ಕನ್ನಡ ಹೆಸರು ಬದಲಾವಣೆ ವಿವಾದ; ಅಶ್ರಫ್‌ ಹೇಳಿಕೆ ಸಮಾಧಾನ ತಂದಿದೆ, ಅವರನ್ನು ಅಭಿನಂದಿಸುತ್ತೇನೆ- ಕುಮಾರಸ್ವಾಮಿ

Prasthutha|

ಕಾಸರಗೋಡು ಗ್ರಾಮಗಳ ಹೆಸರುಗಳ ಮಲಯಾಳೀಕರಣವನ್ನು ವಿರೋಧಿಸುವ ಮೂಲಕ ಕನ್ನಡಿಗರು ಕನ್ನಡದ ವಿಚಾರದಲ್ಲಿ ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ಬಗ್ಗೆ ಅತಿ ಶೀಘ್ರದಲ್ಲೇ ಕೇರಳ ಸರ್ಕಾರದಿಂದ ಸ್ಪಷ್ಟನೆ ಬರುವಂತೆ ಮಾಡಿದ್ದಾರೆ. ಈ ಸಾತ್ವಿಕ ಹೋರಾಟದಲ್ಲಿ ಭಾಗಿಯಾದ ಕನ್ನಡ ಮನಸ್ಸುಗಳನ್ನೂ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

- Advertisement -


ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಭಾಷಾ ಸಾಮರಸ್ಯದ ವಿಚಾರದಲ್ಲಿ ಕರ್ನಾಟಕ–ಕೇರಳ ರಾಜ್ಯಗಳು ಪರಸ್ಪರ ಪೂರಕವಾಗಿ ನಡೆದುಕೊಂಡು ಬಂದಿವೆ. ಆದರೂ ಹೆಸರು ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದ್ದು ಹೇಗೆ, ಇದಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಬೇಕು. ಈ ಪ್ರಯತ್ನವು ಸಾಮರಸ್ಯವನ್ನು ಕೆಡಿಸುವ ಉದ್ದೇಶವನ್ನೇ ಹೊಂದಿದ್ದರೆ ಎರಡೂ ರಾಜ್ಯಗಳು ಜಾಗೃತರಾಗಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.


ಕಾಸರಗೋಡಿನಲ್ಲಿ ಕನ್ನಡಕ್ಕೆ ದಕ್ಕೆಯಾದರೆ ಹೋರಾಟ ನಡೆಸುವುದಾಗಿಯೂ, ಅದರ ನೇತೃತ್ವ ತಾವೇ ವಹಿಸುವುದಾಗಿಯೂ ಮಂಜೇಶ್ವರ ಶಾಸಕ ಅಶ್ರಫ್ ಅವರು ಹೇಳಿದ್ದಾರೆ. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಭಿಮಾನ ಮೆರೆದಿದ್ದ ಅಶ್ರಫ್‌ ಹೇಳಿಕೆಯು ಮತ್ತಷ್ಟು ಸಮಾಧಾನ ತಂದಿದೆ. ಕನ್ನಡಪರವಾದ ನಿಲುವು ಪ್ರಕಟಿಸಿರುವ ಅಶ್ರಫ್‌ ಅವರನ್ನು ಅಭಿನಂದಿಸುತ್ತೇನೆ.
ಕಾಸರಗೋಡಿನ ಗ್ರಾಮಗಳ ಕನ್ನಡ ಹೆಸರಿನ ಮಲಯಾಳೀಕರಣ ವಿಚಾರ ಮುನ್ನೆಲೆಗೆ ಬರುವುದರ ಹಿಂದೆ ಯಾವ ತಂತ್ರವಿತ್ತೋ ತಿಳಿಯದು. ಆದರೆ, ‘ಕನ್ನಡ, ಕನ್ನಡಿಗ, ಕರ್ನಾಟಕ‘ಕ್ಕೆ ಏನೋ ಅಪಚಾರವಾಗುತ್ತಿದೆ ಎಂದು ಭಾವಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ರಿಗೆ ಪತ್ರ ಬರೆಯಲಾಯಿತು. ಆದರೆ, ಅಂಥ ಪ್ರಸ್ತಾವ ಇಲ್ಲ ಎಂಬ ಕೇರಳದ ಸ್ಪಷ್ಟನೆಯು ಸಮಾಧಾನ ಮೂಡಿಸಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Join Whatsapp