ಉತ್ತರಪ್ರದೇಶದ ಭಯಾನಕತೆ | ಪತಿ ಎದುರೇ ಪತ್ನಿಯ ಸಾಮೂಹಿಕ ಅತ್ಯಾಚಾರ
Prasthutha: March 31, 2021

ಉತ್ತರಪ್ರದೇಶ : ಆಗ್ರಾ-ಕಾನ್ಪುರ ಹೆದ್ದಾರಿಯಲ್ಲಿರುವ ಜಲಪಾತದ ನಲಾ ಕಾಡಿನಲ್ಲಿ ಗಂಡನ ಮುಂದೆಯೇ ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಅತ್ಯಾಚಾರ ನಡೆಸಿದ ಆರೋಪಿಗಳು ವೀಡಿಯೊ ಚಿತ್ರಿಕರಿಸಿ, ಹಣ- ಒಡವೆ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂತ್ರಸ್ತೆ ತನ್ನ ಪತಿಯೊಂದಿಗೆ ಬೈಕ್ ನಲ್ಲಿ ಶಹದಾರಾಗೆ ಹೋಗುತ್ತಿದ್ದಾಗ ಆಗ್ರಾ-ಕಾನ್ಪುರ ಹೆದ್ದಾರಿಯಲ್ಲಿ ಮೂವರು ಯುವಕರು ಇವರ ಬೈಕನ್ನು ಬಲವಂತವಾಗಿ ನಿಲ್ಲಿಸಿದ್ದಾರೆ ಎನ್ನಲಾಗಿದೆ. ನಂತರ ಇಬ್ಬರನ್ನೂ ಕಾಡಿಗೆ ಎಳೆದುಕೊಂಡು ಹೋದ ಯುವಕರು ಗಂಡನ ಎದುರಿಗೇ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ದೂರು ದಾಖಲಿಸಿದರೆ ಚಿತ್ರೀಕರಿಸಿದ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ವರದಿಯಾಗಿದೆ.
“ಕಾನ್ಪುರ ಹೆದ್ದಾರಿಯಲ್ಲಿನ ಜಲಪಾತದ ಬಳಿ ನಡೆದ ಘಟನೆ ಕೇಳಿದ ನಂತರ ನಿಮ್ಮ ಹೃದಯ ವಿಚಲಿತಗೊಳ್ಳುತ್ತದೆ. ಗಂಡನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ಮಹಿಳೆಯನ್ನು ನಿಲ್ಲಿಸಿ, ಇಬ್ಬರನ್ನೂ ಬಲವಂತವಾಗಿ ಕಾಡಿನ ಕಡೆಗೆ ಕರೆದೊಯ್ಯಲಾಯಿತು. ಮಹಿಳೆಯ ಮೇಲೆ ಗಂಡನ ಮುಂದೆ ಅತ್ಯಾಚಾರ ನಡೆಸಿ ವಿಡಿಯೋ ಮಾಡಲಾಗಿದೆ. ಉತ್ತರಪ್ರದೇಶದಲ್ಲಿ ಅಪರಾಧಿಗಳು ‘ಭಯ ಮುಕ್ತ’ರಾಗಿದ್ದಾರೆ” ಎಂದು ಪತ್ರಕರ್ತೆ ರೋಹಿಣಿ ಸಿಂಗ್ ಅವರು ಟ್ವೀಟ್ ಮಾಡಿ ಯೋಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತೆ ರೋಹಿಣಿ ಸಿಂಗ್ ಅವರ ಟ್ವೀಟ್ ರಿಟ್ವೀಟ್ ಮಾಡಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್, “ಸೀರಿಯಲ್ ಕ್ರಿಮಿನಲ್ ಮತ್ತು ರೌಡಿ ಶೀಟರ್ ಒಬ್ಬ ರಾಜ್ಯದ ಮುಖ್ಯಮಂತ್ರಿಯಾದಾಗ ಹೀಗಾಗುತ್ತದೆ. ಇದು ಯುಪಿಯ ಯೋಗಿ ಜಿ ಅವರ ರಾಮ ಸಾಮ್ರಾಜ್ಯ!” ಎಂದು ಯೋಗಿ ಆದಿತ್ಯನಾಥ್ ಅವರ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
