ಎಂಜಿನಿಯರಿಂಗ್ , ವೈದ್ಯಕೀಯ ವಿಷಯಗಳ ಬೋಧನೆ ಕನ್ನಡ ಭಾಷೆಯಲ್ಲಾಗುವಂತೆ ಪಠ್ಯ ಕ್ರಮ ರಚನೆಯಾಗಲಿ: ಅರಗ ಜ್ಞಾನೇಂದ್ರ

Prasthutha|

ಬೆಂಗಳೂರು: ಕನ್ನಡ ಭಾಷೆಯು ಅತ್ಯಂತ ಪ್ರಾಚೀನವೂ ಮತ್ತು ಶಾಸ್ತ್ರೀಯ ಭಾಷೆಗಳಲ್ಲಿ ಪ್ರಮುಖವಾಗಿದ್ದು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಷಯಗಳನ್ನು ಸರಳವಾಗಿ ಮತ್ತು ಸುಲಲಿತವಾಗಿ, ವಿದ್ಯಾರ್ಥಿಗಳಿಗೆ ಬೋಧಿಸಲು ನೆರವಾಗುವಂತೆ ಪಠ್ಯಕ್ರಮಗಳ ರಚನೆಯ ಅಗತ್ಯವಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಇಂದಿಲ್ಲಿ ಪ್ರತಿಪಾದಿಸಿದರು.

- Advertisement -


ಸಚಿವರು ಇಂದು, ಕನ್ನಡದ ಖ್ಯಾತ ಸಾಹಿತಿಗಳೂ ಮತ್ತು ಸಂಶೋಧಕರಾದ ಹಂಪ ನಾಗರಾಜಯ್ಯ ನವರು ರಚಿಸಿದ. ” ಚಾರುಲತ-ವಸಂತ” ಎಂಬ ಕಾವ್ಯ ಕಥನದ ಇಂಗ್ಲೀಷ್ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಹಂಪನಾ ರವರು ರಚಿಸಿರುವ ಚಾರುಲತಾ- ವಸಂತ, ಕೃತಿ, ಕನ್ನಡದಲ್ಲಿ ರಚಿತವಾದ ಸುಂದರ ಕಥನಾ ಕಾವ್ಯವಾಗಿದ್ದು, ಇಂಥಹ ಕೃತಿಯನ್ನು, ಮೂಲ ಕೃತಿಗೆ ಧಕ್ಕೆ ಬಾರದಂತೆ ತರ್ಜುಮೆ ಮಾಡಲಾಗಿದೆ ಎಂದರು.


ಅನುವಾದ ಕೃತಿಗಳಿಂದ ಕನ್ನಡ ಸಾರಸ್ವತ ಲೋಕ ವಿಸ್ತಾರವಾಗುತ್ತದೆ. ಪ್ರಪಚಂದ ಯಾವುದೇ ಭಾಷೆಗಳಿಗೂ ಪ್ರಬುದ್ಧತೆಯಲ್ಲಿ ಸರಿಸಾಟಿಯಾದ ಕನ್ನಡ ಭಾಷೆಯಲ್ಲಿಯೇ ತಾಂತ್ರಿಕ ವಿಷಯಗಳಾದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಷಯಗಳ ಪಠ್ಯಕ್ರಮಗಳು, ನಾಡಿನ ಭಾಷೆಯಲ್ಲಿಯೇ ಆಗಬೇಕು, ಎಂದು ಪ್ರತಿಪಾದಿಸಿದ ಸಚಿವರು ಈ ನಿಟ್ಟಿನಲ್ಲಿ, ಸಾಹಿತಿಗಳೂ ಮತ್ತು ಚಿಂತಕರು ಸಲಹೆ ಸೂಚನೆಗಳನ್ನು ನೀಡಿ, ಎಂದು ಕೋರಿದರು.

- Advertisement -


ಕನ್ನಡ ಭಾಷೆಯಲ್ಲಿ ರಚಿತವಾದ ಅತ್ಯುತ್ತಮ ಕೃತಿಗಳನ್ನು ಬೇರೆ ಭಾಷೆಗೆ ಅನುವಾದಗೊಳಿಸಲು ಅಡ್ಡಿಯಾಗಿರುವ ” ಲೇಖಕರ ಹಕ್ಕು” ಸಂಬಂಧ ಇರುವ ಸಮಸ್ಯೆಗಳನ್ನು ಪರಿಹರಿಸಲು ಭರವಸೆ ನೀಡಿದ ಸಚಿವರು ” ಕನ್ನಡ ಭಾಷೆಯಲ್ಲಿ ರಚಿತ ವಾಗುವ ಎಲ್ಲಾ ಮೌಲ್ಯಯುತ ಕೃತಿಗಳು ನಾಡಿನ ಅಸ್ತಿಯಾಗಿದ್ದು, ಕನ್ನಡ ಹಾಗೂ ಸಾರಸ್ವತ ಲೋಕಕ್ಕೆ ನೀಡುವ ಕೊಡುಗೆಗಳಾಗಿವೆ” ಎಂದರು.
ಚಾರುಲತಾ- ವಸಂತ, ಕೃತಿಯ ಬಗ್ಗೆ, ಖ್ಯಾತ ವಿಮರ್ಶಕರೂ ಮತ್ತು ಚಿಂತಕರೂ ಆದ ರಾಜೇಂದ್ರ ಚನ್ನಿ ಮತ್ತು ಮಲ್ಲೇಪುರಂ ಜಿ ವೆಂಕಟೇಶ್ ಕೃತಿಯನ್ನು ಪರಿಚಯಿಸಿ ಮಾತನಾಡಿದರು.


ಕೃತಿರಚನಕಾರ ಹಂಪ ನಾಗರಾಜಯ್ಯ ಮತ್ತು ಅವರ ಪತ್ನಿ ಕಮಲಾ ಹಂಪನಾರವರನ್ನು, ಸಚಿವರು ಈ ಸಂದರ್ಭದಲ್ಲಿ, ಆತ್ಮೀಯವಾಗಿ ಸನ್ಮಾನಿಸಿದರು.

ನಾಡಿನ ಖ್ಯಾತ ಲೇಖಕರೂ ಹಾಗೂ ಸಾಹಿತಿಗಳಾದ ಹೆಚ್ ಎಸ್ ವೆಂಕಟೇಶ ಮೂರ್ತಿ, ಗುರುರಾಜ ಕರ್ಜಗಿ, ಹಾಗೂ ಇತರ ಗಣ್ಯರೂ ಈ ಸಂದರ್ಭದಲ್ಲಿ, ಹಾಜರಿದ್ದರು.

Join Whatsapp