ರೈತರ ಹತ್ಯೆ ತನಿಖೆ ನಿರೀಕ್ಷಿಸಿದ ಮಟ್ಟದಲ್ಲಿ ನಡೆಯುತ್ತಿಲ್ಲ : ಉ.ಪ್ರ. ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

Prasthutha|

ಹೊಸದಿಲ್ಲಿ : ಉತ್ತರಪ್ರದೇಶದ ಲಖಿಂಪುರಖೇರಿ ಹಿಂಸಾಚಾರ ಘಟನೆಯಲ್ಲಿನ ರೈತರ ಹತ್ಯೆ ತನಿಖೆಯು ನಾವು ನಿರೀಕ್ಷಿಸಿದ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ .

- Advertisement -

“ನಾವು ರಾಜಕೀಯ ಬಣ್ಣವನ್ನು ಸೇರಿಸಲು ಬಯಸುವುದಿಲ್ಲ. ನಿವೃತ್ತ (ಹೈಕೋರ್ಟ್) ನ್ಯಾಯಾಧೀಶರು (ಪ್ರಕರಣ) ಮೇಲ್ವಿಚಾರಣೆ ಮಾಡಲಿ. ನಾವು ನಿರೀಕ್ಷಿಸಿದ ರೀತಿಯಲ್ಲಿ ತನಿಖೆ ನಡೆಯುತ್ತಿಲ್ಲ ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ತನಿಖೆಯಲ್ಲಿ ಕಳಪೆ ಪ್ರಗತಿಯ ಬಗ್ಗೆ ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ವೇಳೆ ನಾಲ್ವರು ರೈತರು ಹಾಗೂ ಪತ್ರಕರ್ತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ವಾಹನಕ್ಕೆ ಸೇರಿದ್ದ ಎನ್ನಲಾದ ಎಸ್‌ಯುವಿ ವಾಹನವನ್ನು ಉದ್ದೇಶಪೂರ್ವಕವಾಗಿ ರೈತರ ಮೇಲೆ ಹರಿಸಿ ನಾಲ್ವರನ್ನು ಹತ್ಯೆಗೈಯ್ಯಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 13 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ.

- Advertisement -

ಲಖಿಂಪುರ್ ಖೇರಿ ಹತ್ಯಾಕಾಂಡ ಘಟನೆಗೆ ಸಂಬಂಧಿಸಿದಂತೆ ಎಸ್‌ ಐಟಿ ನಡೆಸುತ್ತಿರುವ ತನಿಖೆಯ ಮೇಲ್ವಿಚಾರಣೆಗಾಗಿ ಉತ್ತರ ಪ್ರದೇಶ ಸರ್ಕಾರ ನೇಮಿಸಿರುವ ನ್ಯಾಯಾಂಗ ಆಯೋಗದ ಬಗ್ಗೆ ತಮಗೆ ವಿಶ್ವಾಸವಿಲ್ಲ ಎಂದು ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ.

ಘಟನೆಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೇನಿ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸೇರಿದ ನಾಲ್ಕು ಚಕ್ರದ ವಾಹನ ಹರಿದಿತ್ತು. ಘಟನೆ ಮತ್ತು ಆ ಬಳಿಕ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು. ತನಿಖೆಯ ಮೇಲ್ವಿಚಾರಣೆಗಾಗಿ ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರನ್ನೊಳಗೊಂಡ ಏಕವ್ಯಕ್ತಿ ಆಯೋಗವನ್ನು ಉತ್ತರ ಪ್ರದೇಶ ಸರ್ಕಾರ ನೇಮಿಸಿತ್ತು.

ಪ್ರಕರಣವನ್ನು ಆಲಿಸಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಬೇರೆ ರಾಜ್ಯದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು ತನಿಖೆಯ ಮೇಲ್ವಿಚಾರಣೆ ನಡೆಸಬೇಕೆಂದು ಹೇಳಿದೆ. ಈ ಹಿನ್ನೆಲೆಯಲ್ಲಿ ತನಿಖೆಯ ನೇತೃತ್ವ ವಹಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ರಾಕೇಶ್ ಕುಮಾರ್ ಜೈನ್ ಅಥವಾ ರಂಜಿತ್ ಸಿಂಗ್ ಅವರ ಹೆಸರನ್ನು ಅದು ಸೂಚಿಸಿದೆ.

“ಪ್ರಕರಣದಲ್ಲಿ ಯಾವುದೇ ಸಾಕ್ಷ್ಯ ಕಲಸು ಮೇಲೊಗರವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಾವು ಈ ತನಿಖೆಯ ಮೇಲ್ವಿಚಾರಣೆಗೆ ಬೇರೆ ರಾಜ್ಯದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು ನೇಮಕವಾಗಬೇಕೆಂಬ ಇಚ್ಛೆ ವ್ಯಕ್ತಪಡಿಸುತ್ತಿದ್ದೇವೆ. ನಿಮ್ಮ ರಾಜ್ಯದ ನ್ಯಾಯಾಂಗ ಸಮಿತಿ ಅದನ್ನು ಮೇಲ್ವಿಚಾರಣೆ ಮಾಡುವ ಬಗ್ಗೆ ನಮಗೆ ವಿಶ್ವಾಸವಿಲ್ಲ. ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಅಥವಾ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ರಂಜಿತ್ ಸಿಂಗ್ ಮೇಲ್ವಿಚಾರಣೆ ಮಾಡಬಹುದು, ”ಎಂದು ಪೀಠ ಹೇಳಿತು.

ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸುವ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಅವರು ಈ ಕುರಿತಂತೆ ಸರ್ಕಾರದಿಂದ ಸೂಚನೆ ಪಡೆಯುವುದಾಗಿ ತಿಳಿಸಿದರು. ಹೀಗಾಗಿ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ನವೆಂಬರ್ 12ಕ್ಕೆ (ಶುಕ್ರವಾರ) ಮುಂದೂಡಿತು.

ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಬೇಕು ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಕೋರಿ ಬಂದಿರುವ ಪತ್ರಗಳ ಆಧಾರದ ಮೇಲೆ ದಾಖಲಾಗಿರುವ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸುವಂತೆ ಮತ್ತು ಘಟನೆಯಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ತಮ್ಮ ಪತ್ರದಲ್ಲಿ, ವಕೀಲರಾದ ಶಿವಕುಮಾರ ತ್ರಿಪಾಠಿ ಮತ್ತು ಸಿ ಎಸ್ ಪಾಂಡ ಕೋರಿದ್ದರು.

ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರು ನಿರ್ವಹಿಸುತ್ತಿರುವ ರೀತಿಗೆ ನ್ಯಾಯಾಲಯ ಈ ಹಿಂದೆ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ಅಕ್ಟೋಬರ್ 7 ರಂದು ನಡೆದ ವಿಚಾರಣೆ ವೇಳೆ , ಎಫ್‌ಐಆರ್‌ ದಾಖಲಿಸಲಾಗಿದೆಯೇ, ಆರೋಪಿಗಳನ್ನು ಬಂಧಿಸಲಾಗಿದೆಯೇ ಎಂಬ ಕುರಿತಂತೆ ಸ್ಥಿತಿಗತಿ ವರದಿ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತ್ತು. ಅಲ್ಲದೆ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಅಕ್ಟೋಬರ್ 26ರಂದು ನಡೆದ ವಿಚಾರಣೆ ವೇಳೆ ಸೂಚಿಸಿತ್ತು.

ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು ಒಂದು- ರೈತರ ಸಾವಿನ ಬಗ್ಗೆ ಮತ್ತೊಂದು- ಹಿಂಸಾಚಾರದಲ್ಲಿ ಅಸುನೀಗಿದ ರಾಜಕೀಯ ಕಾರ್ಯಕರ್ತರ ಬಗ್ಗೆ ಹಾಗೂ ಮೂರನೆಯದು- ಪತ್ರಕರ್ತರೊಬ್ಬರ ಸಾವಿನ ಬಗ್ಗೆ ಎಂದು ಇಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಲಾಯಿತು. ಇದೇ ವೇಳೆ ನ್ಯಾಯಾಲಯ ಮೂರು ಎಫ್‌ಐಆರ್‌ಗಳಲ್ಲಿನ ತನಿಖೆಯು ಪರಸ್ಪರ ಸ್ವತಂತ್ರವಾಗಿರಬೇಕಿದ್ದು ಒಂದು ಘಟನೆಯ ಸಾಕ್ಷಿಗಳನ್ನು ಮತ್ತೊಂದು ಘಟನೆಯ ಆರೋಪಿಗಳ ರಕ್ಷಣೆಗೆ ಬಳಸಬಾರದು ಎಂದು ಸೂಚಿಸಿತು.

“ಈಗ ಎರಡು ಎಫ್‌ಐಆರ್‌ಗಳಿವೆ ಎಂದು ಹೇಳಲಾಗುತ್ತಿದ್ದು, ಒಂದು ಎಫ್‌ಐಆರ್‌ನಲ್ಲಿ ಸಂಗ್ರಹಿಸಿದ ಸಾಕ್ಷ್ಯವನ್ನು ಮತ್ತೊಂದಕ್ಕೆ ಬಳಸಲಾಗುತ್ತಿದೆ. ಎಫ್‌ಐಆರ್ ಸಂಖ್ಯೆ 220ರಲ್ಲಿರುವ ಸಾಕ್ಷ್ಯಗಳನ್ನು ಆರೋಪಿಗಳನ್ನು ರಕ್ಷಿಸುವ ರೀತಿಯಲ್ಲಿ ಸಂಗ್ರಹಿಸಲಾಗುತ್ತಿದೆ,” ಎಂದು ಪೀಠ ಹೇಳಿದೆ.

“ಒಂದು ಸೆಟ್ (ಎಫ್‌ಐಆರ್‌) ರೈತರದ್ದು, ಒಂದು ಸೆಟ್ ಪತ್ರಕರ್ತರದ್ದು ಹಾಗೂ ಇನ್ನೊಂದು ರಾಜಕೀಯ ಕಾರ್ಯಕರ್ತರದ್ದು. ರಾಜಕೀಯ ಕಾರ್ಯಕರ್ತರ ಸೆಟ್‌ನಲ್ಲಿ ಆರೋಪಿಗಳು ಸ್ವತಃ ಸತ್ತಿದ್ದಾರೆ, ಆದ್ದರಿಂದ ರೈತರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಸೆಟ್‌ನಲ್ಲಿರುವ ಸಾಕ್ಷಿ ಬಂದು ಮೊದಲನೇ ಸೆಟ್‌ನಲ್ಲಿರುವ ಆರೋಪಿ ಪರ ಹೇಳಿಕೆ ನೀಡುತ್ತಾನೆ ” ಎಂದು ನ್ಯಾ. ಸೂರ್ಯಕಾಂತ್ ಟೀಕಿಸಿದರು. ಎರಡೂ ಪ್ರಕ್ರಿಯೆಗಳು ಸ್ವತಂತ್ರವಾಗಿರಬೇಕು ಎಂದು ನ್ಯಾಯಮೂರ್ತಿಗಳು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ರೈತರ ಸಾವಿನ ಪ್ರಕರಣ ನಿರಾಕರಿಸಲು ಬರುವವರಿಗೆ ಇದು ಸ್ವತಂತ್ರ ಪ್ರಕ್ರಿಯೆಯಾಗಿರಬೇಕು ಮತ್ತು ಇತರ ಪ್ರಕರಣಗಳಲ್ಲಿ ಸಂಗ್ರಹಿಸುವ ಸಾಕ್ಷ್ಯವನ್ನು ಇದರಲ್ಲಿ ಬಳಸುವುದಿಲ್ಲ ಎಂದು ನಾವು ಎಸ್‌ಐಟಿಯಿಂದ ನಿರೀಕ್ಷಿಸುತ್ತೇವೆ ಎಂಬುದಾಗಿ ಅವರು ಹೇಳಿದರು. ಮೂರೂ ಎಫ್‌ಐಆರ್‌ಗಳನ್ನು ಪರಸ್ಪರ ಜೋಡಿಸದೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಎಸ್‌ಐಟಿ ಮೂಡಿಸುತ್ತಿದೆ. ಈ ಎಫ್‌ಐಆರ್‌ಗಳ ನಡುವೆ ತನಿಖೆಯ ಅಂತರ ಕಾಯ್ದುಕೊಳ್ಳಲು ಎಸ್‌ಐಟಿಗೆ ಸಾಧ್ಯವಾಗುತ್ತಿಲ್ಲ ಎಂಬುದು ನಮಗೆ ತಿಳಿಯುತ್ತಿದೆ ಎಂಬುದಾಗಿ ಅವರು ಹೇಳಿದರು. ಹಾಗಾಗಿ ಬೇರೆ ರಾಜ್ಯದ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ತನಿಖೆಯ ಮೇಲ್ವಿಚಾರಣೆ ನಡೆಸುವುದು ಸೂಕ್ತ ಎಂದು ಪೀಠ ಅಭಿಪ್ರಾಯಪಟ್ಟಿತು.

“ಇದರಲ್ಲಿ ರಾಜಕೀಯ ಪ್ರಚೋದನೆ ಇದೆ” ಎಂದು ಸಾಳ್ವೆ ಇದೇ ವೇಳೆ ಹೇಳಿದರು. ಆಗ ಸಿಜಿಐ ರಮಣ “ನಮಗೆ ಯಾವುದೇ ಪ್ರಚೋದನೆ ಬೇಕಿಲ್ಲ. ನೀವು ಸರ್ಕಾರದ ಕಡೆಯಿಂದ ಪತ್ತೆ ಮಾಡಿ ಮತ್ತು ನಾವು ಮಾಜಿ ನ್ಯಾಯಮೂರ್ತಿಗಳನ್ನು ನೇಮಿಸಬಹುದಾಗಿದೆ. ನಾವು ಇದನ್ನು (ಪ್ರಕರಣವನ್ನು) ಶುಕ್ರವಾರ ಕೈಗೆತ್ತಿಕೊಳ್ಳುತ್ತೇವೆ” ಎಂದರು.

(ಕೃಪೆ: ಬಾರ್ & ಬೆಂಚ್)

Join Whatsapp