ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬುಲ್ಡೋಜರ್ ಹರಿಸಿ ರಾಮಮಂದಿರ ಧ್ವಂಸ: ಪ್ರಧಾನಿ ಹೇಳಿಕೆಗೆ ಸಲ್ಮಾನ್ ಖುರ್ಷಿದ್ ಕೆಂಡ

Prasthutha|

ಪಾಟ್ನಾ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿರುವ ರಾಮಮಂದಿರವನ್ನು ಬುಲ್ಡೋಜರ್ ಹರಿಸಿ ಧ್ವಂಸಗೊಳಿಸಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ರಾಜ್ಯ ಕಾಂಗ್ರೆಸ್‌ನ ಕೇಂದ್ರ ಕಚೇರಿ ಸದಾಕತ್ ಆಶ್ರಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅನುಗುಣವಾಗಿ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಆ ದೇವಾಲಯವನ್ನು ಸಂಪೂರ್ಣ ದೇಶ ಸ್ವೀಕರಿಸಿದೆ ಎಂದರು.

ದೇವಾಲಯದ ನಿರ್ಮಾಣದ ಶ್ರೇಯಸ್ಸು ಸುಪ್ರೀಂಕೋರ್ಟ್‌ಗೆ ಸಲ್ಲುತ್ತದೆ ಎಂಬುದನ್ನು ಪ್ರಧಾನಿ ಅವರು ನೆನಪಿನಲ್ಲಿ ಇರಿಸಿಕೊಳ್ಳಬೇಕು. ದೇವರು ಎಲ್ಲರಿಗೂ ಸೇರಿದ್ದು. ಆದರೆ, ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಮಾತನಾಡುವುದು ತೀರಾ ದುರದೃಷ್ಟಕರ ಎಂದು ಅವರು ಹೇಳಿದರು.

- Advertisement -

ನಮ್ಮ ಪಕ್ಷಕ್ಕೆ ಕಾನೂನಿನ ಮೇಲೆ ನಂಬಿಕೆ ಇದೆ. ನಾವು ಯಾವುದೇ ಆರಾಧನ ಕೇಂದ್ರದ ಮೇಲೆ ಬುಲ್ಡೋಜರ್ ಹರಿಸಲು ಬಯಸುವುದಿಲ್ಲ ಎಂದು ಮಾಜಿ ಕಾನೂನು ಹಾಗೂ ನ್ಯಾಯ, ಅಲ್ಪಸಂಖ್ಯಾತರ ವ್ಯವಹಾರಗಳಂತಹ ಖಾತೆ ನಿರ್ವಹಿಸಿದ ಸಲ್ಮಾನ್ ಖುರ್ಷಿದ್ ಹೇಳಿದರು.

Join Whatsapp