ಕಮಲದ ಆಕಾರದಂತೆ ನಿರ್ಮಾಣವಾಗುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸ ಬದಲಿಸಿ: ಕಾಂಗ್ರೆಸ್ ಆಗ್ರಹ

Prasthutha|

ಬೆಂಗಳೂರು : ‘ರಾಜಕೀಯ ಪಕ್ಷದ ಚಿಹ್ನೆಯ ಪ್ರಚಾರಕ್ಕೆ ಸಾರ್ವಜನಿಕ ಹಣ ಮತ್ತು ಜಾಗ ಬಳಕೆ ಮಾಡುವುದು ಸರಿಯಲ್ಲ. ಈ ಹಿಂದಿನ ಪ್ರಕರಣಗಳಲ್ಲಿ ಹೈಕೋರ್ಟ್ ಹಾಗೂ ಚುನಾವಣ ಆಯೋಗ ಇದನ್ನು ವಿರೋಧಿಸಿವೆ. ಹೀಗಾಗಿ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸವನ್ನು ಬದಲಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

- Advertisement -

ಸೋಮವಾರ ಬೆಂಗಳೂರಿನ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕರಾದ ಎನ್.ಎ ಹ್ಯಾರಿಸ್ ಹಾಗೂ ಎಐಸಿಸಿ ವಕ್ತಾರರಾದ ಬ್ರಿಜೆಶ್ ಕಾಳಪ್ಪ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಈ ವೇಳೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಂಯೋಜಕರಾದ ಎಂ. ರಾಮಚಂದ್ರಪ್ಪ ಹಾಗೂ ಎಂ.ಎ ಸಲೀಂ ಅವರು ಉಪಸ್ಥಿತರಿದ್ದರು.

‘ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಇದರ ವಿನ್ಯಾಸ ಕಮಲದ ಆಕಾರದಲ್ಲಿದೆ. ಕಮಲ ಯಾವ ಪಕ್ಷದ ಚಿಹ್ನೆ ಎಂದು ಎಲ್ಲರಿಗೂ ಗೊತ್ತಿದೆ. ಪಕ್ಷದ ಚಿಹ್ನೆಗೆ ಪ್ರಚಾರ ನೀಡಲು ಸರ್ಕಾರದ ಹಣ ಬಳಕೆ ಮಾಡುವುದು ಸರಿಯಲ್ಲ. ಈ ವಿಚಾರವಾಗಿ ನಮ್ಮ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಈ ವಿನ್ಯಾಸ ನಿರ್ಮಾಣ ಕೂಡಲೇ ನಿಲ್ಲಿಸಬೇಕು ಹಾಗೂ ಇದನ್ನು ಬದಲಿಸಬೇಕು. ಸರ್ಕಾರದ ಹಣದಲ್ಲಿ ನಿಮ್ಮ ಪಕ್ಷದ ಪ್ರಚಾರ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ’ ಎಂದರು.

- Advertisement -

‘ಕಾಮನ್ ಕಾಸ್ ವರ್ಸಸ್ ಬಿಎಸ್ ಪಿ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್  7-7-2016ರಂದು ಒಂದು ತೀರ್ಪು ಕೊಟ್ಟಿದೆ. ಬಿಎಸ್ ಪಿಯು ತಮ್ಮ ಪಕ್ಷದ ಚಿಹ್ನೆ ಆನೆ ಆಕಾರದಲ್ಲಿ ಹಲವು ಪ್ರತಿಮೆ ನಿರ್ಮಾಣ ಮಾಡಿದ್ದಾಗ, ರಾಜಕೀಯ ಪಕ್ಷದ ಚಿಹ್ನೆ ಪ್ರಚಾರಕ್ಕೆ ತೆರಿಗೆದಾರರ ಹಣವನ್ನು ಬಳಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಇನ್ನು ಚುನಾವಣಾ ಆಯೋಗವು, 8-10 2016ರಂದು ಈ ವಿಚಾರವಾಗಿ ಒಂದು ನಿರ್ಣಯಕೈಗೊಳ್ಳುತ್ತದೆ. ಅದೇನೆಂದರೆ, ಸಾರ್ವಜನಿಕ ಹಣ ಮತ್ತು ಜಾಗವನ್ನು ಬಳಸಿಕೊಂಡು ರಾಜಕೀಯ ಪಕ್ಷ ಅತವಾ ಅದರ ಚಿಹ್ನೆಗೆ ಪ್ರಚಾರ ನೀಡಿದರೆ, ಅದು ಪಾರದರ್ಶಕ ಚುನಾವಣೆಗೆ ವಿರುದ್ಧವಾದುದ್ದು. 1968ರ ಚುನಾವಣಾ ಚಿಹ್ನೆ ಆದೇಶದ ಪ್ಯಾರಾ 16ರ ನಿಯಮಾವಳಿ ಉಲ್ಲಂಘನೆ ಮಾಡಿದರೆ ಆ ಪಕ್ಷ ತನ್ನ ಚುನಾವಣೆ ಚಿಹ್ನೆಯನ್ನೆ ಕಳೆದುಕೊಳ್ಳಲಿದೆ. ಹೀಗಾಗಿ ಬಿಜೆಪಿ ಕೂಡಲೇ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕಮಲದ ವಿನ್ಯಾಸದಲ್ಲಿ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು. ಒಂದುವೇಳೆ ನೀವು ಇದನ್ನು ಮುಂದುವರಿಸಿದರೆ ನೀವು ನಿಮ್ಮ ಚಿಹ್ನೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಎಚ್ಚರಿಕೆ ನೀಡುತ್ತೇವೆ’ ಎಂದರು.

‘ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ಆರೋಪ ಮಾಡಿರುವುದು ಕಾಂಗ್ರೆಸ್ ಪಕ್ಷದವರಲ್ಲ. ಈ ಟೆಂಡರ್ ಕರೆಯುವ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಹೆಚ್. ವಿಶ್ವನಾಥ್ ಅವರು. ಆದರೆ ಬೊಮ್ಮಾಯಿ ಅವರು ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಹೀಗಾಗಿ ತನಿಖೆ ಅಗತ್ಯವಿಲ್ಲ ಎಂದಿದ್ದಾರೆ. ವಿಧಾನ ಪರಿಷತ್ ಸದಸ್ಯರೇ ಈ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಜಂಟಿ ಸದನ ಸಮಿತ ರಚಿಸಬೇಕು ಎಂಬುದು ಕಾಂಗ್ರೆಸ್ ಆಗ್ರಹವಾಗಿದೆ’ ಎಂದರು.

ದೂರವಾಣಿ ಕದ್ದಾಲಿಕೆ ವಿಚಾರವಾಗಿ ಶಾಸಕ ಅರವಿಂದ್ ಬೆಲ್ಲದ್ ಅವರು ಆರೋಪಿಸಿದ್ದಾರೆ. ಈ ಪ್ರಕರಣವನ್ನು ಬೊಮ್ಮಾಯಿ ಅವರು ನಗರ ಪೊಲೀಸ್ ಆಯುಕ್ತರಿಗೆ ವಹಿಸಿದ್ದಾರೆ. ಈ ಹಿಂದೆ ಇದೇ ದೂರವಾಣಿ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ನನಗೆ 28-11-2019ರಂದು ನೋಟೀಸ್ ಜಾರಿ ಮಾಡಿ 16 ತಾಸುಗಳ ಕಾಲ ವಿಚಾರಣೆ ನಡೆಸಿತ್ತು. ಆಗ ನಾನು ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಹುದ್ದೆಯಲ್ಲಿರಲಿಲ್ಲ. ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಈಗಲೂ ಅದರ ವಿಚಾರಣೆ ನಡೆಯುತ್ತಲೇ ಇದೆ. ಆಗ ಕುಮಾರಸ್ವಾಮಿ ಅವರ ವಿಚಾರಣೆ ನಡೆದಿದೆಯಾದರೆ, ಈಗ ಯಡಿಯೂರಪ್ಪನವರ ವಿಚಾರಣೆ ಯಾಕಿಲ್ಲ? ಈ ವಿಚಾರಣೆಯನ್ನು ಸಿಬಿಐಗೆ ಯಾಕೆ ವಹಿಸಿಲ್ಲ? ಆಗ ಸಿಕ್ಕಸಿಕ್ಕವರ ವಿಚಾರಣೆ ಮಾಡುತ್ತಿದ್ದ ಸಿಬಿಐ, ಈಗ ಯಾಕೆ ಮಾಡುತ್ತಿಲ್ಲ? ಹೀಗಾಗಿ ಈ ಪ್ರಕರಣ ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿದರು.

‘ಈಗ ರಮೇಶ್ ಜಾರಕಿಹೊಳಿ ಅವರು ಮತ್ತೆ ಸಚಿವರಾಗಲು ಪ್ರಯತ್ನಿಸುತ್ತಿದ್ದಾರೆ. ಇವತ್ತಿನ ಪತ್ರಿಕೆಗಳಲ್ಲಿ ಬಂದಿರುವ ವರದಿ ಪ್ರಕಾರ, ತಮಿಳುನಾಡಿನ ಮಾಜಿ ಮಂತ್ರಿಯೊಬ್ಬರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. 376 ಪ್ರಕರಣದಲ್ಲಿ ಯಾವುದೇ ಆರೋಪಿ ನಾನು ಅತ್ಯಾಚಾರ ಮಾಡಿದ್ದೇನೆ ಎಂದು ಒಪ್ಪಿಕೊಂಡಿರುವ ಉದಾಹರಣೆ ಇಲ್ಲ. ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸದೇ, ಅವರನ್ನು ಸ್ವತಂತ್ರವಾಗಿ ಬಿಟ್ಟು ಅವರು ಮತ್ತೆ ಸಚಿವರಾಗಲು ಮುಂದಾಗಿದ್ದಾರೆ ಎಂದರೆ, ಇದು ಕೇವಲ ಆ ಹೆಣ್ಣಿನ ಮೇಲಾದ ಬಲತ್ಕಾರವಲ್ಲ. ಇಡೀ ಕಾನೂನು ವ್ಯವಸ್ಥೆ ಮೇಲಿನ ಬಲತ್ಕಾರವಾಗುತ್ತದೆ. ಇದುವರೆಗೂ ಅವರ ಬಂಧನವಾಗದಿರುವುದು ದೊಡ್ಡ ತಪ್ಪು, ಇನ್ನಾದರೂ ತನಿಖಾ ಸಂಸ್ಥೆಗಳು ಬಂಧನ  ಮಾಡಿ  ವಿಚಾರಣೆ ನಡೆಸಬೇಕು’ ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಎನ್ ಎ ಹ್ಯಾರೀಸ್ ಅವರು, ‘2005ರ ಕಾಯ್ದೆ ಅನ್ವಯ ವಿಪತ್ತು ನಿರ್ವಹಣಾ ನಿಧಿಯ ಹಣವನ್ನು ಈ ವಿಪತ್ತು ನಿರ್ವಹಣೆಗಾಗಿ ಬಳಸಿಕೊಳ್ಳಬೇಕು. ಈ ಸಮಯದಲ್ಲಿ ಅದನ್ನು ಬಳಸಿಕೊಳ್ಳದಿದ್ದರೆ  ಮತ್ಯಾವಾಗ ಬಳಸಿಕೊಳ್ಳಲಾಗುತ್ತದೆ? ಕೇಂದ್ರ ಸರ್ಕಾರ ಸಂಪನ್ಮೂಲದ ಕೊರತೆ ನೆಪ ಹೇಳಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನಲ್ಲಿ ತಿಳಿಸಿದೆ. ಈ ಸರ್ಕಾರಕ್ಕೆ ಸಂಪನ್ಮೂಲ ಕ್ರೂಡಿಕರಿಸುವ ಯೋಗ್ಯತೆ ಇಲ್ಲ ಎಂದಾದರೆ ಇವರಿಗೆ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಟೀಕಿಸಿದರು.

‘ಕೋವಿಡ್ ಅಲೆ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿದ್ದರೂ ಸಾವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಕೇಂದ್ರ ಸರ್ಕಾರ ಕೋವಿಡ್ ನಿಂದ ಸತ್ತವರಿಗೆ ವಿಪತ್ತು ನಿರ್ವಹಣೆ ಕಾಯ್ದೆ ಅನ್ವಯ 4 ಲಕ್ಷ ರೂ. ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿರುವುದು ಸರಿಯಲ್ಲ. ಈ ವಿಪತ್ತಿನ ಕಾಲದಲ್ಲಿ ಹಣ ನೀಡದಿದ್ದರೆ ಆ ನಿಧಿಯನ್ನು ಬಳಸುವುದಾದರೂ ಯಾವಾಗ. ಹೀಗಾಗಿ ಕೇಂದ್ರ ಸರ್ಕಾರ ಬಡ  ಹಾಗೂ ಮಧ್ಯಮವರ್ಗದವರಿಗಾದರೂ ಪರಿಹಾರ ನೀಡಲೇ ಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ 1 ಲಕ್ಷ ರೂ. ಘೋಷಿಸಿದ್ದಾರೆ. ಈ ಸಮಯದಲ್ಲಿ ಅನೇಕ ಕುಟುಂಬಗಳಲ್ಲಿ ದುಡಿಯುವ ವ್ಯಕ್ತಿಯೇ ಮೃತಪಟ್ಟಿದ್ದು ಅವರ ಸ್ಥಿತಿ ಬೀದಿಗೆ ಬಿದ್ದಿದೆ. ಈ ಸಮಯದಲ್ಲಿ ಜನರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಈ ಸಮಯದಲ್ಲಿ ಪ್ರತಿಯೊಬ್ಬರಿಗೂ ಪರಿಹಾರ ನೀಡಬೇಕಾಗಿದೆ. ಆದರೆ ಎಲ್ಲರಿಗೂ ಆಗದಿದ್ದರೂ ಬಡ ಹಾಗೂ ಮಧ್ಯಮವರ್ಗದವರಿಗೆ ನೀಡಲೇಬೇಕು’ ಎಂದು ಒತ್ತಾಯಿಸಿದರು.

ಅತಿ ಕಡಿಮೆ ಲಸಿಕೆ ವಿತರಿಸಿದ ದೇಶ ಭಾರತ:

‘ಇಡೀ ಪ್ರಪಂಚದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಲಸಿಕೆ ವಿತರಣೆ ಮಾಡಿರುವ ದೇಶ ಎಂದರೆ ಅದು ಭಾರತ. ವಿಶ್ವದ ಇತರೆ ಎಲ್ಲ ರಾಷ್ಟ್ರಗಳು ತಮ್ಮ ಜನರಿಗೆ ಬಹುತೇಕ ಲಸಿಕೆ ಪೂರ್ಣವಾಗಿ ವಿತರಣೆ ಮಾಡಿದೆ. ರಾಜ್ಯದ 7 ಕೋಟಿ ಜನರಿಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡಲು ಖರ್ಚಾಗುವುದು ಕೇವಲ 1750 ಕೋಟಿ ಮಾತ್ರ. 2 ಲಕ್ಷ ಕೋಟಿ ರೂ. ಬಜೆಟ್ ಇರುವ ರಾಜ್ಯಕ್ಕೆ ಈ ಮೊತ್ತ ನೀಡುವುದು ಕಷ್ಟವೇ? ಇಂದು ಯೋಗ ದಿನ ಅಂಗವಾಗಿ ಸರ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಇವತ್ತು ಒಂದು ದಿನ ನೀಡಲು ಸಾಧ್ಯವಿದೆ ಎಂದಾದರೆ, ಉಳಿದ ದಿನ ನೀಡಲು ಯಾಕೆ ಆಗುವುದಿಲ್ಲ. ಇದೇ ರೀತಿ 100 ದಿನಗಳ ಕಾಲ ಲಸಿಕೆ ನೀಡಿದರೆ ರಾಜ್ಯದ ಎಲ್ಲ ಜನರಿಗೂ ಲಸಿಕೆ ಪೂರ್ಣವಾಗಿ ನೀಡಬಹುದಲ್ಲವೇ. ಸರ್ಕಾರ ಲಸಿಕೆ ನೀಡಬಹುದು ಎಂದು ತೋರಿಸಿಕೊಟ್ಟಿದೆ. ಆದರೂ ಜನರಿಗೆ ಲಸಿಕೆ ನೀಡದೇ ತನ್ನ ಅಸಮರ್ಥತೆಯನ್ನು ಪ್ರದರ್ಶಿಸುತ್ತಿದೆ’ ಎಂದರು.

‘ಕೇಂದ್ರ ಸರ್ಕಾರ ಲಸಿಕೆಗಾಗಿ 35 ಸಾವಿರ ಕೋಟಿಯನ್ನು ಬಜೆಟ್ ನಲ್ಲಿ ಮೀಸಲಿಟ್ಟಿದೆ. ಆದರೆ ಅದನ್ನು ಬಳಸುತ್ತಿಲ್ಲ. ಸರ್ಕಾರಕ್ಕೆ ಲಸಿಕೆ ನೀಡುವ ಮನಸ್ಸಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ನೆರೆ ರಾಷ್ಟ್ರದಲ್ಲಿ ನಮಗಿಂತ ಅರ್ಧದಷ್ಟಿದ್ದರೂ ನಮ್ಮಲ್ಲಿ ಮಾತ್ರ ಅದು ಕಡಿಮೆಯಾಗುತ್ತಿಲ್ಲ. ವಿಶ್ವದಲ್ಲಿ ಹಗಲು ದರೋಡೆ ಎಲ್ಲಿಯಾದರೂ ನಡೆಯುತ್ತಿದೆ ಎಂದರೆ ಅದು ಭಾರತದಲ್ಲಿ. ಜನರಿಗೆ ಮೋಸ ಮಾಡಲಾಗುತ್ತಿದೆ ಎಂದರೆ ಅದು ಭಾರತದಲ್ಲಿ ಮಾತ್ರ. ಈ ಎಲ್ಲ ವಿಚಾರವಾಗಿ ನಾವು ಹೈಕೋರ್ಟ್, ಸುಪ್ರೀಂ ಕೋರ್ಟ್ ಗಳಿಗೆ ಹೋಗಿದ್ದು, ಆಯ್ತು. ಇನ್ನೇನಿದ್ದರೂ ನಾವು ಜನತಾ ನ್ಯಾಯಾಲಯದ ಮುಂದೆ ಹೋಗಬೇಕಾಗಿದೆ’ ಎಂದರು.

‘ಮೂರನೇ ಅಲೆ ಸಮೀಪಿಸುತ್ತಿರುವಾಗ ಮಕ್ಕಳ ಆರೋಗ್ಯ ಕಾಪಾಡಲು ಅಗತ್ಯವಿರುವ ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಬಿಬಿಎಂಪಿ ಬಜೆಟ್ ಸರಿಯಾಗಿ ಬಳಕೆಯಾಗಬೇಕು:

‘ಬಿಬಿಎಂಪಿ ನೀಡಿದ ಬಜೆಟ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರ ಹಣ ನೀಡಿದೆ. ಇದು ಸಂತೋಷದ ವಿಚಾರ. ಆದರೆ ಈ ಹಣ ಪಾರದರ್ಶಕ ರೀತಿಯಲ್ಲಿ ವ್ಯಯವಾಗಬೇಕು. ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಮಾನವಾಗಿ ಅನುದಾನ ಹಂಚಿಕೆಯಾಗಬೇಕು. ಬಿಜೆಪಿ ನಾಯಕರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ, ಉಳಿದವರಿಗೆ ನೀಡದೆ ಅನ್ಯಾಯ ಮಾಡಬಾರದು. ಆದರೆ ಈ ರೀತಿಯಾಗಿ ಹೆಚ್ಚಿನ ಅನುದಾನ ನೀಡಿರುವುದು ಈ ಹಿಂದೆ ನಡೆದ ಮಿಡ್ ನೈಟ್ ಟೆಂಡರ್ ಗೆ ದಾರಿ ಮಾಡಿಕೊಡುತ್ತದೆಯಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಬಿಜೆಪಿಯ ಅವ್ಯವಹಾರಗಳ ಬಗ್ಗೆ ಬಿಜೆಪಿ ನಾಯಕರೇ ಬಹಿರಂಗವಾಗಿ ಹೇಳುತ್ತಿದ್ದಾರೆ’ ಎಂದರು.

‘ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದೆ ಅಭಿವೃದ್ಧಿ ಮಾಡುತ್ತೇವೆ ಎಂದರು. ಆದರೆ ಏನು ಮಾಡಿದರೂ? ಮೋದಿ ಅವರು ಸ್ವಚ್ಛ ಭಾರತ ಎಂದು ಅಬಿಯಾನ ಆರಂಭಿಸಿದರು. ಆದರೆ ಕೋಮುವಾದದ ವಿಷಬೀಜ ಬಿತ್ತುವ ಅವರ ಮನಸ್ಸು ಸ್ವಚ್ಛವಾಗಲಿಲ್ಲ. ಇನ್ನು ಸ್ವಚ್ಛ ಭಾರತದ ಭಾಗವಾಗಿ ಬೆಂಗಳೂರು ನಗರದ  ತ್ಯಾಜ್ಯ ವಿಲೆವಾರಿಗೆ ನಿಗಮ ಮಾಡಲು ಮುಂದಾಗಿದ್ದಾರೆ. ಬಿಬಿಎಂಪಿ ಅರುವುದೇ ಬೆಂಗಳೂರಿನ ನಿರ್ವಹಣೆಗೆ, ಹೀಗಿರುವಾಗ ಅದರೊಳಗೆ ಒಂದು ನಿಗಮ ಯಾವ ಕಾರಣಕ್ಕೆ ಎಂಬುದು ಅರ್ಥವಾಗುತ್ತಿಲ್ಲ’ ಎಂದರು.

‘ಸಂಪನ್ಮೂಲ ಕ್ರೂಡೀಕರಣ ಆಗುತ್ತಿಲ್ಲ ಎನ್ನುವ ಸರ್ಕಾರ, ಅದಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತಿಲ್ಲ. ಯೋಜನಾ ಶುಲ್ಕ ಹೆಚ್ಚಳ ಮಾಡಿದ  ಪರಿಣಾಮ ಈಗ ಅನೇಕ ಯೋಜನೆಗಳು ಬಾಕಿ ಉಳಿದಿವೆ. ಅಕ್ರಮ ಸಕ್ರಮ ಯೋಜನೆಯೂ ಸ್ಥಗಿತವಾಗಿದ್ದು, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ವಿಫಲವಾಗಿದೆ’ ಎಂದರು

Join Whatsapp