‘ಈ ಬಾರಿ ಪರಿಶಿಷ್ಟ ಸಮುದಾಯದವರೇ ಮುಖ್ಯಮಂತ್ರಿ’: ಒಗ್ಗಟ್ಟು ಪ್ರದರ್ಶಿಸಿದ ಮಠಾಧೀಶರು

Prasthutha|

ಬೆಳಗಾವಿ: ‘ಈ ಬಾರಿ ಪರಿಶಿಷ್ಟ ಸಮುದಾಯದವರನ್ನೇ ಮುಖ್ಯಮಂತ್ರಿ ಮಾಡಬೇಕು, ಇದಕ್ಕಾಗಿ ಪರಿಶಿಷ್ಟ ಸಮುದಾಯದ ಎಲ್ಲ 151 ಜಾತಿಯವರೂ ಒಂದಾಗಬೇಕು’ ಎಂಬ ನಿರ್ಣಯ ವನ್ನು ರಾಜ್ಯದ ವಿವಿಧ ಮಠಾಧೀಶರು ಕೈಗೊಂಡಿದ್ದಾರೆ.

- Advertisement -

ನಗರದಲ್ಲಿ ಸೋಮವಾರ ನಡೆದಪರಿಶಿಷ್ಟ ಜಾತಿ ಹಾಗೂ ಪಂಗಡದ ಮಠಾಧೀಶರು ಹಾಗೂ ಸ್ವಾಭಿಮಾನಿ ಎಸ್‌ಸಿ–ಎಸ್‌ಟಿ ಒಕ್ಕೂಟದ ಸಭೆಯಲ್ಲಿ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು.

‘ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿ, ಪರಿಶಿಷ್ಟ ಪಂಗಡದಲ್ಲಿ 50 ಉಪ ಜಾತಿಯವರು ಇದ್ದೇವೆ. 2 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಆದರೂ ಇದುವರೆಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ. ಪಕ್ಷಗಳ ಕಾರಣದಿಂದ, ಭಿನ್ನಮತದಿಂದ ಚದುರಿ ಹೋದ ಎಲ್ಲ ಜಾತಿಯವರೂ ಈಗ ಒಂದಾಗಬೇಕು. ಮಠಾಧೀಶರು ಹೇಳಿದವರಿಗೇ ಮತ ಹಾಕಬೇಕು’ ಎಂದೂ ನಿರ್ಧರಿಸಲಾಯಿತು.

- Advertisement -

ಸದ್ಯ 51 ಕ್ಷೇತ್ರಗಳಲ್ಲಿ 36 ಪರಿಶಿಷ್ಟ ಜಾತಿಗೆ, 15 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಇವಲ್ಲದೇ ಇನ್ನೂ 58 ಕ್ಷೇತ್ರಗಳಲ್ಲಿ ಪರಿಶಿಷ್ಟರೇ ಗೆಲ್ಲುವ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕುವಾರು ಸಮಾವೇಶ ಮಾಡಿ, ಆ ಕ್ಷೇತ್ರಗಳನ್ನೂ ಗೆಲ್ಲಲು ಸಿದ್ಧತೆ ಮಾಡಬೇಕು ಎಂದು ತಿಳಿಸಲಾಯಿತು.

ಈಗ ಪರಿಶಿಷ್ಟ ಸ್ವಾಮೀಜಿಗಳೆಲ್ಲ ಒಂದಾಗಿದ್ದೇವೆ. ಹಿಂದುಳಿದ ವರ್ಗದ ಮಠಾಧೀಶರನ್ನೂ ಸೇರಿಸಿಕೊಂಡು ಮಹಾನ್‌ ಸಂಘಟನೆ ಮಾಡಿ ಮುನ್ನುಗ್ಗಬೇಕು. ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟರಿಗೆ ಮೀಸಲಾದ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ತಪ್ಪಿಸಲು ಯತ್ನ ನಡೆದಿದೆ. ಇದನ್ನು ತಡೆಯಬೇಕು ಎಂಬ ನಿರ್ಣಯ ಕೂಡ ಕೈಗೊಳ್ಳಲಾಯಿತು.

ಶಾಸಕ ರಮೇಶ ಜಾರಕಿಹೊಳಿ ಅವರ ಬೆಳಗಾವಿ ನಿವಾಸದಲ್ಲಿ ಸೋಮವಾರ ನಡೆದ ಗೌಪ್ಯ ಸಭೆಯಲ್ಲಿ ಸಿದ್ದರಾಮೇಶ್ವರ ಸ್ವಾಮೀಜಿ, ಬಸವಪ್ರಭು ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಸಂತ ಸೇವಾಲಾಲ್‌ ಸ್ವಾಮೀಜಿ, ಜ್ಞಾನ ಪ್ರಕಾಶ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ ಪಾಲ್ಗೊಂಡರು.

Join Whatsapp