ದಾಳಿ ತೀವ್ರತೆಗೆ ದಂತ ಕಳೆದುಕೊಂಡ ಆನೆ, ದೇಹ ಛಿದ್ರಗೊಂಡು ಕಾರ್ಮಿಕ ಮೃತ್ಯು

Prasthutha|

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿ ಮುಂದುವರೆದಿದ್ದು, ಸೋಮವಾರ ಟಿಂಬರ್ ಕಾರ್ಮಿಕನೊಬ್ಬರು ದೇಹ ಛಿದ್ರ ಛಿದ್ರಗೊಂಡು ಪ್ರಾಣ ಕಳಕೊಂಡಿದ್ದಾರೆ. ದಾಳಿಯ ತೀವ್ರತೆಗೆ ಆನೆಯು ತನ್ನ ಒಂದು ದಂತವನ್ನೇ ಕಳೆದುಕೊಂಡಿದೆ. ಘಟನೆ ಚಿಕ್ಕಮಗಳೂರು ತರೀಕೆರೆ ತಾಲ್ಲೂಕು ತಣಿಗೆಬೈಲ್ನ ವರ್ತೆಗುಂಡಿ ಗ್ರಾಮದಲ್ಲಿ ನಡೆದಿದೆ.

- Advertisement -

35 ವರ್ಷದ ಅಕ್ಬರ್ ಎಂಬವರು ಆನೆ ದಾಳಿಗೆ ಬಲಿಯಾದ ವ್ಯಕ್ತಿ. ಅವರು ಟಿಂಬರ್ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಮಧ್ಯಾಹ್ನ ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟಿದ್ದು, ಜನರು ತೋಟದ ಸುತ್ತಲೂ ನಿಂತು ಅದನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಸಿದ್ದರು. ಈ ವೇಳೆ ಜನರತ್ತ ದಾಳಿ ನಡೆಸಿದಾಗ ತಪ್ಪಿಸಿಕೊಳ್ಳಲು‌ ಓಡಿದ ಅಕ್ಬರ್ ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಆತನನ್ನು ಆನೆ ಕಾಲಿನಿಂದ ಒಸಕಿ, ಕೋರೆಯಿಂದ ತಿವಿದಿದೆ.

- Advertisement -

ಆನೆಯ ತಿವಿತದ ರಭಸಕ್ಕೆ ಅದರ ಕೊಂಬು ತುಂಡಾಗಿ ನೆಲದಲ್ಲಿ ಹೂತುಕೊಂಡಿದ್ದು, ದೇಹದಿಂದ ಬೇರ್ಪಟ್ಟಿದೆ. ಅಕ್ಬರ್ ದೇಹ ಛಿದ್ರ-ಛಿದ್ರವಾಗಿದ್ದು, ಕರುಳು ಹೊರಕ್ಕೆ ಬಂದಿದೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

Join Whatsapp