ಡಿಜೆ ಹಳ್ಳಿ-ಕೆಜಿ ಹಳ್ಳಿ ಘಟನೆ| ವಿನಾ ಕಾರಣ ಸಂಬಂಧ ಕಲ್ಪಿಸುತ್ತಿರುವುದು ಷಡ್ಯಂತ್ರದ ಭಾಗ : ಪಾಪ್ಯುಲರ್ ಫ್ರಂಟ್

Prasthutha|

- Advertisement -

ಡಿಜೆ ಹಳ್ಳಿ-ಕೆಜಿ ಹಳ್ಳಿ ಘಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಗೆ ಯಾವುದೇ ಸಂಬಂಧವಿಲ್ಲದಿದ್ದರೂ ಕೆಲ ಮಾಧ್ಯಮಗಳು ವಿನಾ ಕಾರಣ ಸಂಘಟನೆಯನ್ನು ಘಟನೆಯೊಂದಿಗೆ ತಳುಕು ಹಾಕುತ್ತಿರುವುದು ಷಡ್ಯಂತ್ರದ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ. ಅಶ್ರಫ್ ಹೇಳಿದ್ದಾರೆ.

ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆಗೆ ಮೂಲ ಕಾರಣವೇ ಕಾಂಗ್ರೆಸ್ ನಾಯಕ ಸಂಪತ್ ಕುಮಾರ್ ಮತ್ತು ಆತನ ಸಂಗಡಿಗರಾಗಿದ್ದಾರೆ. ಗಲಭೆಗೆ ಸಂಬಂಧಿಸಿ ರಾಜ್ಯ ಪೊಲೀಸ್ ತಂಡವಾಗಿರುವ ಸಿಸಿಬಿ ತಾನು ಸಲ್ಲಿಸಿರುವ ಸುಮಾರು 70 ಚಾರ್ಜ್ ಶೀಟ್ ಗಳಲ್ಲಿ ಸಂಪತ್ ಕುಮಾರ್ ಮತ್ತು ತಂಡವನ್ನು ಗಲಭೆಯ ಸಂಚುಕೋರರಾಗಿ ಗುರುತಿಸಿತ್ತು. ಆದರೆ ಇದೀಗ ಎನ್.ಐ.ಎ ಸಲ್ಲಿಸಿರುವ ವಿರೋಧಾಭಾಸದ ಚಾರ್ಜ್ ಶೀಟ್ ನಲ್ಲಿ ಗಲಭೆಯ ಹೊಣೆಯನ್ನು ಎಸ್.ಡಿ.ಪಿ.ಐ ಮೇಲೆ ಹೊರಿಸಲಾಗಿರುವುದು ಗಮನಾರ್ಹವಾಗಿದೆ.

- Advertisement -

ಈ ಹಿಂದೆ ಬೆಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಟಿಝನ್ಸ್ ಫಾರ್ ಡೆಮಾಕ್ರಸಿ ಹೆಸರಿನಲ್ಲಿ ಆರೆಸ್ಸೆಸ್ – ಬಿಜೆಪಿ ಪ್ರಾಯೋಜಿತ ಸತ್ಯಶೋಧನಾ ವರದಿಯನ್ನು ಸಿದ್ಧಪಡಿಸಲಾಗಿತ್ತು. ಅದರಲ್ಲಿ ಆಡಳಿತ ವ್ಯವಸ್ಥೆಯ ಘೋರ ವೈಫಲ್ಯವನ್ನು ಮರೆಮಾಚುವ ಮತ್ತು ನಿರ್ದಿಷ್ಟ ಸಮುದಾಯದ ಮೇಲೆ ಗಲಭೆಯ ಹೊಣೆ ಹೊರಿಸಿ ಘಟನೆಯನ್ನು ಕೋಮುವಾದೀಕರಣಗೊಳಿಸುವ ಅಂಶಗಳಿದ್ದವು. ಇದೀಗ ಎನ್.ಐ.ಎ ಸಲ್ಲಿಸಿರುವ ಆರೋಪ ಪಟ್ಟಿಯು ಅದೇ ಸತ್ಯಶೋಧನಾ ವರದಿಯಲ್ಲಿರುವ ಅಂಶಗಳನ್ನು ಆಧರಿಸಿರುವುದು ಕಂಡು ಬರುತ್ತದೆ. ವ್ಯವಸ್ಥಿತ ಪಿತೂರಿಯ ಭಾಗವಾಗಿ ಈ ಸತ್ಯ ಶೋಧನಾ ವರದಿಯನ್ನು ಸಿದ್ಧಡಿಸಲಾಗುತ್ತಿದೆ ಎಂದು ಆ ವೇಳೆಯಲ್ಲೆ ಪಾಪ್ಯುಲರ್ ಫ್ರಂಟ್ ಎಚ್ಚರಿಸಿತ್ತು. ಎನ್.ಐ.ಎ ತನಿಖೆ ಕೂಡ ಷಡ್ಯಂತ್ರದ ಭಾಗವಾಗಿದ್ದು, ಆರೋಪ ಪಟ್ಟಿಯ ಸಲ್ಲಿಕೆಯೊಂದಿಗೆ ಅದು ಈಗ ಋಜುವಾತುಗೊಂಡಿದೆ. ಬಿಜೆಪಿ ಸರಕಾರವು ಎನ್.ಐ.ಎಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ವ್ಯಾಪಕವಾಗಿರುವ ಈ ಸನ್ನಿವೇಶದಲ್ಲಿ ಆರೋಪ ಪಟ್ಟಿಯ ಕುರಿತು ಸಂದೇಹಗಳು ಮೂಡುವುದು ಸಹಜವಾಗಿದೆ.

ಬಹಳಷ್ಟು ನಾಶ-ನಷ್ಟಗಳಿಗೆ ಕಾರಣವಾದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ವಿಚಾರವು ರಾಜಕೀಯ ಆಯಾಮವನ್ನು ಪಡೆದ ಘಟನೆಯಾಗಿತ್ತು. ಪ್ರವಾದಿ ನಿಂದನೆಯ ಪೋಸ್ಟ್ ಹಾಕಿದ ನವೀನ್ ಬಿಜೆಪಿ ಕಾರ್ಯಕರ್ತ ಎಂಬಲ್ಲಿಂದ ಪ್ರಾರಂಭಗೊಂಡು ಈ ಘಟನೆಯಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಅದೇ ರೀತಿ ಶಾಂತಿಯುತವಾಗಿ ಬಗೆಹರಿಸಲು ಸಾಧ್ಯವಿದ್ದ ಈ ಘಟನೆಯಲ್ಲಿ ಪೊಲೀಸರ ನಿರ್ಲಕ್ಷ್ಯ ಮತ್ತು ಬಿಜೆಪಿ ಸರಕಾರದ ಆಡಳಿತ ವೈಫಲ್ಯ ಎದ್ದುಕಂಡಿತ್ತು. ಈ ಮಧ್ಯೆ ಎಸ್.ಡಿ.ಪಿ.ಐ ಮುಖಂಡ ಮುಝಮ್ಮಿಲ್ ಪಾಷ ಆಕ್ರೋಶಿತ ಗುಂಪನ್ನು ಸಮಾಧಾನಿಸುತ್ತಾ ಕಾನೂನಾತ್ಮಕವಾಗಿ ಹೋರಾಡಲು ಕರೆ ನೀಡಿದ್ದ ವಿಚಾರವು ರಾಷ್ಟ್ರೀಯ ಮಟ್ಟದ ಮುಖ್ಯವಾಹಿನಿ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಆದರೆ ಅವರ ವಿರುದ್ಧ ಯುಎಪಿಎ ದಾಖಲಿಸಿ ಇನ್ನೂ ಜೈಲಿನಲ್ಲಿರಿಸಲಾಗಿದೆ. ಗಂಭೀರ ಆರೋಪ ಹೊತ್ತಿರುವ ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಭಾರೀ ಸಂಖ್ಯೆಯ ಮುಸ್ಲಿಮರನ್ನು ಯುಎಪಿಎ ಹೇರಿ ಜಾಮೀನು ನಿರಾಕರಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗಿದೆ. ಈ ಘಟನೆಯಲ್ಲೂ ಆಡಳಿತ ವರ್ಗವು ಪೂರ್ವಾಗ್ರಹಪೀಡಿತವಾಗಿ ವರ್ತಿಸಿದೆ ಮತ್ತು ತಾರತಮ್ಯ ಧೋರಣೆಯನ್ನು ಅನುಸರಿಸಿರುವುದು ಸ್ಪಷ್ಟವಾಗಿದೆ. ಘಟನೆಗೆ ಸಂಬಂಧಿಸಿ ಹಲವು ಅಮಾಯಕರನ್ನು ಬಂಧಿಸಲಾಗಿದೆ ಎಂಬ ಆರೋಪ ಮೊದಲೇ ಕೇಳಿ ಬಂದಿತ್ತು. ಈ ವಿಚಾರದಲ್ಲಿ ಪಾಪ್ಯುಲರ್ ಫ್ರಂಟ್ ಕಾನೂನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಹೋರಾಟವನ್ನು ಮುಂದುವರಿಸಲಿದೆ ಎಂದು ಎ.ಕೆ.ಅಶ್ರಫ್ ಹೇಳಿದ್ದಾರೆ.

Join Whatsapp