕ್ರತೀರ್ಥನಿಗೆ ಅವಕಾಶ ನೀಡಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ.

- Advertisement -


ಈ ಬಗ್ಗೆ ಪ್ರತಿಕ್ರಿಯಿಸಿರುವ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ,”ಯಾವ ಮಾನದಂಡದ ಆಧಾರದಲ್ಲಿ ರೋಹಿತ್ ಚಕ್ರತೀರ್ಥರಿಗೆ ಗೋಷ್ಠಿಗಳ ದಿಕ್ಸೂಚಿ ಭಾಷಣದ ಹೊಣೆಗಾರಿಕೆ ನೀಡಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದರು ಇಲ್ಲವೇ? ರೋಹಿತ್ ಚಕ್ರತೀರ್ಥಗೆ ಅವಕಾಶ ನೀಡಿದ್ದು ಸರಿಯಲ್ಲ. ಇದು ಯಕ್ಷಗಾನ ಸಮ್ಮೇಳನವೇ ಅಥವಾ ರಾಜಕೀಯ ಸಮ್ಮೇಳನವೇ ” ಎಂದು ಪ್ರಶ್ನಿಸಿದ್ದಾರೆ.


ರೋಹಿತ್ ಚಕ್ರತೀರ್ಥ ಅವರು ಉಡುಪಿ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಎಂದು ಹೇಳಲಾಗುತ್ತಿದ್ದು, ಹಾಗಾಗಿ ಅವರನ್ನು ಸಮಾಧಾನಗೊಳಿಸಲು ಗೋಷ್ಠಿಯಲ್ಲಿ ದಿಕ್ಸೂಚಿ ಭಾಷಣ ಮಾಡುವ ಅವಕಾಶ ನೀಡಲಾಗಿದೆಯಾ ಎನ್ನುವ ಸಂಶಯ ಮೂಡುತ್ತಿದೆ ಎಂದು ನಾಗೇಶ್ ಹೇಳಿದರು.

- Advertisement -


ಈಗಾಗಲೇ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಇತಿಹಾಸವನ್ನು ತಿರುಚುವ ಮೂಲಕ ವಿವಾದಕ್ಕೀಡಾಗಿರುವ ರೋಹಿತ್ ಚಕ್ರತೀರ್ಥನನ್ನ ದಿಕ್ಸೂಚಿ ಭಾಷಣಕ್ಕೆ ಆಹ್ವಾನಿಸಿರುವುದು ಮತ್ತೊಂದು ಗೊಂದಲ ಸೃಷ್ಟಿಗೆ ಕಾರಣವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಟೀಕಿಸಿದ್ದಾರೆ.


ಪಠ್ಯ ಪರಿಷ್ಕರಣೆಯಲ್ಲಿ ಅನೇಕ ಮಹಾನ್ ವ್ಯಕ್ತಿಗಳ ಪಾಠವನ್ನು ಕೈಬಿಟ್ಟ, ನಾಡಗೀತೆಯನ್ನು ತಿರುಚಿದ, ಆದಿವಾಸಿಗಳನ್ನು ಅವಮಾನಿಸಿದ ರೋಹಿತ್ ಚಕ್ರತೀರ್ಥನಂತಹ ನಾಡದ್ರೋಹಿಗೆ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದ ಗೋಷ್ಠಿಗಳ ಉದ್ಘಾಟನೆ ಹಾಗೂ ದಿಕ್ಸೂಚಿ ಭಾಷಣಕ್ಕೆ ಅವಕಾಶ ನೀಡುವುದು ಸರಿಯಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp