ಬಾಬಾ ಬುಡಾನ್ ಗಿರಿಗೆ ಅರ್ಚಕ ನೇಮಿಸಲು, ಗೋರಿ ತೆರವುಗೊಳಿಸಲು ನ್ಯಾಯಾಲಯ ಆದೇಶ ನೀಡಿಲ್ಲ: ಎಚ್.ಎಚ್. ದೇವರಾಜ್

Prasthutha|

ಚಿಕ್ಕಮಗಳೂರು: ಬಾಬಾ ಬುಡಾನ್ ಗಿರಿ – ದತ್ತಪೀಠ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿರುವ ಆದೇಶದಲ್ಲಿ ಗೋರಿಗಳನ್ನು ಸ್ಥಳಾಂತರಿಸುವುದಾಗಲೀ, ಹಿಂದೂ ಅರ್ಚಕರನ್ನು ನೇಮಿಸುವ ಬಗ್ಗೆಯಾಗಲೀ ತೀರ್ಮಾನ ನೀಡಿಲ್ಲ. ರಾಜ್ಯದ ಇಂಧನ ಸಚಿವ ಸುನೀಲ್ ಕುಮಾರ್ ನ್ಯಾಯಾಲಯದ ಆದೇಶವನ್ನು ತಿರುಚಿ ಸಂಘರ್ಷಕ್ಕೆ ಎಡೆಮಾಡಿಕೊಡುವಂತಹ ಹೇಳಿಕೆ ನೀಡುವುದು ಹಾಸ್ಯಾಸ್ಪದ ಹಾಗೂ ಖಂಡನೀಯ ಎಂದು ಪ್ರಗತಿಪರ ಚಿಂತಕ ಎಚ್.ಎಚ್.ದೇವರಾಜ್ ಹೇಳಿದ್ದಾರೆ.

- Advertisement -


ಈ ಬಗ್ಗೆ ಆಡಿಯೋ ಬಿಡುಗಡೆ ಮಾಡಿರುವ ಅವರು, ನ್ಯಾಯಾಲಯದ ಆದೇಶವನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳದೆ ಸಚಿವರು ತರಾತುರಿಯಲ್ಲಿ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಗೆ ಬಂದು ಗೋರಿಗಳನ್ನು ತೆರವುಗೊಳಿಸಬೇಕು ಎಂದು ಹೇಳಿಕೆ ನೀಡಿ ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟು ಮಾಡಲು ಪ್ರಯತ್ನಿಸಿದ್ದಾರೆ. ನ್ಯಾಯಾಲಯದ ತೀರ್ಪಿನಲ್ಲಿ ಈ ರೀತಿಯ ಆದೇಶವಿಲ್ಲ. ಸಚಿವರ ಹೇಳಿಕೆ ಸುಳ್ಳಿನಿಂದ ಕೂಡಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸುನೀಲ್ ಕುಮಾರ್ ಸಮಸ್ಯೆಯನ್ನು ಪರಿಹಾರ ಮಾಡುವ ಪ್ರಯತ್ನ ಮಾಡಬೇಕೇ ಹೊರತು ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಅವರು ಬಜರಂಗದಳದ ಅಧ್ಯಕ್ಷರಾಗಿದ್ದಾಗ ನೀಡುವ ಹೇಳಿಕೆ ಬೇರೆ, ಈಗ ಸಚಿವನಾಗಿ ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕು ಎಂದು ದೇವರಾಜ್ ಹೇಳಿದ್ದಾರೆ.

Join Whatsapp