ಶಾಲೆಯಲ್ಲಿ ಅಲ್ಲಾಮಾ ಇಕ್ಬಾಲರ ‘ಲಬ್ ಪೆ ಆತೀ ಹೈ ದುವಾ…’ ಪದ್ಯ ಬಳಕೆ: ಶಿಕ್ಷಕನ ಬಂಧನ, ಕೆಲಸದಿಂದ ವಜಾ

Prasthutha|

ಲಕ್ನೋ: ಉತ್ತರ ಪ್ರದೇಶದ ಬರೈಲಿಯ ಶಾಲೆಯಲ್ಲಿ  ಕವಿ ಮುಹಮ್ಮದ್ ಇಕ್ಬಾಲ್’ರ ‘ಲಬ್ ಪೆ ಆತೀ ಹೈ ದುವಾ’ ಹಾಡನ್ನು ಹಾಡಿಸಿದ್ದ ಶಿಕ್ಷಾ ಮಿತ್ರರನ್ನು ಪೊಲೀಸರು ಬಂಧಿಸಿದ್ದು, ಶಿಕ್ಷಣ ಇಲಾಖೆ ಅವರನ್ನು ವಜಾ ಮಾಡಿದೆ.

- Advertisement -

ಇಕ್ಬಾಲ್ ರ ಹಾಡು ಹಾಡಿಸಿ ಒಂದು ಕೋಮಿನ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಬರೇಲ್ವಿಯ ಫರೀದ್’ಪುರ ಪೊಲೀಸ್ ಠಾಣೆಯಲ್ಲಿ ಮೊನ್ನೆ ಶಿಕ್ಷಕ ವಜೀರುದ್ದೀನ್ ಮೇಲೆ ದೂರು ನೀಡಲಾಗಿತ್ತು. ಪೊಲೀಸರು ನಿನ್ನೆ ಅವರನ್ನು ಬಂಧಿಸಿದರೆ, ಶನಿವಾರ ರಾಜ್ಯ ಶಿಕ್ಷಣ ಇಲಾಖೆ ಅವರನ್ನು ಶಿಕ್ಷಾ ಮಿತ್ರ ಹುದ್ದೆಯಿಂದ ವಜಾ ಮಾಡಿದೆ. ಆ ಹಾಡು ಸರಕಾರಿ ಶಾಲೆಗಳಿಗೆ ಸೂಚಿತವಾಗಿರಲಿಲ್ಲ ಎಂಬುದು ಸರಕಾರದ ಹೇಳಿಕೆ.

ಶಾಲೆಯ ಪ್ರಿನ್ಸಿಪಾಲ್ ಸಿದ್ದಿಕಿ ಅವರ ಮೇಲೂ ಮೊಕದ್ದಮೆ ಹೂಡಲಾಗಿದೆ. ಶಿಕ್ಷಣ ಇಲಾಖೆಯು ಅವರನ್ನು ಅಮಾನತು ಮಾಡಿದೆ. ಆದರೆ ಶಾಲಾ ಮಕ್ಕಳು ‘ಲಬ್ ಪೆ ಆತಿ ಹೈ ದುವಾ’ ಹಾಡು ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಸ್ಥಳೀಯ ವಿಶ್ವ ಹಿಂದೂ ಪರಿಷತ್’ನ ಪರವಾಗಿ ಸೋಂಪಾಲ್ ಸಿಂಗ್ ರಾಥೋಡ್ ಅವರು ವಜೀರುದ್ದೀನ್ ಮತ್ತು ಸಿದ್ದಿಕಿ ವಿರುದ್ಧ ಫರೀಧ್’ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಕ್ಕಳನ್ನು ಮತಾಂತರ ಮಾಡಲು ಈ ಪ್ರಾರ್ಥನಾ ಗೀತೆಯನ್ನು ಹಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಸಾರೇ ಜಹಾಂಸೆ ಅಚ್ಛಾ ಹಾಡಿನಿಂದ ಜಗತ್ಪ್ರಸಿದ್ಧರಾಗಿರುವ, ಅಲ್ಲಮಾ ಇಕ್ಬಾಲ್ ಎಂದೂ ಖ್ಯಾತರಾಗಿರುವ ದಿವಂಗತ ಕವಿ ಮುಹಮ್ಮದ್ ಇಕ್ಬಾಲ್ 1902ರಲ್ಲಿ ‘ಲಬ್ ಪೆ ಆತಿ ಹೈ ದುವಾ’ ಹಾಡು ಬರೆದಿದ್ದರು.

ವಜೀರುದ್ದೀನ್’ರನ್ನು ಶಿಕ್ಷಾ ಮಿತ್ರ ಸ್ಥಾನದಿಂದ ಮತ್ತು ಇಲಾಖೆಯಿಂದಲೇ ವಜಾ ಮಾಡಲಾಗಿದೆ. ಪ್ರಾರ್ಥನೆಗೆ ಬೇರೆಯೇ ಹಾಡು ಹಾಡಿಸಿದ್ದು ಅಪರಾಧ ಎಂದು ಬರೇಲ್ವಿ ಮೂಲ ಶಿಕ್ಷಣ ಅಧಿಕಾರಿ ವಿನಯ್ ಕುಮಾರ್ ಹೇಳಿದ್ದಾರೆ.

“ಹಿಂದೂಗಳ ಭಾವನೆಗೆ ಹಾನಿಯುಂಟು ಮಾಡಲು ಶಿಕ್ಷಕರಾದ ನಹೀದ್ ಸಿದ್ದಿಕಿ ಮತ್ತು ವಜೀರುದ್ದೀನ್ ಮುಸ್ಲಿಮರ ಹಾಡು ಹಾಡಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ದೂರಿದೆ.

  298ನೇ ವಿಧಿಯಡಿ ಸಿದ್ದಿಕಿ ಮತ್ತು ವಜೀರುದ್ದೀನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

2019ರ ಅಕ್ಟೋಬರ್ ನಲ್ಲಿ ಪಿಲಿಬಿಟ್ ಜಿಲ್ಲೆಯ ಬಿಸಾಲಪುರದ ಸರಕಾರಿ ಶಾಲೆಯಲ್ಲಿ ಮದರಸಾ ಹಾಡು ಹಾಡಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ನವರ ದೂರಿನ ಮೇಲೆ ಶಿಕ್ಷಕರನ್ನು ಅಮಾನತು ಮಾಡಲಾಗಿತ್ತು. ಅಲ್ಲೂ ಮಕ್ಕಳು ಹಾಡಿದ್ದುದು ಅಲ್ಲಮ ಇಕ್ಬಾಲರ ‘ಲಬ್ ಪೆ ಆತಿ ಹೈ ದುವಾ’ ಪ್ರಾರ್ಥನೆ ಗೀತೆಯಾಗಿತ್ತು.

Join Whatsapp