ಪ್ರೀತಿಯ ಹೆಸರಿನಲ್ಲಿ ಯುವತಿ ಮೇಲೆ ಅತ್ಯಾಚಾರ; ಯುವಕ ಸಹಿತ ಕುಟುಂಬಸ್ಥರ ಮೇಲೆ ದೂರು ದಾಖಲು

Prasthutha|

ಮೈಸೂರು: ಪ್ರೀತಿಯ ಹೆಸರಿನಲ್ಲಿ ಯುವತಿ ಮೇಲೆ ಆತ್ಯಾಚಾರವೆಸಗಿ, ಬಳಿಕ ಮದುವೆಗೆ ನಿರಾಕರಿಸಿ ಆಕೆಯ ಹತ್ಯೆಗೆ ಪ್ರಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -


ಮನೋಜ್ ಅಲಿಯಾಸ್ ಹೃತಿಕ್ ಬಂಧಿತ ಆರೋಪಿ. ಮನೋಜ್ ನ ಮೇಲೆ ಅತ್ಯಾಚಾರ ಹಾಗೂ ಹತ್ಯೆಗೆ ಯತ್ನಿಸಿದ ಆರೋಪ ಹೊರಿಸಿ ಯುವತಿಯೋರ್ವಳು ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.


ಮಹಾರಾಜ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾಗ ಮನೋಜ್ ನ ಪರಿಚಯವಾಗಿದ್ದು, ಕಳೆದ ನಾಲ್ಕೂವರೆ ವರ್ಷಗಳಿಂದ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಪ್ರೀತಿಸುವುದಾಗಿ ಹೇಳಿದ್ದ. ಸುಮಾರು ಎರಡು-ಮೂರು ಬಾರಿ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ನನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಚಾರವನ್ನು ಅವರ ತಂದೆ, ತಾಯಿ ಮತ್ತವರ ಅಕ್ಕನಿಗೆ ತಿಳಿಸಿ, ಅವರ ಜೊತೆ ಮದುವೆ ವಿಷಯ ಪ್ರಸ್ತಾಪಿಸಿದಾಗ ಅವರು ನನ್ನನ್ನು ಬಾಯಿಗೆ ಬಂದಂತೆ ಬೈದು, ನಿನಗೆ ಸ್ವಲ್ಪ ಹಣವನ್ನು ಬೇಕಾದರೆ ಕೊಡುತ್ತೇವೆ ಎಂದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಜನವರಿ 23 ರಂದು ರಾತ್ರಿ ವೇಳೆ ಮನೋಜ್ ಬಂದು ನನಗೆ ಬಾಯಿಗೆ ಬಂದಂತೆ ಬೈದು ನನ್ನನ್ನು ಅವನ ಕಾರಿನಲ್ಲಿ ಕೂರಿಸಿಕೊಂಡು 20 ರಿಂದ 30 ಮಾತ್ರೆಗಳನ್ನು ಬಲವಂತವಾಗಿ ನನ್ನ ಬಾಯಿಗೆ ತುರುಕಿ ಸಾಯಿಸಲು ಪ್ರಯತ್ನಪಟ್ಟಿದ್ದಾನೆ. ನಂತರ ಆತನೇ ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದ ಕಾರಣ ತಡವಾಗಿ ದೂರು ನೀಡುತ್ತಿದ್ದೇನೆ. ಇವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ಆಗ್ರಹಿಸಿದ್ದಾಳೆ.
ಯುವತಿ ನೀಡಿರುವ ದೂರಿನ ಮೇರೆಗೆ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಮನೋಜ್ ತಂದೆ ಎಂ.ಎಸ್. ನಾರಾಯಣ್ ಸೇರಿದಂತೆ ಅವರ ಕುಟುಂಬ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Join Whatsapp