ಪ್ರತಿಭಟನೆ, ಧರಣಿ, ವಿರೋಧದ ಮಧ್ಯೆ ಗುತ್ತಿಗೆದಾರ ಸಂತೋಷ್ ಅಂತ್ಯಕ್ರಿಯೆ

Prasthutha|

ಬೆಳಗಾವಿ: ಸಚಿವ ಕೆ.ಎಸ್.ಈಶ್ವರಪ್ಪ ಹೆಸರು ಬರೆದಿಟ್ಟು ಉಡುಪಿಯ ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರ ಅಂತ್ಯಕ್ರಿಯೆ ಪ್ರತಿಭಟನೆ ಮತ್ತು ವಿರೋಧದ ನಡುವೆ ಬೆಳಗಾವಿ ತಾಲೂಕಿನ ಬಡಸ್ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆಯಿತು.

- Advertisement -

ಕಾಂಗ್ರೆಸ್ ನಾಯಕರ ತೀವ್ರ ವಿರೋಧದ ನಡುವೆಯೂ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸಂತೋಷ್ ಪಾಟೀಲ್ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಗ್ರಾಮದಲ್ಲಿ ಇಂದು ಮೂರು ಮದುವೆ ಇದ್ದ ಕಾರಣ ಬೇಗ ಅಂತ್ಯಕ್ರಿಯೆ ಮುಗಿಸುವಂತೆ ಗ್ರಾಮಸ್ಥರು ಕೋರಿದ್ದರು. ಜೊತೆಗೆ ಮೃತ ಸಂತೋಷ್ ಸಂಬಂಧಿಕರು ಮೃತದೇಹದ ಮುಂದೆ ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

- Advertisement -

ನ್ಯಾಯಕ್ಕಾಗಿ ಹೋರಾಟ ಮಾಡೋಣ. ಬಾಕಿ ಬಿಲ್ ಮಂಜೂರಾತಿ ಹಾಗೂ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸೋಣ ಎಂದು ಪ್ರತಿಭಟನಕಾರರಿಗೆ ಸಮಾಧಾನ ಪಡಿಸಲಾಯಿತು. ಬಳಿಕ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಜಮೀನಿಗೆ ತಂದು, ಲಿಂಗಾಯತ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಶವದ ಬಳಿ ಕಾಂಗ್ರೆಸ್ ಧರಣಿ: ವಿಧಿವಿಧಾನಗಳು ಮುಗಿಯುತ್ತಿದ್ದಂತೆ ಅಂತ್ಯಸಂಸ್ಕಾರಕ್ಕೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಆಪ್ತ ಅಡಿವೇಶ ಇಟಗಿ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದು, ಪರಿಹಾರ ಘೋಷಣೆ ಮಾಡಬೇಕು ಹಾಗೂ ಬಾಕಿ ಬಿಲ್ ಮಂಜೂರಾತಿ ಮಾಡಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲೇ ಇರುವ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಇಲ್ಲವೇ ಬಿಜೆಪಿ ಮುಖಂಡರು ಸ್ಥಳಕ್ಕೆ ಬರಬೇಕು ಎಂದು ಶಾಸಕಿ ಹೆಬ್ಬಾಳ್ಕರ್ ಪಟ್ಟು ಹಿಡಿದಿದ್ದರು. ಗ್ರಾಮಸ್ಥರು ಇವರ ಪ್ರತಿಭಟನೆಗೆ ವಿರೋಧಿಸಿದ್ದು, ನ್ಯಾಯಕ್ಕಾಗಿ ಹೋರಾಡೋಣ, ಈಗ ಅಂತ್ಯಕ್ರಿಯೆ ನೆರವೇರಿಸೋಣ ಎಂದರು. ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಕೈ ಕೈ ಮಿಲಾಸುವ ಹಂತ:

ಇದಕ್ಕೂ ಮುನ್ನ ಗುತ್ತಿಗೆದಾರ ಸಂತೋಷ್ ಪಾಟಿಲ್ ಅಂತ್ಯಕ್ರಿಯೆ ವಿಚಾರದಲ್ಲಿ ಸಂಬಂಧಿಕರ ಮಧ್ಯೆಯೇ ಕೈ ಕೈ ಮಿಲಾಯಿಸುವ ಹಂತಕ್ಕೆ ವಾಗ್ವಾದ ನಡೆದಿತ್ತು.

ಸಂತೋಷ್ ಮೃತದೇಹವನ್ನು ಬೆಳಗಾವಿಯಲ್ಲಿರುವ ಅವರ ಮನೆ ಮುಂದೆ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಶಾಸಕಿ ಮಾತನಾಡಿ, ಸಂತೋಷ್ ಆತ್ಮಹತ್ಯೆಗೆ ನ್ಯಾಯ ಸಿಗಬೇಕು. ಜೊತೆಗೆ ಪರಿಹಾರ ಸಿಗಬೇಕು. ಅಲ್ಲಿಯವರೆಗೂ ಸಂತೋಷ್ ಅವರ ಮೃತದೇಹವನ್ನು ಕದಲಿಸುವುದು ಬೇಡ ಎಂದು ಹೇಳಿದ್ದಾರೆ.

ಗ್ರಾಮಸ್ಥರ ಮಧ್ಯಸ್ಥಿಕೆ:

ಇದಕ್ಕೆ ಪ್ರತಿಕ್ರಿಯಿಸಿದ್ದ ಸಂತೋಷ್ ಸಂಬಂಧಿಗಳು ಅಂತ್ಯಕ್ರಿಯೆ ಮಾಡೋಣ. ಸಂತೋಷ್ ಮೃತದೇಹ ಇಟ್ಟು ಪ್ರತಿಭಟನೆ ಮಾಡುವುದು ಬೇಡ ಎಂದಿದ್ದರು. ಆ ಬಳಿಕ ಸಂತೋಷ್ ಪಾಟೀಲ್ ಸಂಬಂಧಿಕರ ಮಧ್ಯೆಯೇ ಕೈಕೈ ಮಿಲಾಯಿಸುವ ಹಂತಕ್ಕೆ ವಾಗ್ವಾದ ನಡೆದಿದೆ. ಕೂಡಲೇ ಅಲ್ಲಿದ್ದ ಗ್ರಾಮಸ್ಥರು ಮಧ್ಯಸ್ಥಿಕೆ ವಹಿಸಿ ಇಬ್ಬರನ್ನೂ ಶಾಂತ ಪಡಿಸಿದರು.

ನಂತರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಿ, ಲಿಂಗಾಯತ ವಿಧಿ ವಿಧಾನದಂತೆ ನೆರವೇರಲಿರುವ ಸಂತೋಷ ಪಾಟೀಲ್ ಅಂತ್ಯಕ್ರಿಯೆ ನಡೆಸಲಾಯಿತು.

Join Whatsapp