ಸಗಣಿ ಮೈಗೆ ಹಚ್ಚಿಕೊಂಡರೆ ಕೋವಿಡ್ ಸೋಂಕು ನಿವಾರಣೆಯಾಗುವುದೇ? ವೈದ್ಯರು ಹೇಳುವುದೇನು?

Prasthutha|

ಅಹಮದಾಬಾದ್: ಕೋವಿಡ್ ಸೋಂಕು ದೇಶಾದ್ಯಂತ ಅಟ್ಟಹಾಸ ಮೆರೆಯುತ್ತಿದ್ದು, ಸೋಂಕು ನಿವಾರಣೆಗಾಗಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಪೂರೈಕೆ ಮಾಡಲಾಗುತ್ತಿದೆ. ಈ ನಡುವೆ ಗೋವಿನ ಸಗಣಿಯನ್ನು ಮೈಗೆ ಹಚ್ಚಿಕೊಂಡರೆ ಕೋವಿಡ್ ಸೋಂಕು ತಗಲುವುದಿಲ್ಲ ಎಂಬ ಊಹಾಪೋಹ,ಮೂಢ ನಂಬಿಕೆಗಳು ಹರಿದಾಡುತ್ತಿದ್ದು, ಈ ಬಗ್ಗೆ ಇದೀಗ ಭಾರತೀಯ ವೈದ್ಯರು ಬಲವಾದ ಎಚ್ಚರಿಕೆಯನ್ನು ನೀಡಿದ್ದಾರೆ. ಗೋವಿನ ಸಗಣಿ ಮೈಗೆ ಹಚ್ಚಿಕೊಂಡರೆ ಕೋವಿಡ್ ಸೋಂಕು ತಡೆಗಟ್ಟಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಅದು ಪರಿಣಾಮಕಾರಿಯೂ ಅಲ್ಲ. ಇದರಿಂದ ಬೇರೆ ಬೇರೆ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

- Advertisement -


ಗುಜರಾತ್ ನಲ್ಲಿ ಕೆಲವರು ಕೋವಿಡ್ ಸೋಂಕನ್ನು ತಡೆಗಟ್ಟಲು ವಾರಕ್ಕೊಮ್ಮೆ  ಗೋ ಮೂತ್ರದ ಜೊತೆ ಸಗಣಿಯನ್ನು ಮೈಗೆ ಹಚ್ಚಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಎಂದು ನಂಬಿದ್ದಾರೆ. ಈ ರೀತಿ ಮಾಡುವುದರಿಂದ ಕೋವಿಡ್ ಸೋಂಕಿಗೆ ಒಳಗಾದವರು ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಸಗಣಿಯನ್ನು ಮೈಗೆ ಹಚ್ಚಿ ದೇಹದಲ್ಲಿ ಒಣಗಿಸಿ ನಂತರ ಯೋಗ ಮಾಡಿದರೆ ದೈಹಿಕ ಶಕ್ತಿ ಹೆಚ್ಚುತ್ತದೆ. ಕೊನೆಗೆ ದೇಹವನ್ನು ಹಾಲು ಅಥವಾ ಮಜ್ಜಿಗೆಯಿಂದ ತೊಳೆದುಕೊಳ್ಳಬೇಕು ಎಂಬುದು ಅವರ ನಂಬಿಕೆ.

ಆದರೆ ಇದಕ್ಕೆ ವೈಜ್ಞಾನಿಕ ಪುರಾವೆ ಇಲ್ಲ. ಇದು ಪರಿಣಾಮಕಾರಿಯೂ ಅಲ್ಲ ಎಂದು ಭಾರತದ ವೈದ್ಯರು ತಿಳಿಸಿದ್ದಾರೆ.

- Advertisement -

ಆದರೆ ಕೋವಿಡ್ ಸೋಂಕು ನಿವಾರಣೆಗೆ ಅಧಿಕೃತವಲ್ಲದ ಇಂತಹ ಕಾರ್ಯಗಳನ್ನು ಮಾಡಬಾರದು ಎಂದು ವೈದ್ಯರು ಮತ್ತು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದರಿಂದ ಹಲವು ರೋಗಗಳು ಹರಡುವ ಸಾಧ್ಯತೆ ಇದೆ. ಗೋಮೂತ್ರ, ಸಗಣಿ ಉಪಯೋಗಿಸುವುದರಿಂದ ಕೋವಿಡ್ ಸೋಂಕು ನಿವಾರಣೆಯಾಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ಯಾವುದೇ ಪುರಾವೆ ಇಲ್ಲ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ತಿಳಿಸಿದ್ದಾರೆ.

Join Whatsapp