ಮೋದಿ ಹೆಸರಲ್ಲಿ ಮತ ಕೇಳಲು ಬರುವವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಕರೆ ನೀಡಿದ ಮುತಾಲಿಕ್

Prasthutha|

ಕಾರವಾರ: ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿ ಮತ ಕೇಳಲು ಬರುವ ನಾಯಕರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಕರೆ ನೀಡಿದ್ದಾರೆ.

- Advertisement -

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೈದಾದ್ರಿ ರಂಗಮಂದಿರದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ನಾಲಾಯಕ್ ನಾಯಕರು ಇದ್ದಾರೆ. ಮೋದಿ ಹೆಸರು ಹೇಳಿಕೊಂಡು ಬರುತ್ತಾರೆ. ಅಂತವರಿಗೆ ಚಪ್ಪಲಿ ಏಟು ಕೊಡಿ ಎಂದು ಹೇಳಿದ್ದಾರೆ.

ಆರೇಳು ಬಾರಿ‌ ಗೆದ್ದು ಕರ್ನಾಟಕವನ್ನು ಲೂಟಿ ಮಾಡಿದವರು ಇದ್ದಾರೆ. ಮೊದಲು ಇದ್ದಾಗ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಅಂತಾ ಲೆಕ್ಕಾ ಹಾಕುವುದಕ್ಕೂ ಆಗುವುದಿಲ್ಲ ಅಷ್ಟು ಗಳಿಸಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

- Advertisement -


ಜನ ಸಂಘ ಹುಟ್ಟಿದ್ದು ಯಾಕೆ ಎನ್ನುವುದು ನೆನಪಿದಿಯಾ? ಜನ ಸೇವೆ ಮೆರೆತು ತಮ್ಮ ಸೇವೆ ಮಾಡಿಕೊಳ್ಳುತ್ತಿದ್ದಿರಾ? ಸಾವಿರ ವರ್ಷಗಳಿಂದ ಗೋಮಾತೆ ಉಳಿಸಿ ಅಂತಾ ಋಷಿ ಮುನಿಗಳು ಹೇಳುತ್ತಿದ್ದಾರೆ. ಗ್ರಾಮದಿಂದ ಕೇಂದ್ರದವರಗೆ ನಮ್ಮದೆ ಸರ್ಕಾರ ಇದೆ. ಗೋಮಾತೆ ರಕ್ತ ನಿಮ್ಮಿಂದ ಉಳಿಸಲು ಆಗುತ್ತಿಲ್ಲ. ಅಧಿಕಾರ ಇದೆ, ಆದರೆ ನಿಮ್ಮ ಹತ್ರ ಇಚ್ಚಾಶಕ್ತಿ ಇಲ್ಲ. ಆಕಳ ರೋಧನೆ ಅದರ ರಕ್ತ ನಿಮಗೆ ಕಾಣುತ್ತಿಲ್ಲ. ನಿಮಗೆ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾಚಿಕೆ, ಮಾನ, ಮರ್ಯಾದೆ ಇಲ್ಲದೆ ಮೋದಿ ಹೆಸರು ಹೇಳಿ ಗೆದ್ದವರು ನೀವು. ತಾಕತ್ ಇದ್ರೆ ಮೋದಿ ಹೆಸರು ಬಿಟ್ಟು ನಿಮ್ಮ ಅಭಿವೃದ್ಧಿ ಹೇಳಿ ಗೆದ್ದು ಬನ್ನಿ. ಪರೇಶ ಮೇಸ್ತಾ ಅನಾಥವಾಗಿ ಸತ್ತ. ರಕ್ತ ಬಲಿದಾನವಾದ್ರು ಏನು ಆಗಲಿಲ್ಲ. ಅವನ ಹೆಣದ ಮೇಲೆ ರಾಜಕೀಯ ಮಾಡಿದವರು ನೀವು. ಅವನ ಆತ್ಮ ಕೇಳುತ್ತಿದೆ ನ್ಯಾಯ ಕೊಡಿಸಿ ಅಂತಾ. ಅವನ ಆತ್ಮಕ್ಕೆ ಶಾಂತಿಯಿಲ್ಲದೆ ನ್ಯಾಯಕ್ಕಾಗಿ ಅಲೆಯುತ್ತಿದೆ. ಸಿ.ಐ.ಡಿ, ಸಿ.ಬಿ.ಐ, ಎಲ್ಲಾ ಬಂತು ತನಿಖೆ ಮಾಡಿತು, ಏನು ಪ್ರಯೋಜನವಾಗಲಿಲ್ಲ. ಹಿಂದೂ ಆಕ್ರೋಶದ ಲಾಭ ಪಡೆದು ಅಧಿಕಾರಕ್ಕೆ ಬಂದ ನಾಲಾಯಕ, ನಿರ್ಲಜ್ಜರು ಇವರು. ಹಿಂದೂ‌ ಸಮಾಜ ಉಳಿಸಿಕೊಳ್ಳಲು ಛತ್ರಪತಿ ಶಿವಾಜಿಯಂತೆ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಮುತಾಲಿಕ್​ ಹೇಳಿದರು.

Join Whatsapp