ಜೈನ ಮುನಿ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವ ಅಗತ್ಯ ಇಲ್ಲ: ಸಿಎಂ ಸಿದ್ದರಾಮಯ್ಯ

Prasthutha|

ಬೆಂಗಳೂರು: ಜೈನ ಮುನಿ ಕೊಲೆ ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ. ನಮ್ಮ ರಾಜ್ಯದ ಪೊಲೀಸರ ಕೈಯಿಂದಲೇ ಗಂಭೀರವಾಗಿ ತನಿಖೆ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.‌

- Advertisement -

 ಶೂನ್ಯ ವೇಳೆಯಲ್ಲಿ ಜೈನ ಮುನಿ ಕೊಲೆ ಹಾಗೂ ಟಿ ನರಸೀಪುರ ಯುವ ಬ್ರಿಗೇಡ್ ಕಾರ್ಯಕರ್ತ ಕೊಲೆ ಪ್ರಕರಣ ಸಂಬಂಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಜೈನ ಮುನಿ ಕೊಲೆ ಅಮಾನುಷವಾದದ್ದು. ಯಾರೇ ಕೊಲೆ ಮಾಡಿದರೂ ಶಿಕ್ಷೆ ಆಗಬೇಕು. ಎಫ್​ಐಆರ್​ನಲ್ಲಿಯೂ ಇಬ್ಬರ ಹೆಸರನ್ನು ಹಾಕಲಾಗಿದೆ. ಹಾಗಾಗಿ ಎರಡನೇ ಆರೋಪಿಯನ್ನು ರಕ್ಷಣೆ ಮಾಡುವ ಪ್ರಶ್ನೆನೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದರಲ್ಲಿ ಪೊಲೀಸರ ತಪ್ಪು ಎಲ್ಲಿದೆ? ಪೊಲೀಸರು ಉತ್ತಮ‌ ಕೆಲಸ ಮಾಡಿದ್ದಾರೆ. ಜೈನ ಮುನಿ ಕೊಲೆ ಮಾಡಿರುವುದು ದಿಗ್ಬ್ರಮೆ ಮೂಡಿಸುವ ಕೊಲೆಯಾಗಿದೆ. ಇಂತಹದ್ದು ಮರುಕಳಿಸಬಾರದು. ಪೊಲೀಸರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಯಾರಿಗೂ ರಕ್ಷಣೆ ಕೊಡುವ ಪ್ರಶ್ನೆನೇ ಇಲ್ಲ. ಇಲ್ಲಿ ಎಷ್ಟೇ ದೊಡ್ಡವರು ಇದ್ದರೂ ರಕ್ಷಣೆ ಮಾಡುವ ಪ್ರಶ್ನೆನೇ ಇಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಯಾರೇ ತಪ್ಪಿತಸ್ಥರು ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಟಿ ನರಸೀಪುರ, ಜೇವರ್ಗಿ ಪ್ರಕರಣ ಆಗಲಿ ಯಾವ ಪ್ರಭಾವಕ್ಕೂ, ಒತ್ತಡಕ್ಕೂ ಮಣಿಯಲ್ಲ. ಈಗ ಸಿಬಿಐಗೆ ಕೊಡುವ ಅಗತ್ಯ ಇಲ್ಲ. ಪೊಲೀಸರ ಕೈಯಲ್ಲೇ ಗಂಭೀರವಾಗಿ ತನಿಖೆ ಮಾಡಿಸುತ್ತೇವೆ ಎಂದರು.

- Advertisement -

ಟಿ ನರಸೀಪುರ ಪ್ರಕರಣವು ಆಕಸ್ಮಿಕವಾಗಿ ನಡೆದಿದ್ದು. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತೇವೆ. ಪೊಲೀಸರ ನಿರ್ಲಕ್ಷ್ಯ ಇದ್ದರೂ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು.

Join Whatsapp