ಗೃಹ ಸಚಿವರ ಅರೆ ಜ್ಞಾನ ಹೇಳಿಕೆ | ವಾಟ್ಸಾಪ್ ಯೂನಿವರ್ಸಿಟಿ ಮಾಹಿತಿ ಪಡೆಯಬೇಡಿ ಎಂದ ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ನಗರದ ಜೆಜೆ ನಗರದಲ್ಲಿ ನಡೆದಿದ್ದ ಕ್ಷಲ್ಲಕ ಕಾರಣಕ್ಕೆ ನಡೆಸಿದ್ದ ಕೊಲೆಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಗೃಹ ಸಚಿವರಾದವರು ಪೊಲೀಸರಿಂದ ಮಾಹಿತಿ ಪಡೆಯಬೇಕು, ಅದರ ಹೊರತು ವಾಟ್ಸ್‌ಆ್ಯಪ್ ಯುನಿವರ್ಸಿಟಿಯಿಂದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ್, ಆರಗ ಜ್ಞಾನೇಂದ್ರ ಅವರದ್ದು ಅಚಾತುರ್ಯ ಅಲ್ಲ, ಆತುರ ಹಾಗೂ ದಡ್ಡತನವೂ ಅಲ್ಲ. ಹೆಣವನ್ನು ಬಳಸಿಕೊಳ್ಳುವ ಟೂಲ್ ಕಿಟ್ ಮಾತುಗಳನ್ನಾಡಿದರು ಅಷ್ಟೇ’ ಎಂದು ಆರೋಪಿಸಿದ್ದಾರೆ. ‘ಬಿಜೆಪಿಯ ಟೋಪಿ ಹಾಕಿದಾಗ ಹೆಣ ರಾಜಕೀಯದ ಮನಸ್ಥಿತಿ ಜಾಗೃತವಾಗಿತ್ತು, ಟೋಪಿ ತೆಗೆದಾಗ ವಾಸ್ತವದ ಅರಿವಾಯ್ತು ಎಂದು ವ್ಯಂಗ್ಯವಾಡಿದ್ದಾರೆ.

ಗೋರಿಪಾಳ್ಯದಲ್ಲಿ ನಡೆದ ಕೊಲೆ ವಿಚಾರವಾಗಿ ಮಾತನಾಡಿದ್ದ ಆರಗ ಜ್ಞಾನೇಂದ್ರ ಅವರು, ‘ಚಂದ್ರು ದಲಿತ ಸಮುದಾಯಕ್ಕೆ ಸೇರಿದ ಯುವಕ. ಸೋಮವಾರ ತಡರಾತ್ರಿ ಆತನನ್ನು ಅಡ್ಡಗಟ್ಟಿದ್ದ ಗುಂಪೊಂದು ಉರ್ದು ಮಾತಾಡುವಂತೆ ಒತ್ತಾಯಿಸಿತ್ತು. ಆತನಿಗೆ ಉರ್ದು ಬರುತ್ತಿರಲಿಲ್ಲ. ಹೀಗಾಗಿ ಚೂರಿಯಿಂದ ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ’ ಎಂದು ಹೇಳಿದ್ದರು. ಈ ಹೇಳಿಕೆಯು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ‘ಚಂದ್ರುವಿನ ಕೊಲೆಯು ದ್ವಿಚಕ್ರ ವಾಹನ ಅಪಘಾತದ ವಿಚಾರವಾಗಿ ನಡೆದಿದ್ದು’ ಎಂದು ಆರಗ ಸ್ಪಷ್ಟನೆ ನೀಡಿದ್ದರು.

- Advertisement -

ನಡೆದಿದ್ದೇನು?
ಬೆಂಗಳೂರಿನ ಜೆ. ಜೆ. ನಗರದ ವಾಸಿ ಚಂದ್ರು ಎಂಬಾತ ಗುಡ್ಡದಹಳ್ಳಿಯಲ್ಲಿ ರೋಲ್ ತಿನ್ನುವಾಗ ಸಣ್ಣ ಅಪಘಾತವಾಗಿ ಘರ್ಷಣೆ ನಡೆದಿತ್ತು. ಇದು ಕೊಲೆಯಲ್ಲಿ ಅಂತ್ಯಗೊಂಡಿದೆ. ಈ ಘರ್ಷಣೆಯಿಂದ ತೀವ್ರವಾಗಿ ಗಾಯಗೊಂಡ ಚಂದ್ರು ನನ್ನು ಆಸ್ಪತ್ರೆ ದಾಖಲು ಮಾಡಿದ್ದರೂ, ಆತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆದರೆ ಈ ವಿಷಯಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಉರ್ದು ಮಾತನಾಡದ ಹಿನ್ನೆಲೆಯಲ್ಲಿ ಚಂದ್ರು ಎಂಬಾತನನ್ನು ಇರಿದು ಕೊಲೆಗೈಯ್ಯಲಾಗಿದೆ ಎಂದು ಹೇಳಿಕೆ ನೀಡಿದ್ದರು.


ಯುವಕ ಚಂದ್ರು ಆತ ಚಿಕನ್ ಖರೀದಿ ಮಾಡಲು ಹೋದಾಗ ಅಂಗಡಿಯವರು ಉರ್ದು ಮಾತನಾಡುವಂತೆ ಹೇಳಿದ್ದಾರೆ. ಆದರೆ, ಚಂದ್ರುವಿಗೆ ಉರ್ದು ಮಾತನಾಡಲು ಬಂದಿಲ್ಲ. ಚಂದ್ರುವಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಅಂತ ಹೇಳಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದರು.

ಬಳಿಕ ಉಲ್ಟಾ ಹೊಡೆದಿದ್ದ ಆರಗ ಜ್ಞಾನೇಂದ್ರ, ಹೇಳಿಕೆ ಬಿಡುಗಡೆ ಮಾಡಿ ಬೆಂಗಳೂರು ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ನಡೆದ ಚೂರಿ ಇರಿತಕ್ಕೆ ಒಳಗಾಗಿ ಒಬ್ಬ ಯುವಕ ಮೃತ ಪಟ್ಟ ಘಟನೆ ಅತ್ಯಂತ ಅಮಾನೀಯವಾದುದು. ದ್ವಿಚಕ್ರ ವಾಹನದಲ್ಲಿ ಹೋಗಿದ್ದ ಯುವಕರು, ಸಣ್ಣ ಅಪಘಾತ ಸಂಬಂಧ ಮಾತಿಗೆ ಮಾತು ಬೆಳೆದು, ಘರ್ಷಣೆ ನಡೆದ ವಿಷಯದಲ್ಲಿ ಒಬ್ಬ ಯುವಕ ತೊಡೆ ಮೇಲಿನ ಚೂರಿ ಇರಿತದಿಂದ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ ಎಂದಿದ್ದರು.

Join Whatsapp