ಇವಿಎಂ ತಿರುಚಲು 2.5 ಕೋಟಿ ರೂ. ಬೇಡಿಕೆಯಿಟ್ಟ ಯೋಧನ ಬಂಧನ

Prasthutha|

ಮುಂಬೈ: 2.5 ಕೋಟಿ ರೂ. ಕೊಟ್ಟರೆ ಇವಿಎಂ ಯಂತ್ರವನ್ನು ತಿರುಚುತ್ತೇನೆ ಎಂದು ಸೇನಾ ಸಿಬ್ಬಂದಿಯೋರ್ವ ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಗೆ ಬೇಡಿಕೆಯಿಟ್ಟ ಘಟನೆ ನಡೆದಿದ್ದು, ಆತನನ್ನು ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಿದ್ದಾರೆ.

- Advertisement -

ಮಾರುತಿ ಧಕ್ನೆ(42) ಬಂಧಿತ ಯೋಧ. ಮಹಾರಾಷ್ಟ್ರದ ಪಥರ್ಡಿಯ ನಿವಾಸಿ ಧಕ್ನೆ ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ ನೆಲೆಸಿದ್ದಾರೆ. ಚಿಪ್ ಬಳಸಿ ಇವಿಎಂಗಳನ್ನು ತಿರಚಬಹುದು ಎಂದು ಹೇಳಿ ಹಣವನ್ನು ಕೋರಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಛತ್ರಪತಿ ಸಂಭಾಜಿನಗರ ಪೊಲೀಸ್ ಆಯುಕ್ತ ಮನೋಜ್ ಲೋಹಿಯಾ, ಇವಿಎಂಗಳನ್ನು ತಿರುಚಲು ಶಿವಸೇನಾ(ಯುಬಿಟಿ) ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಜಮ್ಮುವಿನಲ್ಲಿ ನಿಯೋಜಿಸಲಾದ ಸೇನಾ ಯೋಧನನ್ನು ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿದೆ. ಯೋಧ ಸಾಲವನ್ನು ಹೊಂದಿದ್ದರು. ಇವಿಎಂಗಳ ಬಗ್ಗೆ ಅವರಿಗೆ ಯಾವುದೇ ಜ್ಞಾನ ಇರಲಿಲ್ಲ, ಅವರು ಕೇವಲ ಮೋಸ ಮಾಡುವ ಉದ್ದೇಶದಿಂದ ಈ ರೀತಿ ಬೇಡಿಕೆಯನ್ನು ಇಟ್ಟಿದ್ದಾರೆ. ಮಾರುತಿ ಧಕ್ನೆ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಮತ್ತು 511ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

Join Whatsapp