ಕೊಡಗು: ‘ಭೂಕಂಪನ ಮಾಪನ ಉಪಕೇಂದ್ರ’ ಸ್ಥಾಪನೆ

Prasthutha|

ಮಡಿಕೇರಿ:  ಇತ್ತೀಚೆಗೆ ಕೊಡಗಿನ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಭೂಕಂಪನ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಭೂವಿಜ್ಞಾನಿಗಳ ತಂಡವು ಅಧ್ಯಯನಕ್ಕಾಗಿ ಜಿಲ್ಲೆಯ ಚೆಂಬು ಗ್ರಾಮದ ಸರ್ಕಾರಿ ಪ್ರೌಢಶಾಲೆ ಬಳಿ ತಾತ್ಕಾಲಿಕವಾಗಿ ‘ಭೂಕಂಪನ ಮಾಪನ ಉಪಕೇಂದ್ರ’ ಸ್ಥಾಪಿಸಲಾಗಿದೆ.

- Advertisement -

ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ.ರಮೇಶ್  ಬ್ರಾಡ್‌ಬ್ಯಾಂಡ್ ಸೆಸ್ಮೊಮೀಟರ್, ಅಕೆಲೆರ್‌ಮೀಟರ್, ಡಿಜಿಟರ್, ಜಿಪಿಎಸ್‌ ಮತ್ತಿತ್ತರ ಉಪಕರಣಗಳನ್ನು ಅಳವಡಿಸಲಾಗಿದ್ದು, ಭೂಮಿಯೊಳಗಿನ ಸೂಕ್ಷ್ಮ ಕಂಪನಗಳನ್ನೂ ಇದರಿಂದ ಅಧ್ಯಯನ ಮಾಡಬಹುದಾಗಿದೆ.ಭೂಕಂಪನ ಸಂಭವಿಸಿದ್ದಲ್ಲಿ ಭೂಕಂಪನ ಮಾಪನ ಉಪಕರಣ ರಿಕ್ಟರ್ ಮಾಪಕದಲ್ಲಿ ದಾಖಲಾಗುತ್ತದೆ. ತಾತ್ಕಾಲಿಕವಾಗಿ ಅಳವಡಿಸಿರುವ ಭೂಕಂಪನ ಮಾಪನ ಉಪಕರಣದಿಂದ ಭೂಕಂಪನ ಸಂಬಂಧಿಸಿದಂತೆ ಸವಿಸ್ತಾರವಾಗಿ ಕಾಲ ಕಾಲಕ್ಕೆ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

2018 ರಲ್ಲಿ ಭೂಮಿ ಬಿರುಕು ಬಿಟ್ಟಿದ್ದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದ ಡಾ.ರಮೇಶ್,  ಈ ಬಾರಿ ಈ ಭಾಗದಲ್ಲಿ ಭೂಮಿ ಬಿರುಕು ಬಿಟ್ಟಿಲ್ಲ ಎಂದು ಅವರು ಹೇಳಿದರು.

- Advertisement -

‘ಭೂಕಂಪನ ಸಂಭವಿಸಿದ್ದಲ್ಲಿ ಸಾರ್ವಜನಿಕರು ಗಾಬರಿಯಾಗದೆ ವಿದ್ಯುತ್ ಮತ್ತು ಅಡುಗೆ ಅನಿಲ ಕಡಿತಗೊಳಿಸಿ ಮನೆ ಯಿಂದ ಹೊರಬರಬೇಕು. ಕಟ್ಟಡದ ಚಾವಣಿಯಲ್ಲಿ ಹೆಚ್ಚಿನ ಭಾರ ಇರದಂತೆ ಗಮನಹರಿಸಬೇಕು, ಇಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಲ್ಲಿ ಅನಾಹುತವನ್ನು ಕಡಿಮೆ ಮಾಡಬಹುದು’ ಎಂದು ಅವರು ಸಲಹೆ ನೀಡಿದ್ದಾರೆ. ಕರಿಕೆ ಮತ್ತು ಚೆಂಬು ಸುತ್ತಮುತ್ತ ಜೂನ್ 25 ರಂದು ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ 2.3, ಜೂನ್ 28ರಂದು ಬೆಳಿಗ್ಗೆ 7.45 ಗಂಟೆಗೆ 3.0, ಹಾಗೆಯೇ ಅಂದು ಸಂಜೆ 4.32 ಗಂಟೆ ವೇಳೆಯಲ್ಲಿ 1.8 ರಿಕ್ಟರ್ ಮಾಪಕದಲ್ಲಿ ಹಾಗೂ ಹಾರಂಗಿ ಜಲಾಶಯದಲ್ಲಿರುವ ಶಾಶ್ವತ ಭೂಕಂಪನ ಮಾಪನ ಕೇಂದ್ರದಲ್ಲಿ ಭೂಕಂಪನ ದಾಖಲಾಗಿತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ.ಜಗದೀಶ್, ಜಿಲ್ಲಾ ವಿಪತ್ತು ಪರಿಣತರಾದ ಅನನ್ಯ ವಾಸುದೇವ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ಭೂವಿಜ್ಞಾನಿ ಲಾಯಲ್ ಇತರರು ಭೂ ವೀಕ್ಷಣಾ ತಂಡದಲ್ಲಿದ್ದರು.

Join Whatsapp