ಕಾಂಗ್ರೆಸ್ ನ ಮೃದು ಹಿಂದುತ್ವದಿಂದ ಬೇಸರ: ಜೆಡಿಎಸ್ ನತ್ತ ಮುಖಮಾಡಿರುವ ಅನ್ಸಾರಿ

Prasthutha|

ಬೆಂಗಳೂರು: ಲಘು ಹಿಂದುತ್ವದ ರಾಜಕಾರಣ ಇದೀಗ ಕಾಂಗ್ರೆಸ್ ಪಕ್ಷವನ್ನೂ ಸಹ ಸುತ್ತಿಕೊಳ್ಳುತ್ತಿದೆ. ಹನುಮನ ಜನ್ಮ ಸ್ಥಳವೆಂದು ಪ್ರತೀತಿ ಇರುವ ಅಂಜನಾದ್ರಿಯ ಗಂಗಾವತಿ ಕ್ಷೇತ್ರ ಇದೀಗ ಇದೇ ಕಾರಣಕ್ಕೆ ತಂತ್ರಗಾರಿಕೆಯ ತಾಣವಾಗಿ ಪರಿವರ್ತನೆಯಾಗಿದೆ. ಈ ಕ್ಷೇತ್ರದ ಮೇಲೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯ ತಂತ್ರಗಾರಿಕೆ ಆರಂಭಿಸಿವೆ.

- Advertisement -

ಲಘು ಹಿಂದುತ್ವ ರಾಜಕೀಯ ಮಾಡಬೇಕಾದರೆ ಈ ಬಾರಿ ಇಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್ ನ ಒಂದು ಬಣ ಲಾಬಿ ನಡೆಸುತ್ತಿದೆ. ರಾಜ್ಯ ಕಾಂಗ್ರೆಸ್ ನ ಹಲವು ಮುಖಂಡರನ್ನು ಭೇಟಿ ಮಾಡಿ ಮನವಿ ಮಾಡಿದೆ. ಕಳೆದ ಚುನಾವಣೆಯಲ್ಲಿ ಸೋತಿರುವ ಅನ್ಸಾರಿ ಬದಲಿಗೆ ಹಿಂದು ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರುತ್ತಿದೆ.

ಈ ಬೆಳವಣಿಗೆಯನ್ನು ಲಾಭವಾಗಿ ಪರಿವರ್ತಿಸಿಕೊಳ್ಳಲು ಮುಂದಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು, ಅನ್ಸಾರಿ ಅವರನ್ನು ಪಕ್ಷಕ್ಕೆ ಕರೆ ತರಲು ಪ್ರಯತ್ನ ನಡೆಸಿದ್ದಾರೆ. ಒಂದು ವೇಳೆ ಅನ್ಸಾರಿ ಅವರಿಗೆ ಟಿಕೆಟ್ ಭರವಸೆ ದೊರೆಯದಿದ್ದರೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರೆ. ಈ ಹಿಂದೆ ಜೆಡಿಎಸ್ ನಿಂದ ಗೆದ್ದಿದ್ದ ಇಕ್ಬಾಲ್ ಅನ್ಸಾರಿ ಟಿಕೆಟ್ ಕೊಡುವ ಪಕ್ಷಕ್ಕೆ ಗುಳೆ ಹೋಗಲಿದ್ದಾರೆ.  ಕಾಂಗ್ರೆಸ್ ಮತ್ತು ಜೆಡಿಎಸ್ ಜಗಳವನ್ನು ಲಾಭವಾಗಿ ಪರಿವರ್ತಿಸಿಕೊಳ್ಳಲು ಬಿಜೆಪಿ ನಾಯಕರು ರಣತಂತ್ರ ರೂಪಿಸಿದ್ದಾರೆ.

- Advertisement -

ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ – ಬಿಜೆಪಿ ನೇರ ಹಣಾಹಣಿ ಇದ್ದು, ಜೆಡಿಎಸ್ ಕೂಡ ಇಲ್ಲಿ ತನ್ನ ತಂತ್ರಗಾರಿಕೆ ಅನುಸರಿಸುವ ಸಾಧ್ಯತೆಯಿದೆ. ಹೀಗಾಗಿ ಕೊಪ್ಪಳದಲ್ಲಿ ಅಂಜನಾದ್ರಿ ಹನುಮನ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣ ಕುತೂಹಲ ಕೆರಳಿಸಿದೆ.

ಹನುಮನ ನಾಡು ಹಾಗೂ ಜನ್ಮ ಸ್ಥಳ ಕೊಪ್ಪಳದ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಗೆ ಸ್ವಪಕ್ಷೀಯರಿಂದಲೇ ಧರ್ಮ ಸಂಕಟ ಎದುರಾಗಿದೆ. ಅನ್ಸಾರಿಗೆ ಕಾಂಗ್ರೆಸ್ ನಿಂದ ಟಿಕೆಟ್ ತಪ್ಪಿಸಲು ಮಾಜಿ ಸಂಸದ ಎಚ್. ಜಿ. ರಾಮುಲು ತಂಡ ಟೊಂಕಕಟ್ಟಿ ನಿಂತಿದೆ. ಇದರಿಂದ ಗಂಗಾವತಿ ಕಾಂಗ್ರೆಸ್ ನಲ್ಲಿ ಯಾವುದೂ ಸರಿಯಿಲ್ಲ ಎನ್ನುವ ಅಪಸ್ವರಗಳು ಶುರುವಾಗಿವೆ. ಈ ಬಾರಿ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಬೇಡ ಎಂದು ಕಾಂಗ್ರೆಸ್ ಮುಖಂಡರಿಂದ ಒತ್ತಾಯಿಸುವುದಕ್ಕೆ ಕಾರಣ ಕೊಪ್ಪಳದಲ್ಲಿ ಹನುಮನ ಹೆಸರಿನಲ್ಲಿ ಚುನಾವಣೆಗೆ ಸಿದ್ಧತೆ ಶುರುವಾಗಿದೆ. ಧರ್ಮದ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ಸಜ್ಜಾಗಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆಲ್ಲಲು ಧರ್ಮ ಒಂದೇ ಅಸ್ತ್ರ, ಹಾಗಾಗಿ ಹಿಂದೂ ನಾಯಕರಿಗೆ ಟಿಕೆಟ್ ಕೊಡಿ, ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಕೊಟ್ಟರೆ ಸೋಲು ಖಚಿತ ಎಂದು ಸ್ವಪಕ್ಷೀಯ ಕಾರ್ಯಕರ್ತರು ತಮ್ಮ ಕಾಂಗ್ರೆಸ್ ನಾಯಕರ ಮುಂದೆ ಭವಿಷ್ಯ ಹೇಳಲು ಆರಂಭಿಸಿದ್ದಾರೆ.

2018ರಲ್ಲಿ ಅನ್ಸಾರಿ ಸೋಲಿಗೆ ಕಾರಣವಾಗಿದ್ದು ಇದೇ ಧರ್ಮದ ಪಾಲಿಟಿಕ್ಸ್. ಇನ್ನು ಅನ್ಸಾರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ನಲ್ಲಿ ಬಂಡಾಯ ಸಾಧ್ಯತೆಗಳು ಹೆಚ್ಚಾಗಿದ್ದು, ಗಂಗಾವತಿಯ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಬದಲಾವಣೆಗೆ ಕಾಂಗ್ರೆಸ್ ನ ಬಣವೊಂದು ಪಟ್ಟು ಹಿಡಿದಿದೆ. ಇಕ್ಬಾಲ್ ಅನ್ಸಾರಿ ವಿರುದ್ಧ ಸಜ್ಜಾಗಿರುವ ಮಾಜಿ ಸಂಸದ ಎಚ್.ಜಿ.ರಾಮುಲು ಟೀಮ್ ನ ಕಾಂಗ್ರೆಸ್ ಮುಖಂಡ ವೀರಭದ್ರಪ್ಪ, ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ, ಎಚ್.ಆರ್. ಶ್ರೀನಾಥ್ ರಿಂದ ಅನ್ಸಾರಿಗೆ ಟಿಕೆಟ್ ತಪ್ಪಿಸಲು ಭರ್ಜರಿ ಪ್ಲಾನ್ ನಡೆಸಿದ್ದಾರೆ.

ಇತ್ತ ಅನ್ಸಾರಿ ವಿರುದ್ಧ ಅಪಸ್ವರಗಳು ಶುರವಾದ ಬೆನ್ನೆಲ್ಲೇ, ಇಕ್ಬಾಲ್ ಅನ್ಸಾರಿಯನ್ನು ಜೆಡಿಎಸ್ ತನ್ನತ್ತ ಸೆಳೆಯಲು ಪ್ಲಾನ್ ನಡೆದಿದೆ ಎನ್ನಲಾಗುತ್ತಿದೆ. ಸಿಎಂ ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ಪ್ರಬಲ ಮುಸ್ಲಿಂ ನಾಯಕರನ್ನು ಸೆಳೆಯಲು ಇಬ್ರಾಹಿಂ ಪ್ಲಾನ್ ಮಾಡುತ್ತಿದ್ದು, ಇದರಲ್ಲಿ ಇಕ್ಬಾಲ್ ಅನ್ಸಾರಿಗೆ ಜೆಡಿಎಸ್ ಗೆ ಕರೆತರಲು ಸಿಎಂ ಇಬ್ರಾಹಿಂ ಪ್ರಯತ್ನ ನಡೆಸಿದ್ದಾರೆ,

ಕಾಂಗ್ರೆಸ್ ನಾಯಕರ ನಡೆ ಕಂಡು ಅಸಮಾಧಾನಗೊಂಡಿರುವ ಅನ್ಸಾರಿ ಜೆಡಿಎಸ್ ನತ್ತ ಮುಖಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಧರ್ಮದ ಹೆಸರಿನಲ್ಲಿ ಅನ್ಸಾರಿಗೆ ಕಾಂಗ್ರೆಸ್ ನಿಂದ ಟಿಕೆಟ್ ತಪ್ಪಿಸಲು ಸ್ವಪಕ್ಷಿಯ ಮುಖಂಡರ ಪಟ್ಟು ಅನ್ಸಾರಿ ಬಣದ ಬೆಂಬಲಿಗರನ್ನು ಕಣ್ಣುಕೆಂಪಾಗಿಸಿದೆ.

Join Whatsapp